ವಿಶ್ವದ ಜೊತೆ ಪಾಲುದಾರಿಕೆ ಹೊಂದಲು ಕರ್ನಾಟಕವು ಸನ್ನದ್ಧವಾಗಿದ್ದು, ತಂತ್ರಜ್ಞಾನ ಕ್ಷೇತ್ರದ ಜೊತೆಗೆ ವ್ಯಾಪಾರ, ನಾವೀನ್ಯತೆ ಮತ್ತು ಜನರ ಜೊತೆಗಿನ ಪಾಲುದಾರಿಕೆಗೂ ತೀವ್ರ ಆಸಕ್ತಿ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನವದೆಹಲಿ : ವಿಶ್ವದ ಜೊತೆ ಪಾಲುದಾರಿಕೆ ಹೊಂದಲು ಕರ್ನಾಟಕವು ಸನ್ನದ್ಧವಾಗಿದ್ದು, ತಂತ್ರಜ್ಞಾನ ಕ್ಷೇತ್ರದ ಜೊತೆಗೆ ವ್ಯಾಪಾರ, ನಾವೀನ್ಯತೆ ಮತ್ತು ಜನರ ಜೊತೆಗಿನ ಪಾಲುದಾರಿಕೆಗೂ ತೀವ್ರ ಆಸಕ್ತಿ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
‘ಬ್ರಿಡ್ಜ್ ಟು ಬೆಂಗಳೂರು’ ಸಂವಾದ ಕಾರ್ಯಕ್ರಮ
ದೆಹಲಿಯ ಖಾಸಗಿ ಹೋಟೆಲ್ ನಲ್ಲಿ ಶುಕ್ರವಾರ ಸಂಜೆ ನಡೆದ ರಾಯಭಾರಿಗಳು ಹಾಗೂ ಹೈ ಕಮಿಷನರ್ಗಳ ಜತೆಗಿನ ‘ಬ್ರಿಡ್ಜ್ ಟು ಬೆಂಗಳೂರು’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 16,000ಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳು, 550ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳು ಮತ್ತು ಎಐ, ಬಯೋಟೆಕ್, ಬಾಹ್ಯಾಕಾಶ ಮತ್ತು ಕ್ವಾಂಟಮ್ ಪರಿಸರ ವ್ಯವಸ್ಥೆಗಳಲ್ಲಿ ಮುಂಚೂಣಿಯಲ್ಲಿರುವ ಜಾಗತಿಕ ನಾವೀನ್ಯತೆ ಕೇಂದ್ರವಾಗಿ ಕರ್ನಾಟಕ ಹೊರಹೊಮ್ಮಿದೆ ಎಂದು ಪ್ರತಿಪಾದಿಸಿದ ಸಿಎಂ, ರಾಜ್ಯದ ಪ್ರಗತಿಗೆ ಸರ್ಕಾರದೊಂದಿಗೆ ಸೇರಲು ಜಾಗತಿಕ ಪಾಲುದಾರರನ್ನು ಆಹ್ವಾನಿಸಿದರು.
ಭವಿಷ್ಯ ರೂಪಿಸುವ ನಗರ
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಕರ್ನಾಟಕವು ಜಾಗತಿಕ ನಾವೀನ್ಯತಾ ಕೇಂದ್ರ ಮತ್ತು ಹೂಡಿಕೆಯ ಆದ್ಯತಾ ತಾಣವಾಗಿರುವುದನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಬೆಂಗಳೂರು ಕೇವಲ ಭೇಟಿ ನೀಡುವ ನಗರವಲ್ಲ. ಕನಸುಗಳನ್ನು ಕಟ್ಟಿಕೊಳ್ಳುವ, ಭವಿಷ್ಯ ರೂಪಿಸುವ ನಗರವಾಗಿದೆ. ಎಲ್ಲರನ್ನೂ, ಎಲ್ಲದನ್ನೂ ಸ್ವಾಗತಿಸುವ ಅದರ ಮುಕ್ತ ಧೋರಣೆ, ಸದೃಢ ಪರಿಸರ ವ್ಯವಸ್ಥೆ ಮತ್ತು ಉತ್ತಮ ಜೀವನಮಟ್ಟದಿಂದ ಕೂಡಿದ ಜಾಗತಿಕ ಪ್ರತಿಭೆ, ನಾವೀನ್ಯತೆ ಹಾಗೂ ಹೂಡಿಕೆಗಳನ್ನು ನಿರಂತರವಾಗಿ ಸೆಳೆಯುತ್ತಾ, ಅವಕಾಶಗಳ ನಗರವಾಗಿ ಮುಂದುವರಿಯುತ್ತಿದೆ ಎಂದರು.
ಸಮಾವೇಶದಲ್ಲಿ ಮಾತನಾಡಿದ ರಾಜತಾಂತ್ರಿಕರು, ‘ಬ್ರಿಡ್ಜ್ ಟು ಬೆಂಗಳೂರುʼ ಉಪಕ್ರಮದ ಮೂಲಕ ರಾಜ್ಯ ಸರ್ಕಾರ ಕರ್ನಾಟಕವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ರಚನಾತ್ಮಕವಾಗಿ ಕಾರ್ಯೋನ್ಮುಖವಾಗಿರುವುದನ್ನು ಶ್ಲಾಘಿಸಿದರು.
ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಎಲೆಕ್ಟ್ರಾನಿಕ್ಸ್, ಐಟಿ, ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ರಾಯಭಾರಿಗಳು ಮತ್ತು ಹೈಕಮಿಷನರ್ಗಳು ಸೇರಿದಂತೆ 80ಕ್ಕೂ ಹೆಚ್ಚು ದೇಶಗಳ ಹಿರಿಯ ರಾಜತಾಂತ್ರಿಕ ಪ್ರತಿನಿಧಿಗಳು, ಜಾಗತಿಕ ಸಂಸ್ಥೆಗಳು ಮತ್ತು ಕೈಗಾರಿಕೆ ಮತ್ತು ಸರ್ಕಾರದ ಹಿರಿಯ ಪಾಲುದಾರರನ್ನು ಒಳಗೊಂಡ 140ಕ್ಕೂ ಹೆಚ್ಚು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.