ಕಂಪ್ಲಿ: ಗುರು, ಲಿಂಗ, ಜಂಗಮನಿಗಿಂತ ಕಾಯಕ ಮತ್ತು ದಾಸೋಹವೇ ಶ್ರೇಷ್ಠವೆಂದು ಇಲ್ಲಿನ ಷಾ.ಮಿಯಾಚಂದ್ ಸರ್ಕಾರಿ ಹೈಸ್ಕೂಲ್ ವಿಜ್ಞಾನ ಶಿಕ್ಷಕ ಡಾ.ಬಿ. ಸುನಿಲ್ ತಿಳಿಸಿದರು.

ತಾಲೂಕು ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಬುಧವಾರ ಪಟ್ಟಣದ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಕಚೇರಿ ಆವರಣದಲ್ಲಿ ಆಯೋಜಿಸಲಾದ 189ನೇ ಮಹಾಮನೆ ಕಾರ್ಯಕ್ರಮದಲ್ಲಿ ಶರಣರ ಕಾಯಕ ತತ್ವ ಚಿಂತನೆ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ಎಲ್ಲ ಕಾಯಕಗಳು ಸಮಾನವಾಗಿದ್ದು, ಶ್ರೇಷ್ಠ-ಕನಿಷ್ಠ ಎಂಬ ಭೇದವಿಲ್ಲ. ಯಾವುದೇ ಕೆಲಸವನ್ನು ನಿಷ್ಠೆಯಿಂದ ಮಾಡಿದಾಗ ಮಾತ್ರ ವ್ಯಕ್ತಿಯೂ, ದೇಶವೂ ಅಭಿವೃದ್ಧಿ ಹೊಂದುತ್ತವೆ. ಕೇವಲ ಹೊಟ್ಟೆಪಾಡಿಗಾಗಿ ಅಲ್ಲದೆ, ಸಮಾಜ ಮತ್ತು ದೇಶದ ಅಭಿವೃದ್ಧಿ ದೃಷ್ಟಿಯಿಂದ ಪ್ರತಿಯೊಬ್ಬರೂ ದುಡಿಯಬೇಕು. ಮೋಸ, ವಂಚನೆಗಳಿಲ್ಲದ ಸತ್ಯನಿಷ್ಠ ಕಾಯಕದಿಂದ ಗಳಿಸಿದ ಆದಾಯವನ್ನು ಸಮಾಜದ ಹಿತಕ್ಕಾಗಿ ದಾಸೋಹವಾಗಿ ಬಳಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಎಸ್. ಗಂಗಾಧರಯ್ಯ ಮಾತನಾಡಿ, ಶರಣರ ತತ್ವಗಳು ಸಮಾಜದಲ್ಲಿ ಸಮಾನತೆ, ಸಹೋದರತೆ ಮತ್ತು ಜಾತೀಯತೆ ನಿರ್ಮಾಣಕ್ಕೆ ಸಹಕಾರಿಯಾಗುತ್ತವೆ. ಶರಣ ಚಿಂತನೆ ಸರಳ ಹಾಗೂ ಅರ್ಥಪೂರ್ಣ ಜೀವನಕ್ಕೆ ದಾರಿ ತೋರಿಸುತ್ತದೆ ಎಂದರು.

ಅಕ್ಕಿಗಿರಣಿ ಮಾಲೀಕರ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಶರಣ ವಿಚಾರಧಾರೆಗಳು ಉತ್ತಮ ವ್ಯಕ್ತಿತ್ವ ರೂಪಿಸಲು ನೆರವಾಗುತ್ತವೆ. ಬಸವ ತತ್ವವನ್ನು ಅಳವಡಿಸಿಕೊಂಡವರು ಸದಾ ಸಮಾಜದ ಒಳಿತನ್ನೇ ಬಯಸುವವರು ಎಂದರು.


ಈ ಸಂದರ್ಭದಲ್ಲಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಪಿ. ಮೂಕಯ್ಯಸ್ವಾಮಿ ಹಾಗೂ ಶರಣ ಚಿಂತಕ ಡಾ. ಬಿ. ಸುನಿಲ್ ಅವರನ್ನು ಸನ್ಮಾನಿಸಲಾಯಿತು.

ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪ್ರಮುಖರಾದ ಕೆ. ಚಂದ್ರಶೇಖರ್, ವಿ. ನಾರಾಯಣರೆಡ್ಡಿ, ಚಂದ್ರಯ್ಯ ಸೊಪ್ಪಿಮಠ, ಸಜ್ಜೇದ ವೀರಭದ್ರಪ್ಪ, ಎಂ.ಮಲ್ಲಯ್ಯ, ಎಸ್.ಶಾಮಸುಂದರರಾವ್, ಸೋಗಿ ಸಂತೋಷ್, ಬೆಟ್ಟಪ್ಪ ಬಾರ್ಕೀರ, ವಿ.ಪಕ್ಕೀರಪ್ಪ, ಎಸ್.ಜೆ.ಎಂ.ಚನ್ನಬಸವಯ್ಯ, ಎ.ಗುರುಮೂರ್ತಿ, ಫಣಿ ಸೋಮಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.