ಸಾರಾಂಶ
ಕನ್ನಡಪ್ರಭ ವಾರ್ತೆ, ತರೀಕೆರೆ
ಈ ಸಾರಿ ಪ್ರಕಟಗೊಂಡ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಪಟ್ಟಣದ ಬೀದಿ ಬದಿ ಸಣ್ಣ ವ್ಯಾಪಾರಿ ಸುಬ್ರಮಣ್ಯ ಮತ್ತು ಮಂಜುಳ ಇವರ ಮಗ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಕಿರಣ್ ಕೆ.ಎಸ್. ಅವರು ವಿಜ್ಞಾನ ವಿಭಾಗದಲ್ಲಿ ಕಾಲೇಜಿಗೆ ಟಾಪರ್ ಸ್ಥಾನ ಗಳಿಸಿ ತಂದೆ ತಾಯಿಗೆ, ಪಾಠ ಹೇಳಿಕೊಟ್ಟ ಗುರುಗಳು, ಸರ್ಕಾರಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.ತಂದೆ ಸುಬ್ರಮಣ್ಯ ಅವರು ಬೀದಿ ಬದಿಯ ಗಾಡಿಯಲ್ಲಿ ಇಡ್ಲಿ ಮತ್ತಿತರ ತಿಂಡಿ ಮಾರಾಟ ಮಾಡುವ ವೃತ್ತಿಯವರು, ಪ್ರತಿನಿತ್ಯ ಕಷ್ಟಪಟ್ಟು ದುಡಿದು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಿ ವಿದ್ಯಾಭ್ಯಾಸ ಕೊಡಿಸುತ್ತಿದ್ದು, ಮಗ ಕಿರಣ್ ಕೆ.ಎಸ್. ಅವರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಕಾಲೇಜಿಗೆ ಟಾಪಾರ್ ಆಗಿರುವುದು ಸಂತೋಷ ತಂದಿದೆ ಎಂದು ಸುಬ್ರಮಣ್ಯ ತಿಳಿಸಿದ್ದಾರೆ.ಇಂಜಿನಿಯರಿಂಗ್ ಮಾಡುವ ಹಂಬಲ:ಟ್ಯೂಷನ್ ಗೂ ಹೋಗದೆ ಸರ್ಕಾರಿ ಕಾಲೇಜಿನಲ್ಲಿ ಇರುವ ಸೌಲಭ್ಯಗಳನ್ನೇ ಬಳಸಿಕೊಂಡು ವಿಜ್ಞಾನ ವಿಭಾಗದಲ್ಲಿ ಕಾಲೇಜಿಗೆ ಅತ್ಯಂತ ಹೆಚ್ಚಿನ ಅಂಕ ಗಳಿಸಿರುವ ಕಿರಣ್ ಕೆ.ಎಸ್.ಅವರು ಕಾಲೇಜಿನಲ್ಲಿ ಪ್ರಾಚಾರ್ಯರು ಮತ್ತು ಉಪನ್ಯಾಸಕರು ನಮಗೆ ಪಾಠ ಪ್ರವಚನಗಳನ್ನು ಬಹಳ ಚೆನ್ನಾಗಿ ಬೋದಿಸುತ್ತಿದ್ದರು. ಅಲ್ಲದೆ ಕಾಲೇಜಿನಲ್ಲಿ ಸುಸಜ್ಜಿತವಾದ ಪ್ರಯೋಗಾಲಯ ಕೂಡ ಇದೆ, ಹಾಗಾಗಿ ನಾನು ಉತ್ತಮ ಅಂಕ ಪಡೆಯಲು ಸಾಧ್ಯವಾಯಿತು, ನಾನು ಈಗ ಸಿಇಟಿ ಪರೀಕ್ಷೆಗೂ ಪಟ್ಟಣದಲ್ಲೇ ತರಬೇತಿ ಪಡೆಯುತ್ತಿದ್ದೇನೆ. ಸಿಇಟಿ ಪರೀಕ್ಷೆಯಲ್ಲೂ ಚೆನ್ನಾಗಿ ಅಂಕ ಪಡೆದು ಮುಂದೆ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಬೇಕು ಎಂಬ ಆಶಯ ಹೊಂದಿದ್ದೇನೆ ಎಂದು ವಿದ್ಯಾರ್ಥಿ ಕಿರಣ್ ಕೆ.ಎಸ್. ತಿಳಿಸಿದ್ದಾರೆ.ವಿಜ್ಞಾನ ವಿಷಯದಲ್ಲಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಷ್ಟ ಪಟ್ಟು ವಿದ್ಯಾಭ್ಯಾಸ ಮಾಡಿ ಕಾಲೇಜಿಗೆ ಟಾಪರ್ ಸ್ಥಾನ ಗಳಿಸಿರುವ ವಿದ್ಯಾರ್ಥಿ ಕಿರಣ್ ಕೆ,ಎಸ್ ಅವರನ್ನು ಪುರಸಭೆ ಹಿರಿಯ ಸದಸ್ಯ ಟಿ.ಜಿ.ಆಶೋಕ್ ಕುಮಾರ್ ಅಬಿನಂದಿಸಿದ್ದಾರೆ.
12ಕೆಟಿಆರ್.ಕೆ.4ಃ ಕಿರಣ್ ಕೆ.ಎಸ್.