ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಬಾನಂಗಳದಲ್ಲಿ ವಿವಿಧ ಬಗೆಯ ಗಾಳಿಪಟಗಳು ಹಾರಾಡಿದವು. ಒಂದೇ ಸ್ಥಳದಲ್ಲಿ ನಾನಾ ಕಲಾಕೃತಿಗಳ ಗಾಳಿಪಟಗಳನ್ನು ಕಂಡು ಕುಂದಾನಗರಿ ಜನರು ಕೂಡ ಮನಸೂರೆಗೊಂಡರು.ನಗರದ ಯಡಿಯೂರಪ್ಪ ಮಾರ್ಗದಲ್ಲಿರುವ ಮಾಲಿನಿ ಸಿಟಿ ಮೈದಾನದಲ್ಲಿ ಶನಿವಾರದಿಂದ ಮೂರು ದಿನಗಳ ಆರಂಭವಾಗಿರುವ 14ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಅಧಿಕೃತ ಚಾಲನೆ ದೊರೆಯಿತು. ಈ ವೇಳೆ ಹಾಲಿ ಅಯೋಧ್ಯೆ ಶ್ರೀರಾಮನ ಗಾಳಿಪಟ ಎಲ್ಲರ ಮನಸೆಳೆಯಿತು. ಗಾಳಿಪಟ ಉತ್ಸವವನ್ನು ಉದ್ಯಮಿ ಶಶಿಕಾಂತ ಸಿದ್ನಾಳ ಉದ್ಘಾಟಿಸಿದರು. ಶಾಸಕ ಅಭಯ ಪಾಟೀಲ, ಮಹಾನಗರ ಪಾಲಿಕೆ ಮೇಯರ್ ಶೋಭಾ ಸೋಮನ್ನಾಚೆ , ಉಪಮೇಯರ್ ರೇಷ್ಮಾ ಪಾಟೀಲ ಸೇರಿದಂತೆ ಪಾಲಿಕೆ ಸದಸ್ಯರು ಇದ್ದರು.
ಜ.22 ರಂದು ರಾಮಮಂದಿರ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಪ್ರಭು ಶ್ರೀರಾಮನ ಜನ್ಮಚರಿತ್ರೆ ಗಾಳಿಪಟಗಳು ಸೇರಿ ನಾನಾ ಗಾತ್ರ, ಆಕೃತಿಯ ನೂರಾರು ಗಾಳಿಪಟಗಳು ಏಕಕಾಲಕ್ಕೆ ಹಾರಾಟ ನಡೆಸಿದವು. ಸಮುದ್ರ ಕುದುರೆ, ಬಿಗ್ ಬಲೂನ್, ಅಶೋಕ ಚಕ್ರ, ರಾಷ್ಟ್ರಧ್ವಜ, ಪಕ್ಷಿ, ಫೈಟರ್ ಕೈಟ್ ಒಳಗೊಂಡು ಇತರೆ ಗಾಳಿಪಟಗಳನ್ನು ಕಂಡು ಕುಂದಾನಗರಿ ಜನತೆ ಫುಲ್ ಫಿದಾ ಆದರು.ಗಾಳಿಪಟ ಆಯೋಜಕ ಹಾಗೂ ಶಾಸಕ ಅಭಯ್ ಪಾಟೀಲ ಮಾತನಾಡಿ, 14ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಲಾಗಿದೆ. 3 ದಿನಗಳ ಕಾಲ ಗಾಳಿಪಟ ಉತ್ಸವ ನಡೆಯಲಿದೆ. ಗಾಳಿಪಟ ಉತ್ಸವದಲ್ಲಿ ಬಾಡಿ ಬಿಲ್ಡಿಂಗ್, ವುಮೆನ್ ಫೆಸ್ಟಿವೆಲ್, ಮಕ್ಕಳಿಗಾಗಿ ಚಿತ್ರಕಲೆ ಸ್ಪರ್ಧೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಅಲ್ಲದೇ ಶ್ರೀರಾಮಾಯಣದ ಶ್ರೀ ರಾಮಚಂದ್ರ ಪ್ರಭುವಿನ ಜೀವನ ಚರಿತ್ರೆಯುಳ್ಳ ಗಾಳಿಪಟಗಳು ಈ ಸಂದರ್ಭದಲ್ಲಿ ಹಾರಾಡಲಿವೆ. 15 ಅಂತಾರಾಷ್ಟ್ರೀಯ ಹಾಗೂ ದೇಶದ ನಾನಾ ರಾಜ್ಯಗಳಿಂದ ಸೇರಿದಂತೆ ಒಟ್ಟು 40 ಜನರು ಭಾಗವಹಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಪಂಜಾಬನ ವರುಣ ಚಡ್ಡಾ ಮಾತನಾಡಿ, ಗಾಳಿಪಟ ಉತ್ಸವ ಶ್ರೀ ರಾಮ ಮಂದಿರ ಉದ್ಘಾಟನೆ ವೇಳೆ ಆಯೋಜಿಸಿದ್ದು ಮತ್ತಷ್ಟು ಮೆರಗು ನೀಡಿದೆ. ನನ್ನ ಗಾಳಿಪಟದಲ್ಲಿ ಶ್ರೀರಾಮಚಂದ್ರ ಪ್ರಭುವಿದ್ದಾರೆ. ಗಾಳಿಪಟ ಹಿಂದುಗಡೆ ಶ್ರೀಕಷ್ಣಾ ಪರಮಾತ್ಮ ಕಾಣುತ್ತಾನೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಶಶಿಕಾಂತ ಸೊಡಬಾಳ, ಡಾ.ಸ್ನೇಹಾ ಗುರ್ಜರ್, ಪ್ರಿಯಾ ವೆರ್ನೆಕರ್ . ಶ್ರೀನಿವಾಸ ಪಾಟೀಲ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.