ನಾಪೋಕ್ಲು: ಸರ್ಕಾರ ಗೌಡ ಸಮಾಜಕ್ಕೆ ಜಾಗ ಮಂಜೂರು ಮಾಡಿದ್ದು ಆ ಜಾಗದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಟರ್ಫ್ ಮೈದಾನ ನಿರ್ಮಿಸಿ ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸಲಾಗುವುದೆಂದು ಎಂದು ಕೊಡಗು ಗೌಡ ಸಮಾಜದ ಅಧ್ಯಕ್ಷ ದಂಬೆಕೋಡಿ ಆನಂದ ಹೇಳಿದ್ದಾರೆ.ಮಡಿಕೇರಿ ಅರೆಭಾಷೆ ಗೌಡ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಅರೆಭಾಷೆ ಗೌಡ ಜನಾಂಗ ಬಾಂಧವರಿಗಾಗಿ (ಮಡಿಕೇರಿ) ನಗರದ ಗಾಂಧಿ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಹಬ್ಬಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕ್ರಿಕೆಟ್‌, ಹಾಕಿಯಂತೆ ಫುಟ್ಬಾಲ್ ಕೂಡ ಉತ್ತಮ ಕ್ರೀಡೆಯಾಗಿದೆ. ಈ ಒಂದು ಕ್ರೀಡೆಯಲ್ಲಿ ಯುವ ಪೀಳಿಗೆ ತೊಡಗಿಸಿಕೊಂಡು ಮುಂದೆ ಬರಬೇಕು. ಈ ನಿಟ್ಟಿನಲ್ಲಿ ಅರೆಭಾಷೆ ಗೌಡ ಸ್ಪೋರ್ಟ್ಸ್ ಅಕಾಡೆಮಿಯ ಪ್ರಯತ್ನ ಶ್ಲಾಘನೀಯವಾದುದು ಎಂದು ಹೇಳಿದರು.ಕೊಡಗು ಗೌಡ ಸಮಾಜಗಳ ಅಧ್ಯಕ್ಷ ಆನಂದ್ ಕರಂದ್ಲಾಜೆ ಮಾತನಾಡಿ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಕಳೆದ ವರ್ಷ ಕೂಡ ಉತ್ತಮ ರೀತಿಯಲ್ಲಿ ಕ್ರೀಡಾಕೂಟ ಏರ್ಪಡಿಸಲಾಗಿದ್ದು, ಅದನ್ನು ಮುಂದುವರಿಸಿಕೊಂಡು ಬರುತ್ತಿರುವುದು ಉತ್ತಮ ಕಾರ್ಯ. ಕ್ರೀಡಾಕೂಟ ಆಯೋಜನೆ ಮಾಡುವುದು ಕಷ್ಟದ ಕೆಲಸ. ಜನಾಂಗ ಬಾಂಧವರು ಸಮಯ ಮೀಸಲಿರಿಸಿಕೊಂಡು ಆಯೋಜಕರಿಗೆ ಶಕ್ತಿ ನೀಡುವ ಕೆಲಸ ಮಾಡಬೇಕೆಂದು ಹೇಳಿದರು. ಸಾಮಾನ್ಯವಾಗಿ ಮಾರ್ಚ್‌ನಿಂದ ಮೇ ತಿಂಗಳವರೆಗೆ ಕ್ರೀಡಾಕೂಟಗಳು ನಡೆಯುತ್ತವೆ. ಕ್ರೀಡಾಕೂಟಗಳಲ್ಲಿ ಪ್ರತಿಭೆಗಳನ್ನು ಗುರುತಿಸಿ ಕ್ರೀಡಾಶಾಲೆಗಳಿಗೆ ಕಳುಹಿಸುವ ಕಾರ್ಯ ಆಗಬೇಕು. ಇದಕ್ಕೆ ಒಕ್ಕೂಟದ ವತಿಯಿಂದ ಧನ ಸಹಾಯ ಮಾಡುವುದಾಗಿ ಹೇಳಿದರು.ಗೌಡ ಸ್ಪೋರ್ಟ್ಸ್ ಅಕಾಡೆಮಿ ಪದಾಧಿಕಾರಿ ಪೊನ್ನಚನ ಶ್ರೀನಿವಾಸ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರರಾದ ಬೆಪ್ಪುರನ ಅಣ್ಣಪ್ಪಕುಮಾರ್, ಪದ್ಮಪ್ರಿಯ ಸಿಂಗೂರು, ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಗೌಡ ಸಮಾಜಗಳ ಒಕ್ಕೂಟದ ಕಾರ್ಯದರ್ಶಿ ಪೇರಿಯನ ಉದಯ, ರಾಷ್ಟ್ರೀಯ ಫುಟ್ಬಾಲ್ ಆಟಗಾರ್ತಿ ಕೋಡಿ ವಿದಿತ, ಕೊಡಗು ಗೌಡ ಯುವ ವೇದಿಕೆ ಕ್ರೀಡಾ ಸಮಿತಿ ಅಧ್ಯಕ್ಷ ಕುಟ್ಟನ ಪ್ರಶಾಂತ್, ಗೌಡ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ವಿನೋದ್ ಇದ್ದರು. ಅಕಾಡೆಮಿ ಪದಾಧಿಕಾರಿ ಕಲ್ಲುಮುಟ್ಲು ಜಶ್ಮಿ ಕಾರ್ಯಕ್ರಮ ನಿರೂಪಿಸಿದರೆ, ಕುಡೆಕಲ್ ಸಂತೋಷ್ ವಂದಿಸಿದರು.

ಬಳಿಕ ಬಾಲಕರ, ಬಾಲಕಿಯರ, ಹಿರಿಯರ ಫುಟ್ಬಾಲ್ ಹಾಗೂ ಮಹಿಳೆಯರ ಹಗ್ಗ ಜಗ್ಗಾಟ ಪಂದ್ಯಾವಳಿಗಳು ನಡೆದವು. ಭಾನುವಾರ ಅಂತಿಮ ಪಂದ್ಯಾಟ ಹಾಗೂ ಹಳೆಯ ಹಾಗೂ ಸೂಪರ್ ಬೈಕ್‌ಗಳ ಪ್ರದರ್ಶನ ನಡೆಯಲಿದೆ.