ಉಡುಪಿ: ಉಡುಪಿ ಧರ್ಮಕ್ಷೇತ್ರದ ದ್ವಿತೀಯ ಧರ್ಮಾಧ್ಯಕ್ಷರಾಗಿ ನಾಳೆ (ಸೋಮವಾರ) ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ ಅವರಿಗೆ ಅಭಿಷೇಕ ಹಾಗೂ ಪೀಠಾರೋಹಣ ಸಮಾರಂಭದಲ್ಲಿ ದೇಶದ 35 ಮಂದಿ ಧರ್ಮಾಧ್ಯಕ್ಷರು 250ಕ್ಕೂ ಅಧಿಕ ಧರ್ಮಗುರುಗಳು, ಅಷ್ಟೇ ಸಂಖ್ಯೆ ಧರ್ಮಭಗಿನಿಯರು ಭಾಗವಹಿಸಲಿದ್ದಾರೆ.ಕಾರ್ಯಕ್ರಮದ ಪ್ರಧಾನ ವೇದಿಕೆಯೂ ಅಪೂರ್ವವಾಗಿ ಸಿದ್ದಗೊಂಡಿದ್ದು, ಇಲ್ಲಿ ನೂತನ ಧರ್ಮಾಧ್ಯಕ್ಷರ ಅಭಿಷೇಕ, ಪೀಠಾರೋಹಣ, ಪವಿತ್ರ ಬಲಿಪೂಜೆ ನೆರವೇರಲಿದೆ. ಬಳಿಕದ ಸಾರ್ವಜನಿಕ ಅಭಿನಂದನಾ ಸಮಾರಂಭ ಕೂಡ ಇದೇ ವೇದಿಕೆಯಲ್ಲಿ ಜರುಗಲಿದೆ.ಪೀಠಾರೋಹಣ - ಅಭಿಷೇಕವನ್ನು ಕಾರ್ಯಕ್ರಮದಲ್ಲಿ ಗೋವಾ - ದಮನ್ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಫಿಲಿಪ್ ನೆರಿ ಫೆರಾವೊ, ಬೆಂಗಳೂರು ಮಹಾಧರ್ಮಾಧ್ಯಕ್ಷ ಡಾ. ಪೀಟರ್ ಮಚಾದೊ, ಉಡುಪಿ ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿ ಡಾ. ಜೆರಾಲ್ಡ್ ಐಸಾಕ್ ಲೋಬೊ, ಭಾರತ ಮತ್ತು ನೇಪಾಳದಲ್ಲಿ ಪೋಪ್ ಅವರ ರಾಯಭಾರಿ ಡಾ. ಲಿಯೋಪೋಲ್ಡೊ ಗಿರೆಲ್ಲಿ ನಡೆಸಲಿದ್ದಾರೆಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ಮೈದಾನದಲ್ಲಿ ನಡೆಯುವ ಕ್ರೈಸ್ತ ಸಮುದಾಯಕ್ಕೆ ಅತ್ಯಂತ ಪವಿತ್ರವಾದ ಈ ಕಾರ್ಯಕ್ರಮದ ಕೊನೆಯ ಹಂತದ ಸಿದ್ದತೆಗಳು ಪೂರ್ಣಗೊಂಡಿವೆ. ಸಮಾರಂಭದಲ್ಲಿ ಸುಮಾರು 6000 ಸಾರ್ವಜನಿಕರು, ವಿವಿಧ ಸಾಮಾಜಿಕ, ರಾಜಕೀಯ ಮುಖಂಡರು ಭಾಗವಹಿಸಲಿದ್ದು, ಅತ್ಯಾಂತ ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಯುವಂತೆ ಯೋಜಿಸಲಾಗಿದೆ.ಇಲ್ಲಿನ ಸಂತೆಕಟ್ಟೆ ಬಸ್ ನಿಲ್ಡಾಣದಿಂದ ಮಿಲಾಗ್ರಿಸ್ ಪ್ರಧಾನಾಲಯಕ್ಕೆ ತೆರಳುವ ಮಾರ್ಗವನ್ನು ಸಂಪೂರ್ಣವಾಗಿ ಅಲಂಕರಿಸಲಾಗಿದ್ದು ಬೃಹತ್ ಗಾತ್ರದ ಸ್ವಾಗತ ಕಮಾನುಗಳನ್ನು ಅಳವಡಿಸಲಾಗಿದೆ. ದಾರಿಯುದ್ದಕ್ಕೂ ಶುಭಾಶಯ ಕೋರುವ ಫ್ಲೆಕ್ಸ್ ಅಳವಡಿಕೆ ಮಾಡಲಾಗಿದೆ. ಉಡುಪಿ ಧರ್ಮಪ್ರಾಂತ್ಯ: ಬೆಂಗಳೂರು ಮಹಾಧರ್ಮಪ್ರಾಂತ್ಯಕ್ಕೊಳಪಟ್ಟಿರುವ ಉಡುಪಿ ಧರ್ಮಪ್ರಾಂತ್ಯದಲ್ಲಿ ಪ್ರಥಮ ಬಿಷಪ್ ಡಾ. ಜೆರಾಲ್ಡ್ ಲೋಬೋ ಅವರ ನಿವೃತ್ತಿಯ ನಂತರ ಇದೀಗ 2ನೇ ಬಿಷಪರ ಪೀಠಾರೋಹಣ ಕಾರ್ಯಕ್ರಮ ಪ್ರಾಂತ್ಯದ ಪ್ರಧಾನ ದೇವಾಲಯ ಮಿಲಾಗ್ರಿಸ್ ಕೆಥೆಡ್ರೆಲ್‌ನಲ್ಲಿ ನಾಳೆ ನಡೆಯಲಿದೆ. ಈ ಪ್ರಾಂತ್ಯವು ಜಿಲ್ಲೆ 7 ತಾಲೂಕುಗಳ 5924 ಕಿಮಿ ವ್ಯಾಪ್ತಿಯನ್ನು ಹೊಂದಿದ್ದು, ಇಲ್ಲಿ ಸುಮಾರು 60,338 ಕ್ರೈಸ್ತಾನುಯಾಯಿಗಳು ವಾಸಿಸುತಿದ್ದು, 51 ಚರ್ಚುಗಳು, 1 ಬಸಿಲಿಕಾ, 3 ತೀರ್ಥಕ್ಷೇತ್ರ, 7 ಉಪಕೇಂದ್ರವನ್ನೊಳಗೊಂಡಿದೆ, ಈ ಪ್ರಾಂತ್ಯಕ್ಕೆ ನಾಳೆ ಡಾ. ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ ಧರ್ಮಾಧ್ಯಕ್ಷರಾಗಲಿದ್ದಾರೆ