ಮಡಿಕೇರಿ : ಜಿಲ್ಲೆಯಲ್ಲಿ ಆಟೋ ದರ ಹಾಗೂ ಮಾಂದಲ್ ಪಟ್ಟಿಗೆ ತೆರಳುವ ಬಾಡಿಗೆ ವಾಹನ ದರ ಪರಿಷ್ಕರಣೆ ಸಂಬಂಧ ‘ಉಪ ಸಮಿತಿ’ ರಚಿಸಲು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.ಕಳೆದ 12 ವರ್ಷಗಳ ಹಿಂದೆ ಆಟೋ ದರ ಪರಿಷ್ಕರಣೆ ಮಾಡಲಾಗಿದ್ದು, ಈಗಿರುವ ದರ ಸ್ವಲ್ಪವಾದರೂ ಹೆಚ್ಚಿಸಬೇಕು ಎಂದು ಆಟೋ ಚಾಲಕರು/ಮಾಲಿಕರ ಸಂಘದ ಅಧ್ಯಕ್ಷರಾದ ಮೇದಪ್ಪ ಅವರು ಸಭೆಯಲ್ಲಿ ಕೋರಿದರು. ಆಟೋ ವಾಹನ ಬಿಡಿಭಾಗಗಳ ಬೆಲೆ ಹಾಗೂ ಇಂಧನ ದರ ಹೆಚ್ಚಳವಾಗಿರುವ ಹಿನ್ನೆಲೆ ಆಟೋ ಚಾಲಕರ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಆದ್ದರಿಂದ ದರ ಹೆಚ್ಚಳ ಮಾಡಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಆಟೋ ದರ ಪರಿಷ್ಕರಣೆ ಸಂಬಂಧ ಉಪ ಸಮಿತಿ ವರದಿ ಆಧರಿಸಿ ತೀರ್ಮಾನಿಸಲಾಗುವುದು ಎಂದು ಹೇಳಿದರು. ಮಾಂದಲ್ ಪಟ್ಟಿಯಲ್ಲಿ ಸಂಚರಿಸುವ ಜೀಪು ಮಾಲೀಕರು, ಪ್ರವಾಸಿಗರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಈ ಹಿನ್ನೆಲೆ ದರ ನಿಗದಿ ಮಾಡುವಂತಾಗಬೇಕು ಎಂದು ಸಾರ್ವಜನಿಕರಿಂದ ಮನವಿ ಕೇಳಿ ಬರುತ್ತಿದ್ದು, ಈ ಸಂಬಂಧ ದರ ನಿಗದಿ ಮಾಡುವ ಬಗ್ಗೆ ಉಪ ಸಮಿತಿಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ನಿಲುಗಡೆ ನಿಯಮಕ್ಕೆ ನಿರ್ದೇಶನ: ಸಾರ್ವಜನಿಕರು ಸಂಚರಿಸುವ ರಸ್ತೆಯಲ್ಲಿ ಖಾಸಗಿ ಬಸ್ಗಳು, ಮಿನಿ ಬಸ್ಸುಗಳು, ಟ್ಯಾಕ್ಸಿ ಹಾಗೂ ಆಟೋಗಳು ಎಲ್ಲೆಂದರಲ್ಲಿ ನಿಲುಗಡೆ ಮಾಡುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಆದ್ದರಿಂದ ಕಾನೂನು ಬದ್ಧವಾಗಿ ರಸ್ತೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು. ವಾಹನಗಳ ಪರವಾನಗಿ ಇದೆಯೇ, ಇಲ್ಲವೇ ಎಂಬುದನ್ನು ಆಗಾಗ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪರೀಕ್ಷಿಸಬೇಕು. ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಸೋಮಶೇಖರ್ ಅವರು ತಾಕೀತು ಮಾಡಿದರು. ಆಟೋಗಳು ಜಿಲ್ಲೆಯಾದ್ಯಂತ ಸಂಚರಿಸಲು ಅವಕಾಶ ಮಾಡಬೇಕು ಎಂದು ಆಟೋ ಚಾಲಕರು ಮತ್ತು ಮಾಲೀಕರ ಸಂಘದವರು ಸಭೆಯಲ್ಲಿ ಕೋರಿದರು. ಇದಕ್ಕೆ ಟ್ಯಾಕ್ಸಿ ಮಾಲೀಕರ ಸಂಘದವರು ಆಕ್ಷೇಪ ವ್ಯಕ್ತಪಡಿಸಿ, ಈಗಿರುವ ವ್ಯವಸ್ಥೆ ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗಬೇಕು. ಆಟೋಗಳಿಗೆ ಜಿಲ್ಲೆಯಾದ್ಯಂತ ಸಂಚರಿಸಲು ಅವಕಾಶ ಮಾಡಬಾರದು ಎಂದು ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರ ಸಂಘದವರು ಮನವಿ ಮಾಡಿದರು.ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಮಾತನಾಡಿ, ಜಿಲ್ಲೆಯ 34 ಮಾರ್ಗದಲ್ಲಿ ಪರಿಷ್ಕೃತ ವೇಳಾ ಪಟ್ಟಿಯೊಂದಿಗೆ ಬಸ್ ಕಾರ್ಯಾಚರಣೆ ನಡೆಸಲು ಮಂಜೂರಾತಿ ನೀಡಿದ್ದು, ಈ ಸಂಬಂಧ ರಾಜ್ಯ ಉಚ್ಛ ನ್ಯಾಯಾಲಯಕ್ಕೆ ಪ್ರಕರಣ ದಾಖಲಿಸಲಾಗಿದೆ. ಶೀಘ್ರ ತೀರ್ಪು ಬರುವ ಸಾಧ್ಯತೆ ಇದೆ ಎಂದರು. ಖಾಸಗಿ ಬಸ್ ಮಾಲೀಕರ ಸಂಘದ ನಿರ್ದೇಶಕರಾದ ಪುಟ್ಟಸ್ವಾಮಿ ಮಾತನಾಡಿ ಜಿಲ್ಲೆಯಲ್ಲಿ 209 ಖಾಸಗಿ ಬಸ್ಗಳಲ್ಲಿ 151 ಖಾಸಗಿ ಬಸ್ಗಳು ಸಂಚರಿಸುತ್ತಿವೆ. ಕೋವಿಡ್ ನಂತರ ಖಾಸಗಿ ಬಸ್ ಮಾಲೀಕರ ಆರ್ಥಿಕ ಸ್ಥಿತಿ ಹೇಳತೀರದಂತಾಗಿದೆ ಎಂದು ಸಭೆಯಲ್ಲಿ ಅಲವತ್ತುಕೊಂಡರು. ಕೆಎಸ್ಆರ್ಟಿಸಿ ಪುತ್ತೂರು ಸಂಚಾರಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಶಾಂತ ಕುಮಾರ್ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಕೆಎಸ್ಆರ್ಟಿಸಿ ಬಸ್ಗಳ ಸಂಚಾರಕ್ಕೆ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಬರುತ್ತಿರುವುದರಿಂದ ಕೆಎಸ್ಆರ್ಸಿ ಬಸ್ಗಳ ಹೆಚ್ಚಿನ ಸಂಚಾರಕ್ಕೆ ಅವಕಾಶ ಮಾಡಬೇಕು ಎಂದು ಕೋರಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಮಾತನಾಡಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಸತೀಶ್ ಅವರು ಪ್ರಾದೇಶಿಕ ಸಾರಿಗೆ ಕಚೇರಿಗೆ ಸಲ್ಲಿಕೆಯಾಗಿರುವ ಮನವಿ ಮತ್ತಿತರ ವಿಷಯಗಳ ಕುರಿತು ಸಭೆಯ ಗಮನಕ್ಕೆ ತಂದರು. ಪುತ್ತೂರು ವಿಭಾಗದ ಸಂಚಾರ ನಿಯಂತ್ರಣಾಧಿಕಾರಿ ಶ್ರೀಹರಿಬಾಬು, ಕೆಎಸ್ಆರ್ಟಿಸಿ ಮಡಿಕೇರಿ ಘಟಕ ವ್ಯವಸ್ಥಾಪಕರಾದ ರಾಮಚಂದ್ ದರ್ಶನ್, ಖಾಸಗಿ ಬಸ್ ಮಾಲೀಕರ ಸಂಘದವರು, ಆಟೋ ಚಾಲಕರ ಸಂಘದವರು, ಜೀಪು/ ಟ್ಯಾಕ್ಸಿ ಸಂಘದ ಪ್ರತಿನಿಧಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು, ವಕೀಲರು ಇತರರು ಇದ್ದರು.