ಸಾರಾಂಶ
ಸರ್ವೇ ನಂ ೯೫೦ರಲ್ಲಿ ೫ ಎಕರೆ ೭ ಗುಂಟೆ ಹಾಗೂ ೯೫೨ರಲ್ಲಿ ೩ ಎಕರೆ ೨೨ ಗುಂಟೆ ಜಮೀನು ವಿಜಯನಗರದ ಅರಸರ ಕಾಲದಿಂದಲೂ ಕೋಟೆ, ಕಂದಕ ಹಾಗೂ ಪ್ರಸ್ತುತ ಸಾರ್ವಜನಿಕ ಸಂತೆ ಜಮೀನಾಗಿದೆ. ಈಗಿನ ೨೦೨೩-೨೪ರ ಆರ್ಟಿಸಿ ಕಲಂ ೦೯ರಲ್ಲಿ ಟಿಪ್ಪುಸುಲ್ತಾನ್ ವಕ್ಫ್ -ವಕ್ಫ್ ಆಸ್ತಿ’ - ಎಸ್ಟೇಟ್ ಎಂದು ಬದಲಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀರಂಗಪಟ್ಟಣ ವ್ಯಾಪ್ತಿಯ ಸರ್ವೇ ನಂ ೯೫೦, ೯೫೨ರ ಕೋಟೆ ಕಂದಕದ ಜಮೀನನ್ನು ವಕ್ಫ್ ಹೆಸರಿಗೆ ಸೇರಿಸಲಾಗಿದ್ದು, ಕೂಡಲೇ ವಕ್ಫ್ ಹೆಸರಿನಿಂದ ತೆಗೆಯಬೇಕು ಎಂದು ಶ್ರೀರಂಗಪಟ್ಟಣ ನಾಗರಿಕ ಹಿತಾಸಕ್ತಿ ವೇದಿಕೆಯ ಅಧ್ಯಕ್ಷ ಮದನ್ರಾವ್ ಆಗ್ರಹಿಸಿದರು.ಸರ್ವೇ ನಂ ೯೫೦ರಲ್ಲಿ ೫ ಎಕರೆ ೭ ಗುಂಟೆ ಹಾಗೂ ೯೫೨ರಲ್ಲಿ ೩ ಎಕರೆ ೨೨ ಗುಂಟೆ ಜಮೀನು ವಿಜಯನಗರದ ಅರಸರ ಕಾಲದಿಂದಲೂ ಕೋಟೆ, ಕಂದಕ ಹಾಗೂ ಪ್ರಸ್ತುತ ಸಾರ್ವಜನಿಕ ಸಂತೆ ಜಮೀನಾಗಿದೆ. ಈಗಿನ ೨೦೨೩-೨೪ರ ಆರ್ಟಿಸಿ ಕಲಂ ೦೯ರಲ್ಲಿ ಟಿಪ್ಪುಸುಲ್ತಾನ್ ವಕ್ಫ್ -ವಕ್ಫ್ ಆಸ್ತಿ’ - ಎಸ್ಟೇಟ್ ಎಂದು ಬದಲಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಈ ಸ್ಥಳದಲ್ಲಿ ಸಾರ್ವಜನಿಕ ಸಂತೆ ನಡೆಯುತ್ತಿದ್ದು, ಪುರಸಭೆಯಿಂದಲೇ ವಕ್ಫ್ ಬೋರ್ಡ್ಗೆ ೭ ಲಕ್ಷ ರು. ಹಣವನ್ನು ವಾರ್ಷಿಕ ಬಾಡಿಗೆ ರೂಪದಲ್ಲಿ ನೀಡಲಾಗುತ್ತಿದೆ. ೧೯೮೨-೮೩ರ ಅವಧಿಯಲ್ಲಿನ ಅಧಿಕಾರಿಗಳೋ ಅಥವಾ ಪ್ರಭಾವಿ ರಾಜಕಾರಣಿಗಳೋ ಈ ಆಸ್ತಿಯನ್ನು ವಕ್ಫ್ ಬೋರ್ಡ್ಗೆ ವರ್ಗಾಯಿಸಿದ್ದಾರೆ. ೧೯೬೭ರಲ್ಲಿ ಸರ್ವೇ ನಂ.೯೫೦ರ ಆರ್ಟಿಸಿ ಕೋಟೆದಡ ಎಂತಲೂ ಮತ್ತು ೯೫೨ರ ಆರ್ಟಿಸಿಯಲ್ಲಿ ಸರ್ಕಾರಿ ಬೀಳು ಎಂದು ನಮೂದಾಗಿದೆ ಎಂದರು.ಸರ್ಕಾರಿ ಬೀಳು, ಕೋಟೆ ಕಂದಕ ಜಮೀನು ಆರ್ಟಿಸಿ ವಕ್ಫ್ ಹೆಸರಿಗೆ ಬದಲಾಗಿದ್ದು ಹೇಗೆ. ಇದೀಗ ಅದನ್ನು ವಕ್ಫ್ ಹೆಸರಿಗೆ ಸೇರಿಸಿದ್ದು ಏಕೆ. ಸರ್ಕಾರಿ ಆಸ್ತಿಯನ್ನು ಏಕಾಏಕಿ ವಕ್ಫ್ ಹೆಸರಿಗೆ ಬದಲಿಸಲು ಬರುವುದಿಲ್ಲ. ಹಾಗಾಗಿ ಕೂಡಲೇ ಈ ಆಸ್ತಿಯನ್ನು ‘ಛೇ..ಟಿಪ್ಪುಸುಲ್ತಾನ್ ವಕ್ಫ್ -ವಕ್ಫ್ ಆಸ್ತಿ’ - ಎಸ್ಟೇಟ್ ಎಂಬುದನ್ನು ತೆಗೆದುಹಾಕಿ ಸ್ಥಳೀಯ ಪುರಸಭೆ ಅಥವಾ ಭಾರತೀಯ ಪುರಾತತ್ವ ಇಲಾಖೆಯ ಸುಪರ್ದಿಗೆ ವಹಿಸಲು ಮುಂದಾಗುವಂತೆ ಒತ್ತಾಯಿಸಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಅಭಿಷೇಕ್, ಶಿವರಾಮ್, ಶಂಕರ್ ಇದ್ದರು.