ಸಾರಾಂಶ
ಸರಗಳ್ಳತನ, ವ್ಹೀಲಿಂಗ್, ಮಾದಕ ವಸ್ತುಗಳ ಮಾರಾಟ, ಸಾಗಾಟ, ಸಂಚಾರ ನಿಯಮ ಉಲ್ಲಂಘನೆ, ಇತರೆ ಅಪರಾಧ ಕೃತ್ಯಗಳಿಗೆ ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನಗಳನ್ನು ಬಳಸುತ್ತಿದ್ದಾರೆ.
ದಾವಣಗೆರೆ : ಸರಗಳ್ಳತನ, ವ್ಹೀಲಿಂಗ್, ಮಾದಕ ವಸ್ತುಗಳ ಮಾರಾಟ, ಸಾಗಾಟ, ಸಂಚಾರ ನಿಯಮ ಉಲ್ಲಂಘನೆ, ಇತರೆ ಅಪರಾಧ ಕೃತ್ಯಗಳಿಗೆ ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನಗಳನ್ನು ಬಳಸುತ್ತಿದ್ದಾರೆ. ಈ ಕೃತ್ಯಗಳಿಗೆ ಕಡಿವಾಣ ಹಾಕಲು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಓಂಕಾರ ಬರೆದ ಬೆನ್ನಲ್ಲೇ ಪೊಲೀಸ್ ಇಲಾಖೆಯೂ ಮೈಚಳಿ ಬಿಟ್ಟು ಅಂತಹ ವಾಹನಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡಿದೆ.
ನಗರದ ಬಹುತೇಕ ಕಡೆ ದ್ವಿಚಕ್ರ ವಾಹನ, ಲಘು ವಾಹನ, ಭಾರಿ ವಾಹನ, ಸರಕು ಸಾಗಾಣಿಕೆ ವಾಹನ, ಟಿಪ್ಪರ್, ಟ್ರ್ಯಾಕ್ಟರ್ಗಳಲ್ಲಿ ನಂಬರ್ ಪ್ಲೇಟ್ ಸಹ ಗುರುತಿಸಲಾಗದಂತೆ ಇರುತ್ತದೆ. ಮತ್ತೆ ಕೆಲವನ್ನು ಬೇಕಂತಲೇ ಕೆಲವು ನಂಬರ್ಗಳು ಕಾಣದಂತೆ ನಂಬರ್ ಪ್ಲೇಟ್ ತುಂಡರಿಸಿ, ನಂಬರ್, ಇಂಗ್ಲಿಷ್ ಅಕ್ಷರಗಳು ಕಾಣದಂತೆ ವಾಹನ ನೋಂದಣಿ ಸಂಖ್ಯೆ ಕಾಣದಂತೆ ಮಾಡಿರುವುದು ಸಾಮಾನ್ಯವಾಗಿದೆ.
ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಸಂಚಾರ ಠಾಣೆ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ಗಳು ಜು.7ರಂದು ಕಾರ್ಯಾಚರಣೆ ಆರಂಭಿಸಿದ್ದರು. 30ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದು, ಮಾಲೀಕರಿಗೆ ಕೋರ್ಟ್ ಮೂಲಕ ನೋಟೀಸ್ ನೀಡಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ಡಿಸಿ ಕಾರ್ಯಾಚರಣೆ ಬೆನ್ನಲ್ಲೇ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಸಹ ನಂಬರ್ ಪ್ಲೇಟ್ ಇಲ್ಲದ ವಾಹನಗಳ ವಿರುದ್ಧ ಕಾರ್ಯಾಚರಣೆಗೆ ಕ್ರಮ ಕೈಗೊಂಡಿದ್ದರು.
ಡಿಸಿ, ಎಸ್ಪಿ ಸೂಚನೆ ಮೇರೆಗೆ ಎಎಸ್ಪಿಗಳಾದ ಪರಮೇಶ್ವರ ಹೆಗಡೆ, ಜಿ.ಮಂಜುನಾಥ, ಡಿವೈಎಸ್ಪಿ ಬಿ.ಶರಣ ಬಸವೇಶ್ವರ ಮಾರ್ಗದರ್ಶನದಲ್ಲಿ ಸಂಚಾರ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ ನಲವಾಗಲು ನೇತೃತ್ವದಲ್ಲಿ ಉತ್ತರ-ದಕ್ಷಿಣ ಸಂಚಾರ ಪಿಎಸ್ಐಗಳ ನೇತೃತ್ವದಲ್ಲಿ ಡೆಂಟಲ್ ಕಾಲೇಜು ರಸ್ತೆ, ಬಾಯ್ಸ್ ಹಾಸ್ಟೆಲ್, ಕ್ರೀಡಾ ನಿಲಯ, ಎಂಸಿಸಿ ಬಿ ಬ್ಲಾಕ್, ಶಾಮನೂರು ವರ್ತುಲ ರಸ್ತೆಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಯಿತು. 40 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿತ್ತು. ಅನಂತರ ಅವುಗಳ ಮಾಲೀಕರಿಗೆ ಹೊಸ ನಂಬರ್ ಪ್ಲೇಟ್ ಅಳವಡಿಸಿದ ನಂತರ ದಂಡ ವಿಧಿಸಿ, ನಂಬರ್ ಪ್ಲೇಟ್ ರಹಿತವಾಗಿ ವಾಹನ ಚಾಲನೆ ಮಾಡದಂತೆ ಎಚ್ಚರಿಸಿ, ಅರಿವು ಮೂಡಿಸಲಾಯಿತು.