ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ತಾಲೂಕಿನ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕುಶಾಲನಗರದ ಸ್ಮಾರ್ಟ್ ಬ್ರೈನ್ ಅಬಾಕಸ್ ಅಕಾಡೆಮಿ ಸಹಯೋಗದಲ್ಲಿ ಶಾಲೆಯ ರಾಮನುಜಂ ಗಣಿತ ಕ್ಲಬ್ ವತಿಯಿಂದ ಅಬಾಕಸ್ ಕಲಿಕಾ ಉಚಿತ ತರಬೇತಿಯ ಸಮಾರೋಪ ಸಮಾರಂಭ ಹಾಗೂ ಅಬಾಕಸ್ ಕಲಿಕೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್‍ಯಕ್ರಮ ನಡೆಯಿತು.ಕಾರ್‍ಯಕ್ರಮ ಉದ್ಘಾಟಿಸಿ ಅಬಾಕಸ್ ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಪ್ರಶಂಸನಾ ಪತ್ರ ವಿತರಿಸಿ ಮಾತನಾಡಿದ ದಾನಿ ಸೈಜನ್ ಪೀಟರ್, ಅಬಾಕಸ್ ಕಲಿಕೆಯು ಮಕ್ಕಳ ಮಾನಸಿಕ ಬೆಳವಣಿಗೆಗೆ, ಲೆಕ್ಕಾಚಾರದ ಕೌಶಲ್ಯಗಳನ್ನು ಬೆಳೆಸುವುದರೊಂದಿಗೆ ಮಕ್ಕಳ ಜ್ಞಾನ ವೃದ್ಧಿಗೆ ಸಹಕಾರಿಯಾಗಿದೆ ಎಂದರು.

ಅಬಾಕಸ್ ಕಲಿಕಾ ತರಬೇತಿಯ ಮಹತ್ವ ಕುರಿತು ಮಾಹಿತಿ ನೀಡಿದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮ ಕುಮಾರ್ , ಅಬಾಕಸ್ ಕಲಿಕೆಯು ವಿದ್ಯಾರ್ಥಿಗಳ ಏಕಾಗ್ರತೆ ಮತ್ತು ಮನಸ್ಸನ್ನು ಕೇಂದ್ರೀಕರಿಸುವ ಕೌಶಲ್ಯಗಳು ಕಲಿಕೆಯ ಒಂದು ಭಾಗವಾಗಿದೆ ಎಂದರು.

ಸ್ಮಾರ್ಟ್ ಬ್ರೈನ್ ಅಬಾಕಸ್ ಅಕಾಡೆಮಿ ನಿರ್ದೇಶಕಿ ಕುಸುಮ ಎಸ್. ರಾಜ್ ಮಾತನಾಡಿ, ಮಕ್ಕಳ ಕಲಿಕೆಯ ಪ್ರತಿಭೆಯ ಅನಾವರಣಕ್ಕೆ ಅಬಾಕಸ್ ಕಲಿಕೆಯು ಪೂರಕವಾಗಿದೆ. ಅಬಾಕಸ್ ಕಲಿಕಾ ವಿಧಾನವು ಮಕ್ಕಳು ಮಣಿಗಳು, ಸಂಖ್ಯೆಗಳು ಮತ್ತು ಬಣ್ಣಗಳ ಮೂಲಕ ಕಲಿಯುವುದನ್ನು ಆಕರ್ಷಕವಾಗಿಸುತ್ತದೆ ಎಂದರು.

ಶಾಲೆಯ ಗಣಿತ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಬಿ.ಎನ್. ಸುಜಾತ, ಅಬಾಕಸ್ ತರಬೇತುದಾರರಾದ ಕಾವ್ಯ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್‍ಯದರ್ಶಿ ಎಂ.ಟಿ. ದಯಾನಂದ ಪ್ರಕಾಶ್, ಶಿಕ್ಷಕ, ಶಿಕ್ಷಕಿಯರು ಇದ್ದರು.


ಇದೇ ಸಂದರ್ಭ ಅಬಾಕಸ್‌ನ 2, 3 ಮತ್ತು 4 ಹಂತದ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಪ್ರಶಂಸಾ ಪತ್ರ ವಿತರಿಸಲಾಯಿತು.ಸನ್ಮಾನ :

ಶಾಲೆಯಲ್ಲಿ ಮಕ್ಕಳಿಗೆ ಅಬಾಕಸ್ ಕಲಿಕಾ ತರಬೇತಿ ಸಂಘಟಿಸಲು ನೆರವು ನೀಡಿದ ದಾನಿ ಸೈಜನ್ ಪೀಟರ್, ಅಬಾಕಸ್ ಅಕಾಡೆಮಿಯ ನಿರ್ದೇಶಕಿ ಕುಸುಮ ಎಸ್. ರಾಜ್, ಅಬಾಕಸ್ ತರಬೇತಿ ಶಿಕ್ಷಕಿ ಕಾವ್ಯ ಹಾಗೂ ಶಾಲೆಯ ಗಣಿತ ಶಿಕ್ಷಕಿ ಬಿ.ಎನ್. ಸುಜಾತ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.