ಕುಶಾಲನಗರ: ಮಳೆಗೆ ವರದಿಗಾರನ ಮನೆ ಕುಸಿತ

| Published : Jun 18 2025, 12:03 AM IST

ಸಾರಾಂಶ

ಕುಶಾಲನಗರ ಪತ್ರಿಕಾ ವರದಿಗಾರ ಜಯಪ್ರಕಾಶ್‌ ಎಂಬುವರ ಮನೆ ಮಳೆಯಿಂದ ಕುಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.

ಕನ್ನಡಪ್ರಭ ವಾರ್ತೆ ಕುಶಾಲನಗರ ಕುಶಾಲನಗರದ ಪತ್ರಿಕಾ ವರದಿಗಾರ ಜಯಪ್ರಕಾಶ್ ಎಂಬುವರ ಮನೆ ಮಳೆಯಿಂದ ಕುಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಘಟನೆ ನಡೆದ ಕಾರಣ ಯಾವುದೇ ಅಪಾಯ ಉಂಟಾಗಿಲ್ಲ. ಕುಶಾಲನಗರ ಟೌನ್ ಕಾಲೋನಿಯ ಅಂಬೇಡ್ಕರ್ ಭವನದ ಸಮೀಪ ಇರುವ ಮನೆ ಸುಮಾರು ಆರು ದಶಕಗಳ ಹಿಂದೆ ನಿರ್ಮಿಸಿದ್ದು, ಮಳೆಯಿಂದ ಶಿಥಿಲಗೊಂಡು ಗೋಡೆ ಕುಸಿತ ಉಂಟಾಗಿದೆ. ಮನೆಯ ಒಳಗಿದ್ದ ಕೆಲವು ವಸ್ತುಗಳಿಗೆ ಹಾನಿ ಉಂಟಾಗಿದೆ.ತಕ್ಷಣ ಮಾಹಿತಿ ತಿಳಿದ ಕುಶಾಲನಗರ ಪುರಸಭೆ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಜೆಸಿಬಿ ಯಂತ್ರ ಬಳಸಿ ಕುಸಿದಿರುವ ಭಾಗವನ್ನು ತೆರವುಗೊಳಿಸಿದರು. ಘಟನೆ ನಡೆದ ಸಂದರ್ಭ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ಜಯಪ್ರಕಾಶ್ ಸ್ಥಳಕ್ಕೆ ತೆರಳಿದ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅದೇ ಮನೆ ಕಟ್ಟಡದಲ್ಲಿರುವ ಇನ್ನೊಂದು ಪಾರ್ಶ್ವದಲ್ಲಿ ಜಯ ಪ್ರಕಾಶ್ ಸಂಬಂಧಿಗಳು ವಾಸವಾಗಿದ್ದು ಆ ಮನೆ ಕೂಡ ಶಿಥಿಲಗೊಂಡಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕು ತಹಸೀಲ್ದಾರ್ ಕಿರಣ್ ಜಿ. ಗೌರಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ವ್ಯಕ್ತಪಡಿಸಿದ್ದಾರೆ.

-----------------------------

ಸೋಮವಾರಪೇಟೆ: ಭಾರಿ ಮಳೆಗೆ ಹಲವೆಡೆ ಹಾನಿ

ಕನ್ನಡಪ್ರಭವಾರ್ತೆ ಸೋಮವಾರಪೇಟೆತಾಲೂಕಿನ ಗ್ರಾಮೀಣ ಭಾಗದಲ್ಲಿ ಸೋಮವಾರ ರಾತ್ರಿ ಧಾರಾಕಾರ ಮಳೆ ಸುರಿದಿದ್ದು ಅಲ್ಲಲ್ಲಿ ಹಾನಿ ಸಂಭವಿಸಿದೆ.

ದೊಡ್ಡತೋಳೂರು ಗ್ರಾಮದ ದಿನೇಶ್ ಎಂಬವರ ಹಸು ಶೀತದಿಂದ ಕೊಟ್ಟಿಗೆಯಲ್ಲಿ ಮೃತಪಟ್ಟಿದೆ. ಸ್ಥಳಕ್ಕೆ ಪಶು ವೈದ್ಯರು ತೆರಳಿ ಪರಿಶೀಲಿಸಿದರು. ಕುಸೂಬೂರು ದೇವಾಲಯದ ಮುಂಭಾಗ ರಾಜ್ಯ ಹೆದ್ದಾರಿಯ ಸಮೀಪ ವಿದ್ಯುತ್ ಕಂಬದ ಮೇಲೆ ಮರಬಿದ್ದು ಹಾನಿಯಾಗಿದೆ. ಸ್ಥಳಕ್ಕೆ ಬಂದ ಸೆಸ್ಕ್ ಸಿಬ್ಬಂದಿ ಬಸ್ಸನ್ನೇರಿ ತಂತಿಯನ್ನು ಸರಿಪಡಿಸಿದರು.

ಸೋಮವಾರಪೇಟೆಯ ನಗರೂರು ಗ್ರಾಮದ ನ್ಯಾಯಾಲಯದ ಬಳಿ ಮುರಿದು ಬಿದ್ದಿದ್ದ ವಿದ್ಯುತ್ ಕಂಬವನ್ನು ಸೆಸ್ಕ್ ಸಿಬ್ಬಂದಿಗಳು ಸರಿಪಡಿಸಿದರು.ಕಳೆದ 24 ಗಂಟೆಗಳಲ್ಲಿ ಶಾಂತಳ್ಳಿ ಹೋಬಳಿಗೆ 140 ಮಿ.ಮೀಟರ್, ಸೋಮವಾರಪೇಟೆ 74, ಶನಿವಾರಸಂತೆಗೆ 48, ಕೊಡ್ಲಿಪೇಟೆಗೆ 35. 4 ಮಿ.ಮಿ ಮಳೆಯಾಗಿದೆ.