ಅರಿವಿನ ಕೊರತೆ ಸನಾತನ ಧರ್ಮದ ನಾಶದ ಮಾತು: ಸಿ.ಟಿ ರವಿ
KannadaprabhaNewsNetwork | Published : Oct 17 2023, 12:30 AM IST
ಅರಿವಿನ ಕೊರತೆ ಸನಾತನ ಧರ್ಮದ ನಾಶದ ಮಾತು: ಸಿ.ಟಿ ರವಿ
ಸಾರಾಂಶ
ಧರ್ಮದ ಉಳಿವಿಗೆ ಯಾರಿರಬೇಕೆಂದು ಅರಿತು ಮತ ಚಲಾಯಿಸಿ, ಲಿಂಗಸುಗೂರಲ್ಲಿ ಕೃತಿ ಬಿಡುಗಡೆ ಮಾಡಿದ ಬಿಜೆಪಿ ಹಿರಿಯ ಮುಖಂಡ
ಲಿಂಗಸುಗೂರು: ಪ್ರಪಂಚಕ್ಕೆ ಭಕ್ತಿ, ಜ್ಞಾನ, ವಿಜ್ಞಾನ ಸೇರಿದಂತೆ ಮಾನವ ಕಲ್ಯಾಣಕ್ಕಾಗಿ ಇರುವ ಸನಾತನ ಧರ್ಮದ ನಾಶ ಮಾಡುವ ಮಾತುಗಳು ಆಡುತ್ತಿರುವುದು ಇದಕ್ಕೆ ಅರಿವಿನ ಕೊರತೆಯೇ ಕಾರಣವಾಗಿದೆ. ಇದರಿಂದ ಹಿಂದುಗಳು ಶಾಸ್ತ್ರದ ಜೊತೆಗೆ ಶಸ್ತ್ರವನ್ನು ಹಿಡಿಯಬೇಕಿದೆ ಎಂಬುದು ಶರನ್ನವರಾತ್ರಿ ನಮಗೆ ಎಚ್ಚರಿಸುತ್ತಿದೆ ಎಂದು ಬಿಜೆಪಿ ಹಿರಿಯ ನಾಯಕ ಸಿ.ಟಿ ರವಿ ಹೇಳಿದರು. ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಅರಿವಿ ದಿವಿಗೆ ಎಂಬ ಕೃತಿ ಲೋಕರ್ಪಣೆ ಮಾಡಿ ಬಳಿಕ ಮಾತನಾಡಿದ ಅವರು, ಭಾರತದಲ್ಲಿ ಸನಾತನ ಧರ್ಮ ಉಳಿಯಲು ನಿರಂತರ ಸಂಘರ್ಷ ನಡೆಸಲಾಗಿದೆ. ಸಂತ, ಮಹಾಂತರ ಭಕ್ತಿ ಹಾಗೂ ಶಕ್ತಿಯಿಂದ ಸನಾತನ ಧರ್ಮ ಉಳಿದ ರಾಷ್ಟ್ರ ಭರತ ಖಂಡವಾಗಿದೆ. ಜಗತ್ತಿನ ಕಲ್ಯಾಣ, ಬದುಕಿ ಸಾಕ್ಷಾತ್ಕಾರಕ್ಕಾಗಿ ಧರ್ಮ, ಸಂಸ್ಕೃತಿಕ, ಹಬ್ಬಗಳ ಆಚರಣೆ ಅಗತ್ಯವಾಗಿದೆ. ಅರಿವಿನ ಕೊರತೆಯಿಂದ ಅನೇಕರು ಸನಾತನ ಧರ್ಮದ ನಾಶ ಮಾಡುವ ಮಾತನಾಡುತ್ತಿದ್ದಾರೆ. ಸನಾತನ ಧರ್ಮ ನಾಶವಾದರೆ ಉಳಿಯುವುದೇ ಅಧರ್ಮವಾಗಿದೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು. ಹಿಂದು ಧರ್ಮದ ಮೇಲೆ ಅನೇಕರು ದಾಳಿ ಮಾಡಿದ್ದಾರೆ. ದೇಶದಲ್ಲಿ ಧರ್ಮ, ಜಾತಿಗಳ ನಡುವೆ ಜಗಳ ಹಚ್ಚಿ ದೇಶ ಒಡೆಯುವ ತುಕಡೆ ಗ್ಯಾಂಗ್ಗಳ ಬಗ್ಗೆ ಎಚ್ಚರಿಕೆ ಅಗತ್ಯವಾಗಿದೆ. ದೇಶ, ಧರ್ಮವನ್ನು ನಾಶ ಮಾಡುವವರ ವಿರುದ್ಧ ಇಂದು ಯುದ್ಧ ಮಾಡಬೇಕಿಲ್ಲ. ಬದಲಾಗಿ ದೇಶದಲ್ಲಿ ಧರ್ಮದ ಉಳಿವಿಗೆ ಯಾರು ಇರಬೇಕೆಂದು ಯೋಚಿಸಿ ಮತ ಚಲಾಯಿಸದಾಗ ಧರ್ಮ ಉಳಿಯುತ್ತದೆ. ಇಲ್ಲದಿದ್ದರೆ ದೇಶಕ್ಕೆ ಆಪತ್ತು ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದರು. ತುಳಿತಕ್ಕೆ ಒಳಗಾದ ಜನರಿಗೆ ಅನುಕೂಲವಾಗಲು ಜಾತಿ ಗಣಿತಿ ವರದಿ ಜಾರಿಗೆ ತಂದರೆ ನಮ್ಮ ತಕರಾರು ಇಲ್ಲ. ಆದರೆ ಜಾತಿ ಗಣಿತಿ ವರದಿ ಜಾರಿ ನೆಪದಲ್ಲಿ ಜನರನ್ನು ಹೊಡೆಯುವ ಪ್ರಯತ್ನ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಹೇಳಿದರು. ಸಮಾರಂಭದಲ್ಲಿ ರಂಭಾಪುರಿ ಜಗದ್ಗುರು ಡಾ.ವೀರ ಸೋಮೇಶ್ವರ ಶಿವಾಚಾರ್ಯರು, ಶಿವಲಿಂಗ ಶಿವಾಚಾರ್ಯ, ವಿರುಪಾಕ್ಷ ಪಂಡಿತಾರಾದ್ಯ, ಸೋಮನಾಥ ಶ್ರೀ ಕಣ್ನೂರು, ಗುರುಶಿದ್ದೇಶ್ವರ ಶ್ರೀ, ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಮಾನಪ್ಪ ವಜ್ಜಲ್, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ, ಬಸವಂತರಾಯ ಕುರಿ, ಶಾಂತಾ ಆನಂದ, ವಿಶ್ವೇಶ್ವರಯ್ಯ ಹಿರೇಮಠ, ಮಲ್ಲಿಕಾರ್ಜುನ ಹೂಗಾರ, ಷಣ್ಮುಖಯ್ಯ ಹಿರೇಮಠ, ಸಂಗಪ್ಪ ಸಜ್ಜನ್, ನೀಲಾ ಮಲ್ಲಿಕಾರ್ಜು ಸೇರಿದಂತೆ ಇದ್ದರು.