ಸಾರಾಂಶ
ಮುರುಘಾಮಠದಲ್ಲಿ ನಡೆದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಶಿವಯೋಗಿ ಸಿ.ಕಳಸದ ಹೇಳಿಕೆ ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ದೇಶದಲ್ಲಿ ವಾರ್ಷಿಕ ಸರಾಸರಿ ಹತ್ತು ಲಕ್ಷ ಮದುವೆಗಳಾಗುತ್ತಿದ್ದು ದುಂದು ವೆಚ್ಚದ ಹೆಸರಲ್ಲಿ 20 ಲಕ್ಷ ಕೋಟಿ ರು ವ್ಯಯ ಮಾಡಲಾಗುತ್ತಿದೆ ಎಂದು ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ ಹೇಳಿದರು.ನಗರದ ಬಸವಕೇಂದ್ರ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಬುಧವಾರ ನಡೆದ 35ನೇ ವರ್ಷದ ಮೂರನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಭಾಗವಹಿಸಿ ಆರ್ಥಿಕ ಹೊರೆ ತಗ್ಗಿಸಿಕೊಳ್ಳುವ ಅಗತ್ಯವಿದೆ ಎಂದರು.
ಬದುಕು ಎಂದರೆ ಬರೀ ಘರ್ಷಣೆ ಅಲ್ಲ. ಅದು ಪ್ರೀತಿ ಬಂಧುತ್ವದ ಸಂಕೇತ. ಪ್ರತಿಯೊಬ್ಬರು ದ್ವೇಷ ಅಸೂಯೆಗಳನ್ನು ಬದಿಗಿಟ್ಟು ಸಮರಸ ಜೀವನ ನಡೆಸುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ ಸರಳ ಸಾಮೂಹಿಕ ವಿವಾರದಲ್ಲಿ ವಧು-ವರರನ್ನು ಜೋಡಿಸುವುದಲ್ಲ. ಮನಸ್ಸುಗಳನ್ನು ಕುಟುಂಬಗಳನ್ನು ಒಂದುಗೂಡಿಸುವ ಕಾರ್ಯ ನಡೆಯುತ್ತಿದೆ. ಶ್ರೀಮಠವು ಬಸವ ಚಿಂತನೆಗಳ ಮೂಲಕ ಮುನ್ನಡೆಯುತ್ತಿದೆ ಎಂದರು.ಮುರುಘಾಮಠದ ಎಲ್ಲಾ ಶಾಖಾಮಠಗಳ ಸ್ವಾಮಿಗಳು ತಮ್ಮ ಮಠಗಳಲ್ಲಿ ಕಲ್ಯಾಣ ಮಹೋತ್ಸವವನ್ನು ನಡೆಸಬೇಕು. ಮಠ-ಮಠಗಳು ಒಂದುಗೂಡಿ ಸಮಾಜದ ಸ್ವಾಸ್ಥ್ಯಕ್ಕಾಗಿ ಯೋಚಿಸಬೇಕಾಗಿದೆ. ಅನಗತ್ಯವಾಗಿ ಖರ್ಚು ಆಗುವುದನ್ನು ನಿಲ್ಲಿಸಬೇಕಿದೆ. ಆ ಹಣವನ್ನು ಒಳ್ಳೆಯ ಕಾರ್ಯಯೋಜನೆಗಳಿಗೆ ಬಳಸಕೊಳ್ಳಬಹುದು. ಬಡವರ ಬದುಕಿಗೆ ಬೆಳಕಾಗಬೇಕು. ನೊಂದವರ ಜೀವನದಲ್ಲಿ ಒಂದಿಷ್ಟು ಭರವಸೆ ಮೂಡಿಸಬೇಕು. ಅಂತಹವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಎಲ್ಲರನ್ನು ನಮ್ಮವರಂತೆ ಕಾಣಬೇಕು. ನಾವು ಬದುಕಬೇಕು, ಇತರರನ್ನು ಬದುಕಲು ಬಿಡಬೇಕು ಎಂದು ಹೇಳಿದರು.
ಗುರುಮಠಕಲ್ನ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ, 5ನೇ ತಾರೀಕು ಬಂದರೆ ಚಿತ್ರದುರ್ಗದ ಮುರುಘಾಮಠವು ಜ್ಞಾಪಕಕ್ಕೆ ಬರುತ್ತದೆ. ಶ್ರೀಮಠಕ್ಕೆ ನಾಲ್ಕುನೂರು ವರ್ಷಗಳ ಇತಿಹಾಸವಿದೆ. ಶ್ರೀಮಠವು ಕಳೆದ 35 ವರ್ಷಗಳಿಂದ ಸಾಮೂಹಿಕ ಕಲ್ಯಾಣ ಮಹೋತ್ಸವ ನೆರವೇರಿಸುತ್ತ ಬರುತ್ತಿದೆ. ಅದರ ಸದುಪಯೋಗವನ್ನು ಈ ಭಾಗದ ಜನತೆ ಪಡೆಯುತ್ತಿರುವುದು ಶ್ರೀಮಠದ ಜನಪರ ಕಾಳಜಿ ಸಾರ್ಥಕತೆ, ಸಫಲತೆ ಕಂಡಂತಾಗಿದೆ ಎಂದರು.ಜೆಡಿಯು ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಮಹಿಮಾ ಜೆ.ಪಟೇಲ್ ಮಾತನಾಡಿ, ನವ ವಧು-ವರರ ಜೀವನ ಮುಂದಿನ ದಿನಗಳಲ್ಲಿ ಸುಖಮಯವಾಗಿರಲಿ. ಕಲ್ಯಾಣ ಎಂದರೆ ಎಲ್ಲರಿಗೂ ಒಳ್ಳೆಯದಾಗುವುದು. ಒಳ್ಳೆಯ ಭಾವನೆಗಳನ್ನು ನಮ್ಮೊಳಗೆ ತುಂಬಿಕೊಳ್ಳುವುದು. ಶ್ರೀಮಠಕ್ಕೆ ದೊಡ್ಡ ಇತಿಹಾಸ ಇದೆ. ನಮ್ಮ ಪೂರ್ವಜರು ಶ್ರೀಮಠಕ್ಕೆ ನಡೆದುಕೊಂಡು ಬಂದಿದ್ದಾರೆ. ಎಲ್ಲ ಮಠಗಳು ಒಟ್ಟಾಗಿ ಸರ್ವೋದಯದ ಭಾವನೆ ಮೂಡಿಸಬೇಕೆಂದರು.
ಕರ್ನಾಟಕದ ಐದುನೂರು ಸ್ವಾಮಿಗಳು ಸೇರಿ ಚಿತ್ರದುರ್ಗದಲ್ಲಿ 10 ಕಿಲೋಮೀಟರ್ ಪಾದಯಾತ್ರೆ ಮಾಡಬೇಕಿದೆ. ಆಡಳಿತ, ಕೃಷಿ, ಪರಿಸರ, ಆರೋಗ್ಯ - ಈ ಕಲ್ಪನೆಯಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಬೇಕು. ಇದು ಸರ್ವೋದಯದ ಕಲ್ಪನೆಯಲ್ಲಿ ಮೂಡಿಬರಬೇಕಿದೆ. ಅದುವೇ ಸಾವಯವ ರಾಜಕಾರಣವಾಗಬೇಕು. ರಾಜಕಾರಣದಲ್ಲಿ ಬೆಳಕನ್ನು ಹಚ್ಚಬೇಕು. ಎಲ್ಲರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಯಬೇಕಿದೆ ಎಂದರು.ಡಾ. ನಾಗರಾಜ ಮಾಲೂರು ಮಾತನಾಡಿದರು.ಇದೇ ಸಂದರ್ಭದಲ್ಲಿ 12 ಜೋಡಿಗಳು ದಾಂಪತ್ಯಕ್ಕೆ ಅಡಿ ಇಟ್ಟರು.ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಎಸ್.ಎನ್ ಚಂದ್ರಶೇಖರ್, ಶ್ರೀ ಬಸವ ಕಬೀರ ಸ್ವಾಮಿಗಳು, ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮಿಗಳು, ಶ್ರೀ ಕುಂಬಾರ ಗುಂಡಯ್ಯ ಸ್ವಾಮಿಗಳು, ಶ್ರೀ ಬಸವ ಮಹಾಂತ ಸ್ವಾಮಿಗಳು, ಶ್ರೀ ಬಸವ ನಿರಂಜನ ಸ್ವಾಮಿಗಳು, ಶ್ರೀ ಚೆನ್ನಬಸವ ಸ್ವಾಮಿಗಳು, ಪೈಲ್ವಾನ್ ತಿಪ್ಪೇಸ್ವಾಮಿ ಇದ್ದರು. ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮಿಗಳು ಸ್ವಾಗತಿಸಿದರು.