ಕನ್ನಡಪ್ರಭ ವಾರ್ತೆ ಬೆಳಗಾವಿ

ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಸೂಕ್ತ ಜಾಗೆಯಲ್ಲಿ ಮರುಸ್ಥಾಪನೆ ಮಾಡಲು ಕನ್ನಡ ಸಂಘಟನೆಗಳ ಮುಖಂಡರಿಂದ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸಲಹೆ ನೀಡಲಾಯಿತು. ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ನವೀಕರಣ ಸ್ಥಳಕ್ಕೆ ಆಗಮಿಸಿದ ಕರವೇ ಹಿರಿಯ ಮುಖಂಡರು ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಆವರಣದೊಳಗೆ ಸೂಕ್ತ ಸ್ಥಳದಲ್ಲಿ ಮರುಸ್ಥಾಪಿಸುವಂತೆ ಸಲಹೆ ನೀಡಿದರು.

ಸದ್ಯ ಮುಖ್ಯ ದ್ವಾರದ ಬಳಿ ಪ್ರತಿಷ್ಠಾಪಿಸಲು ಸಿದ್ಧತೆ ಮಾಡಲಾಗಿದೆ. ಈ ಸ್ಥಳವು ಜಿಲ್ಲಾಧಿಕಾರಿ ಕಚೇರಿ ಮುಂದಿನ ಮುಖ್ಯ ರಸ್ತೆಗೆ ಹೊಂದಿಕೊಂಡಿದೆ. ಶೀಘ್ರವೇ ರಸ್ತೆ ಮೇಲ್ಸೇತುವೆ ನಿರ್ಮಾಣ ಕಾರ್ಯ ಆರಂಭವಾಗಲಿದ್ದು, ಮತ್ತೆ ಹಲ್ಮಿಡಿ ಶಾಸನದ ಸ್ಥಳಾಂತರ ಮಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಧ್ವಜದ ಕಟ್ಟೆಯ ಸಮೀಪವೇ ತಳಕಟ್ಟೆಯನ್ನು ಸುಂದರವಾಗಿ ನಿರ್ಮಿಸಿ, ಸುತ್ತಲೂ ಸರಪಳಿ ಹಾಕಿ ಹಲ್ಮಿಡಿ ಶಾಸನವನ್ನು ಪೂರ್ವಭಿಮುಖವಾಗಿ ಕೂಡಿಸುವಂತೆ ಅಧಿಕಾರಿಗಳಿಗೆ ಕರವೇ ಮುಖಂಡರು ತಿಳಿಸಿದರು.

ಈ ವೇಳೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಮಹಾದೇವ ತಳವಾರ, ಸರ್ವೋದಯ ಸಂಘದ ಅಧ್ಯಕ್ಷ ಶ್ರೀನಿವಾಸ ತಾಳೂಕರ ಹಾಗೂ ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ ಸೇರಿ ಇತರರು ಇದ್ದರು.