ಕನ್ನಡಪ್ರಭ ವಾರ್ತೆ ಯಲ್ಲಾಪುರ
ಮಾನವನ ಬದುಕಿನಲ್ಲಿ ಪರಿಸರದಲ್ಲಿರುವ ಗುಬ್ಬಚ್ಚಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂಗಮೇಶ ಪ್ರಭಾಕರ್ ಹೇಳಿದರು.ತಾಲೂಕಿನ ಹಿತ್ಲಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ಪೇರೋ ಕನ್ಸರ್ವೇಶನ್ ಫೌಂಡೇಶನ್ ಹಾಗೂ ಅರಣ್ಯ ಇಲಾಖೆ ಹಾಗೂ ವನಸಿರಿ ವಿಜ್ಞಾನ ಸಂಘ ಮತ್ತು ಇಕೋ ಕ್ಲಬ್ ಹಮ್ಮಿಕೊಂಡಿದ್ದ ''''ಪರಿಸರದಲ್ಲಿ ಗುಬ್ಬಚ್ಚಿಗಳ ಮಹತ್ವ ಹಾಗೂ ಅವುಗಳ ಸಂರಕ್ಷಣೆ'''' ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅತಿಯಾದ ರಾಸಾಯನಿಕಗಳ ಬಳಕೆ, ಆಧುನೀಕರಣದ ಅಳವಡಿಕೆ ಹಾಗೂ ಶಬ್ದ ಮಾಲಿನ್ಯಗಳಿಂದಾಗಿ ಗುಬ್ಬಚ್ಚಿಗಳು ಕ್ಷೀಣಿಸುತ್ತಿವೆ. ಆದ್ದರಿಂದ ಗುಬ್ಬಚ್ಚಿಗಳ ಸಂತಾನ ಅಭಿವೃದ್ಧಿಯ ಬಗ್ಗೆ ಗಂಭೀರ ಚಿಂತನೆ ಅತ್ಯಗತ್ಯವಾಗಿದೆ ಎಂದು ಹೇಳಿದರು.ಗುಬ್ಬಚ್ಚಿಗಳು ಕ್ರಿಮಿ-ಕೀಟಗಳ ನಿಯಂತ್ರಿಸುತ್ತವೆ. ಕೃಷಿ ಭೂಮಿಯಲ್ಲಿನ ಸಣ್ಣ ಸಣ್ಣ ಹುಳುಗಳನ್ನು ತಿನ್ನುತ್ತವೆ. ಗುಬ್ಬಚ್ಚಿಗಳ ಗಾತ್ರ ಚಿಕ್ಕದಾದರೂ ಅವುಗಳ ಪಾತ್ರ ಪರಿಸರಕ್ಕೆ ಮಹತ್ವದ್ದಾಗಿದೆ. ಗುಬ್ಬಚ್ಚಿಗಳಿಂದ ಬೀಜ ಪ್ರಸರಣ ಕ್ರಿಯೆಯು ಹೇರಳವಾಗಿ ನಡೆಯುವುದರಿಂದ ಸಸ್ಯಗಳ ಸಂತಾನೋತ್ಪತ್ತಿಗೆ ಸಹಾಯ ಮಾಡುವುದು. ಬೇಸಿಗೆಯ ಕಾಲದಲ್ಲಿ ಗುಬ್ಬಚ್ಚಿಗಳಿಗೆ ನೀರಿನ ದಾಹ ತೀರಿಸಲು ತಮ್ಮ ತಮ್ಮ ಮನೆಯ ಅಂಗಳದಲ್ಲಿ, ಮನೆಯ ತಾರಸಿಯ ಮೇಲೆ ನೀರಿನ ಸಣ್ಣ ಸಣ್ಣ ತೊಟ್ಟಿಗಳನ್ನು ನಿರ್ಮಿಸಿ ಗುಬ್ಬಚ್ಚಿಗಳಿಗೆ ಸಹಕರಿಸಿ ಎಂದ ಅವರು, ಗುಬ್ಬಚ್ಚಿಗಳ ವರ್ತನೆ, ಆಹಾರ ಪದ್ಧತಿ, ಜೀವನ ಶೈಲಿಯ ಕುರಿತು ವಿದ್ಯಾರ್ಥಿಗಳಿಗೆ ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡರು.
ಗುಬ್ಬಚ್ಚಿಯ ಜೀವನ ಶೈಲಿಯ ವಿಡಿಯೋ ಪ್ರದರ್ಶನ ಮಾಡಲಾಯಿತು. ಆನಂತರ ಗುಬ್ಬಚ್ಚಿಗಳ ಸಂರಕ್ಷಣೆಗಾಗಿ ಕೃತಕವಾಗಿ ಬಿದಿರಿನಿಂದ ತಯಾರಿಸಿದ ಪರಿಸರ ಸ್ನೇಹಿಯಾದ ಗೂಡುಗಳನ್ನು ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ವಿತರಿಸಿದರು.ಹಿತ್ಲಳ್ಳಿ ಪ್ರೌಢಶಾಲಾ ಮುಖ್ಯಾಧ್ಯಾಪಕಿ ನೀತು ಹಬ್ಬು, ಮಂಚೀಕೇರಿ ವಲಯಾರಣ್ಯಾಧಿಕಾರಿ ಬಸವರಾಜ್ ಬೋಚಳ್ಳಿ, ಉಪವಲಯ ಅರಣ್ಯಧಿಕಾರಿಗಳಾದ ಬೀರಪ್ಪ, ಜ್ಯೋತಿ, ಸಲ್ಮಾನ್ ಹಾಗೂ ಸಿಬ್ಬಂದಿ ವಿಶ್ವನಾಥ್, ಶಂಕರ್, ರಾಜಶೇಖರ್ ಉಪಸ್ಥಿತರಿದ್ದರು.