ರಟ್ಟೀಹಳ್ಳಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೂರದೃಷ್ಟಿಯನ್ನಿಟ್ಟುಕೊಂಡು ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಉತ್ತಮ ವೇದಿಕೆಯನ್ನು ಕಲ್ಪಿಸುವ ಸಲುವಾಗಿ, ಪ್ರತಿ ತಾಲೂಕು ಮತ್ತು ಜಿಲ್ಲಾ ಮಟ್ಟಗಳಲ್ಲಿ ಸಂಸದರ ಕ್ರೀಡಾ ಮಹೋತ್ಸವವನ್ನು ಆಯೋಜಿಸಲಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಪಟ್ಟಣದ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ರಟ್ಟೀಹಳ್ಳಿ-ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಸಂಸದರ ಕ್ರೀಡಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಜಿಲ್ಲಾ ಮಟ್ಟ ನಂತರ ಅಲ್ಲಿ ಆಯ್ಕೆಯಾದ ತಂಡವನ್ನು, ದೆಹಲಿಯಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗುವುದು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮೊದಲು ಫಿಟ್ ಇಂಡಿಯಾ ನಂತರ ಖೇಲೋ ಇಂಡಿಯಾ ಆ ನಂತರ ಟೋಕಿಯೋ ಒಲಿಂಪಿಕ್ಸ ಸಮಯದಲ್ಲಿ ಜೀತೋ ಇಂಡಿಯಾ ಎಂಬ ಘೋಷವಾಕ್ಯಗಳಿಂದ ಪ್ರೇರಣೆಗೊಂಡ ಕ್ರೀಡಾ ಪಟುಗಳು ಪ್ರಪ್ರಥಮ ಬಾರಿಗೆ ಭಾರತಕ್ಕೆ 34 ಪದಕಗಳನ್ನು ಗೆಲ್ಲಲು ಸಹಾಯಕಾರಿಯಾಯಿತು. ದಿವ್ಯಾಂಗರ ಒಲಿಂಪಿಕ್ಸ ಸಮಯದಲ್ಲೂ ಭಾರತಕ್ಕೆ ಅತೀ ಹೆಚ್ಚು ಪದಕಗಳನ್ನು ಗೆಲ್ಲಲು ಸಹಾಯಕಾರಿಯಾಯಿತು. ಇದು ನಮ್ಮ ನರೇಂದ್ರ ಮೋದಿಯವರ ಶಕ್ತಿ ಎಂದು ಸಂತನ ವ್ಯಕ್ತಪಡಿಸಿದರು.

ಮನುಷ್ಯನಲ್ಲಿ ಅತ್ಯಂತ ಮುಖ್ಯವಾಗಿ ಉತ್ತಮ ಗುಣಗಳಿರಬೇಕು, ಅಂತಹ ಗುಣಗಳನ್ನು ಹೊಂದಲು ಪ್ರತಿಯೊಬ್ಬರು ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು, ಕ್ರೀಡಾ ಮನೋಭಾವದಿಂದ ಅವನಲ್ಲಿ ಶಿಸ್ತು ಬರುತ್ತದೆ, ಶಿಸ್ತಿನಿಂದ ಇದ್ದವ ಉತ್ತಮ ಆರೋಗ್ಯ ಹೊಂದಲು ಸಾಧ್ಯ, ಉತ್ತಮ ಆರೋಗ್ಯ ಇದ್ದವ ಒಳ್ಳೆಯ ಚಿಂತನೆಗಳನ್ನು ಬೆಳೆಸಿಕೊಳ್ಳುವ, ಹೀಗೆ ಕ್ರೀಡೆಗಳಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಾಯಕಾರಿಯಾಗುವುದು ಎಂದರು.

ಪ್ರತಿಯೋಬ್ಬ ಕ್ರೀಡಾ ಪಟುಗಳು ಕ್ರೀಡೆಯಲ್ಲಿ ಸೋಲಬಾರದೆಂಬ ಉದ್ದೇಶದಿಂದ ಆಟವಾಡುತ್ತಾರೆ, ಇನ್ನೂ ಕೆಲವರು ಗೆಲ್ಲಬೇಕೆಂಬ ಉದ್ದೇಶದಿಂದ ಆಟವಾಡುತ್ತಾರೆ. ಆದರೆ ಬದುಕಿನಲ್ಲಿ ಆಕ್ರಮಣಕಾರಿ ಮನೋಭಾವದಿಂದ ಆಡಿದಾಗ ಮಾತ್ರ ಗೆಲವು ಸಾಧಿಸಲು ಸಾಧ್ಯ. ಸೋಲು ಗೆಲವು ಸರಿ ಸಮಾನವಾಗಿ ಸ್ವೀಕರಿಸಬೇಕು, ಯಾರು ಸೋಲಿಗೆ ಭಯ ಪಡುತ್ತಾರೋ ಅವರು ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಕ್ರೀಡಾ ಪಟುಗಳಿಗೆ ಆತ್ಮಸ್ಥೈರ್ಯ ತುಂಬಿದರು. ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ಪ್ರಧಾನ ಮಂತ್ರಿಯವರ ಕನಸು ಈ ದೇಶದ ಯುವಕರು ದುಶ್ಚಟಗಳಿಗೆ ದಾಸರಾಗದೆ ಸದೃಢ ಮನಸ್ಸಿನಲ್ಲಿ ಸದೃಢ ದೇಹ ಹೊಂದುವುದು, ಆ ನಿಟ್ಟಿನಲ್ಲಿ ಪ್ರತಿ ತಾಲೂಕುಗಳಲ್ಲಿ ಸಂಸದರ ಕ್ರೀಡಾ ಮಹೋತ್ಸವ ಹಮ್ಮಿಕೋಳ್ಳಲಾಗಿದೆ. ಗ್ರಾಮೀಣ ಕ್ರೀಡಾ ಪಟುಗಳನ್ನು ಮುನ್ನೆಲೆಗೆ ತರುವ ಉದ್ದೇಶ ಇಷ್ಟೇ, ಈ ಹಿಂದೆ ನಡೆದ ಒಲಿಂಪಿಕ್ಸನಲ್ಲಿ ಒಂದೋ ಎರಡು ಚಿನ್ನ, ಬೆಳ್ಳಿ ಗೆದ್ದು ಅದನ್ನೇ ಮಹಾನ್ ಸಾಧನೆ ಎಂದು ಖುಷಿ ಪಡುವಂತಾಗಿತ್ತು. ಆದರೆ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಖೇಲೋ ಇಂಡಿಯಾ ಎಂಬ ಕಾರ್ಯಕ್ರಮ ಕೊಡುವ ಮೂಲಕ ಕಳೆದ ಒಲಿಂಪಿಕ್ಸಗಳಲ್ಲಿ ಅತೀ ಹೆಚ್ಚು ಚಿನ್ನ, ಬೆಳ್ಳಿ, ಕಂಚು ಪಡೆಯುವಂತಾಯಿತು. ಗ್ರಾಮೀಣ ಭಾಗದ ಕ್ರೀಡಾ ಪಟುಗಳಲ್ಲಿ ಅತ್ಯಂತ ಉತ್ತಮ ಕ್ರೀಡಾ ಪಟುಗಳು ಹೊಂದಿದ್ದು ಅವರು ಅವಕಾಶ ವಂಚಿತರಾಗುತ್ತಿದ್ದಾರೆ ಎಂಬ ಕೂಗು ಕೇಳಿ ಬರುತ್ತಿತ್ತು. ಆದ್ದರಿಂದ ಅವರನ್ನು ಗುರುತಿಸಿ ಅವರಿಗೆ ಉತ್ತಮ ತರಬೇತಿ ನೀಡಿ ಮುಂಬರುವ ಒಲಿಂಪಿಕ್ಸನಲ್ಲಿ ಭಾಗವಹಿಸುವ ಅವಕಾಶ ಸಿಕ್ಕರೂ ಆಶ್ಚರ್ಯ ಪಡಬೇಕಿಲ್ಲ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಅರುಣಕುಮಾರ ಪೂಜಾರ, ಪಟ್ಟಣ ಪಂಚಾಯತ್ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ, ಉಪಾಧ್ಯಕ್ಷ ಶಿವಕುಮಾರ ಉಪ್ಪಾರ, ಬಸವರಾಜ ಆಡಿನವರ, ಬಿಜೆಪಿ ತಾಲೂಕಾಧ್ಯಕ್ಷ ದೇವರಾಜ ನಾಗಣ್ಣನವರ, ಸಂಜೀವಯ್ಯ ಕಬ್ಬಿಣಕಂತಿಮಠ, ಎನ್.ಎಂ. ಈಟೇರ್, ಜೆ.ಪಿ. ಪ್ರಕಾಶ, ಅಜಯಕುಮಾರ, ಮಾಲತೇಶಗೌಡ ಗಂಗೋಳ, ಶಂಭಣ್ಣ ಗೂಳಪ್ಪನವರ, ರಮೇಶ ತಳವಾರ, ಹನಮಂತಪ್ಪ ಗಾಜೇರ್, ಮಂಜು ತಳವಾರ, ರವಿ ಮುದ್ದಣ್ಣನವರ, ಪ್ರಕಾಶ ಕೊರವರ ಮುಂತಾದವರು ಇದ್ದರು.