ಹರಪನಹಳ್ಳಿ: ಕಾನೂನಿನ ಅರಿವು ಪ್ರತಿಯೊಬ್ಬ ಮಹಿಳೆ ಮತ್ತು ಕುಟುಂಬಕ್ಕೆ ರಕ್ಷಣೆಯಾಗಿದೆ ಎಂದು ಹಿರಿಯ ಉಪನ್ಯಾಸಕ ಬಸವರಾಜ್ ಸಿ.ಎಸ್. ಅಭಿಪ್ರಾಯಪಟ್ಟರು.
ಪಟ್ಟಣದ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆಯ ಎಚ್ಪಿಎಸ್ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಮಕ್ಕಳ ಸುರಕ್ಷತೆ ಗೌರವಕ್ಕೆ ಭಾರತದಲ್ಲಿ ಹಲವು ಕಾನೂನುಗಳಿವೆ ಅವುಗಳ ಬಗ್ಗೆ ಅರಿವು ಹೊಂದುವುದು ಪ್ರತಿಯೊಬ್ಬ ವಿದ್ಯಾರ್ಥಿಗಳು ತಿಳಿಯುವುದು ಅತ್ಯಂತ ಮಹತ್ವವಾಗಿದೆ ಎಂದು ನುಡಿದರು.ವಿಜಯ ಮಹಿಳಾ ಸುರಕ್ಷ ಪಡೆಯ ಸದಸ್ಯೆ ಕೆಂಚಮ್ಮ ಟಿ. ಮಾತನಾಡಿ, ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ಕುರಿತು ಮಾಹಿತಿ ನೀಡಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸಲು ಈ ಕಾಯ್ದೆ ಜಾರಿಯಲ್ಲಿದೆ ಎಂದರು.
ಹೆಣ್ಣು ಮತ್ತು ಗಂಡು ಮಕ್ಕಳಿಬ್ಬರಿಗೂ ಈ ಕಾನೂನು ಅನ್ವಯಿಸುತ್ತದೆ ಎಂದ ಅವರು, ಮಕ್ಕಳ ಮೇಲಿನ ಯಾವುದೇ ರೀತಿಯ ಲೈಂಗಿಕ ಕಿರುಕುಳ, ಶೋಷಣೆ ಅಥವಾ ದುರುಪಯೋಗ ಗಂಭೀರ ಅಪರಾಧವಾಗಿದೆ. ಇಂತಹ ಘಟನೆಗಳು ಕಂಡುಬಂದರೆ ಕೂಡಲೇ ಪೊಲೀಸ್ ಠಾಣೆ ಅಥವಾ ಮಕ್ಕಳ ಸಹಾಯವಾಣಿ 1098ಕ್ಕೆ ಮಾಹಿತಿ ನೀಡಬೇಕು. ಬಾಲ್ಯವಿವಾಹ ನಿಷೇಧ ಕಾಯಿದೆ ಪ್ರಕಾರ ಹೆಣ್ಣುಮಕ್ಕಳ ವಿವಾಹದ ಕನಿಷ್ಠ ವಯಸ್ಸು 18 ವರ್ಷ ಮತ್ತು ಗಂಡುಮಕ್ಕಳ ವಿವಾಹದ ಕನಿಷ್ಠ ವಯಸ್ಸು 21 ಇರಬೇಕು. ಇದಕ್ಕಿಂತ ಕಡಿಮೆ ವಯಸ್ಸಿನಲ್ಲಿ ವಿವಾಹ ಮಾಡುವುದು ಅಥವಾ ಮಾಡಿಸುವುದು ಕಾನೂನುಬಾಹಿರ ಎಂದು ತಿಳಿಸಿದರು.ಬಾಲ್ಯವಿವಾಹದಿಂದ ಶಿಕ್ಷಣ, ಆರೋಗ್ಯ ಮತ್ತು ಭವಿಷ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಬಾಲ್ಯವಿವಾಹದ ಬಗ್ಗೆ ಮಾಹಿತಿ ದೊರೆತರೆ ಪೊಲೀಸ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಥವಾ1098ಕ್ಕೆಗೆ ತಿಳಿಸಬೇಕು ಎಂದರು.
ಎನ್ಎಸ್ಎಸ್ ಯೋಜನಾಧಿಕಾರಿ ಎಚ್.ಶಿವಾನಂದ, ಉಪನ್ಯಾಸಕರಾದ ವಿರೇಶ್ ಎಂ.ಎಸ್., ಶ್ವೇತಾ ಎಂ.ಬಿ., ಸೌಭಾಗ್ಯ, ಸೌಮ್ಯಾ, ವಿಜಯ್, ಮಹಿಳಾ ಸುರಕ್ಷಾ ಪಡೆಯ ಸದಸ್ಯರಾದ ಶಾಂತಮ್ಮ ಎನ್., ಸುಮಾ ಎನ್. ರವೀಂದ್ರ, ಎಂ.ಪಿ. ಗೌಡ, ನರೇಂದ್ರ, ಮೋಹನ್ ಮತ್ತಿತರರು.