ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಜುಟ್ಟನಹಳ್ಳಿ ಬಾರೆಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ೧೯೯೫ -೧೯೯೬- ೧೯೯೭ನೇ ಸಾಲಿನಲ್ಲಿ ವಿದ್ಯಾಭ್ಯಾಸ ಮಾಡಿರುವ ಹಳೆ ವಿದ್ಯಾರ್ಥಿಗಳು ಸೇರಿಕೊಂಡು ತಮಗೆ ಶಿಕ್ಷಣ ಬೋಧಿಸಿದ ಹಿರಿಯ ಗುರುಗಳನ್ನು ಗುರುತಿಸಿ ಗುರುವಂದನಾ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು.ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ನಿಶ್ಚಲಾನಂದ ಸ್ವಾಮೀಜಿ ನೆರವೇರಿಸಿ ಮಾತನಾಡಿ, ಈ ಜುಟ್ಟನಹಳ್ಳಿ ಸರ್ಕಾರಿ ಶಾಲೆಯ ಹಿರಿಯ ವಿದ್ಯಾರ್ಥಿಗಳು ಆಯೋಜನೆ ಮಾಡಿರುವ ಗುರುವಂದನ ಕಾರ್ಯಕ್ರಮವು ಮಾದರಿಯಾದ ಕಾರ್ಯಕ್ರಮವಾಗಿದೆ ಎಂದು ಪ್ರಶಂಸಿಸಿದರು. ೩೦ ವರ್ಷಗಳ ಹಿಂದೆ ತಮಗೆ ಶಿಕ್ಷಣ ಬೋಧನೆ ಮಾಡಿದ ಎಲ್ಲಾ ಶಿಕ್ಷಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿ ಎಲ್ಲಾ ಗುರುಗಳಿಗೂ ಪ್ರೀತಿ ಪೂರಕವಾಗಿ ಸನ್ಮಾನಿಸಿ ಗೌರವಿಸಿದ ಕಾರ್ಯವು ಮಾದರಿಯಾಗಿದೆ ಎಂದರು.
ಪ್ರತಿಯೊಬ್ಬರೂ ಸಹ ತಮಗೆ ವಿದ್ಯೆಯನ್ನ ಕಲಿಸಿಕೊಟ್ಟ ಗುರುಗಳಿಗೆ ಪೂಜ್ಯ ಭಾವನೆಯಿಂದ ಗೌರವಿಸುವ ಕಾರ್ಯವನ್ನು ಮಾಡುವುದು ಹೆಮ್ಮೆಯ ವಿಚಾರ ಎಂದರು. ಮುಂದಿನ ಪೀಳಿಗೆಯು ಸಹ ಮಾತೃದೇವೋಭವ ಪಿತೃದೇವೋಭವ ಗುರುದೇವೋಭವ, ರಾಷ್ಟ್ರ ದೇವೋಭವ ಎಂಬ ತತ್ವಗಳನ್ನು ಅಳವಡಿಸಿಕೊಂಡು ರಾಷ್ಟ್ರದ ಏಳಿಗೆಗೆ ಶ್ರಮಿಸಬೇಕು ಎಂದು ತಿಳಿಸಿದರು. ಇಂತಹ ಗಂಡು ಮೆಟ್ಟಿದ ಊರಿನಲ್ಲಿ ಇಂಥ ಮಾದರಿ ಕಾರ್ಯವನ್ನು ಹಮ್ಮಿಕೊಂಡಿರುವುದು ಹಳೆ ವಿದ್ಯಾರ್ಥಿಗಳ ಸಂಘದ ಕಾರ್ಯವು ತುಂಬಾ ಅವಿಸ್ಮರಣೀಯವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಜುಟ್ಟನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸಿದ ಶಿಕ್ಷಕರಾದ ವಿ ಎನ್ ಧನಂಜಯ, ಎಚ್ ಬಿ ಮಹೇಶ್, ಎಚ್ ಬಿ ನಟೇಶ್, ಸುಶೀಲ ಆಂತೋನಿ ಸ್ವಾಮಿ, ಎಲ್ ಜಿ ನಿಂಗೇಗೌಡ, ಬಿಟಿ ಹನುಮಂತಪ್ಪ, ಕುಮಾರ್, ಎಚ್ ಎಚ್ ಹರ್ಷ, ಮನೋಮೋಹನ, ಗೋವಿಂದಯ್ಯ, ಸಿ ಜಿ ಮಧು ವೀರಯ್ಯ, ಎಂ ಮಂಜೇಗೌಡ, ಇವರನ್ನು ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ಗುರುವಂದನ ಕಾರ್ಯಕ್ರಮದ ಆಯೋಜಕರಾದ ನಾಗನಹಳ್ಳಿ ಎನ್ ಎನ್ ಪ್ರಸನ್ನ, ಎ ಟಿ ದೇವರಾಜ್, ಡಿ ಬಿ ಲೋಕೇಶ್, ಸಿ ಆರ್ ಮಂಜುನಾಥ, ವೀರೇಂದ್ರ, ಚಲ್ಯ ಗೋಪಾಲೆಗೌಡ, ಸಿ ಎನ್ ಪೂರ್ಣಿಮಾ, ಜೆ ಪಿ ದ್ರಾಕ್ಷಾಯಿಣಿ, ಮಾಯಮ್ಮ ಸೇರಿದಂತೆ ಇತರರು ಹಾಜರಿದ್ದರು.