ಆಡಳಿತದಲ್ಲಿ ಸಾಮಾಜಿಕ ನ್ಯಾಯ ಪಾಲನೆಯಾಗಲಿ

| Published : Oct 26 2024, 12:58 AM IST

ಆಡಳಿತದಲ್ಲಿ ಸಾಮಾಜಿಕ ನ್ಯಾಯ ಪಾಲನೆಯಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಸಂವಿಧಾನದ ಅಡಿಪಾಯವಾಗಿದೆ. ಆದರೆ, ಸರಿಯಾಗಿ ಪಾಲನೆ ಆಗುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಯಾವುದೇ ನ್ಯಾಯಾಧೀಶರು ತೀರ್ಪು ನೀಡುವಾಗ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುತ್ತಾರೆ.

ಧಾರವಾಡ:

ಸ್ವಾತಂತ್ರ ಬಂದು 77 ವರ್ಷಗಳಾದರೂ ದೇಶದಲ್ಲಿ ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗುತ್ತಿಲ್ಲ. ಮೊದಲಿಗೆ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದಲ್ಲಿ ಸಾಮಾಜಿಕ ನ್ಯಾಯ ಅನುಷ್ಠಾನವಾಗಲಿ ಎಂದು ನಿವೃತ್ತ ಐಎಎಸ್ ಅಧಿಕಾರಿ ಎನ್‌.ಸಿ. ಮುನಿಯಪ್ಪ ಪ್ರತಿಪಾದಿಸಿದರು.

ಸಮಾಜ ಕಲ್ಯಾಣ ಇಲಾಖೆ, ಡಾ. ಬಾಬು ಜಗಜೀವನ್ ರಾಮ್ ಸಂಶೋಧನಾ, ಅಧ್ಯಯನ ಸಂಸ್ಥೆ, ರಾಷ್ಟ್ರೀಯ ಕಾನೂನು ಶಾಲೆ ಜಂಟಿಯಾಗಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಎರಡು ದಿನಗಳ ಸಾಮಾಜಿಕ ನ್ಯಾಯ ನಾಯಕತ್ವ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಸಂವಿಧಾನದ ಅಡಿಪಾಯವಾಗಿದೆ. ಆದರೆ, ಸರಿಯಾಗಿ ಪಾಲನೆ ಆಗುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಯಾವುದೇ ನ್ಯಾಯಾಧೀಶರು ತೀರ್ಪು ನೀಡುವಾಗ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುತ್ತಾರೆ. ದೇಶದ ಶೇ. 90ರಷ್ಟು ಜನರ ಪೈಕಿ ಶೇ. 48ರಷ್ಟು ಜನರಲ್ಲಿ ಸಂಪನ್ಮೂಲ ಮತ್ತು ಸಂಪತ್ತಿದೆ. ದೇಶದ ಶೇ. 10ರಷ್ಟು ಜನರಲ್ಲಿ ಶೇ. 62ರಷ್ಟು ಸಂಪತ್ತು ಮತ್ತು ಸಂಪನ್ಮೂಲಗಳಿವೆ. ಸಂಪನ್ಮೂಲಗಳು ಎಲ್ಲರಿಗೂ ಸಮಾನವಾಗಿ ಹಂಚಿಕೆ ಆಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕವಿವಿ ಪ್ರಭಾರಿ ಕುಲಪತಿ ಪ್ರೊ. ಬಿ.ಎಂ. ಪಾಟೀಲ, ಸಾಮಾಜಿಕ ನ್ಯಾಯ ವಿಷಯವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಹೋರಾಟ ಮತ್ತು ಸಂಘರ್ಷದಿಂದ ಇಂದು ಸಮುದಾಯದವರಿಗೂ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಸಿಕ್ಕಿದೆ ಎಂದು ಹೇಳಿದರು.

ಕುಲಸಚಿವ ಡಾ. ಎ. ಚೆನ್ನಪ್ಪ, ಹಣಕಾಸು ಅಧಿಕಾರಿ ಡಾ. ಸಿ. ಕೃಷ್ಣಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಟಿ. ಶುಭ, ಹಿರಿಯ ಸಿವಿಲ್‌ ನ್ಯಾಯಾಧೀಶ ಪರಶುರಾಮ್ ದೊಡ್ಡಮನಿ, ಸಂಯೋಜಕ ಶಿವಶರಣ ಸಿ.ಟಿ., ಡಾ. ಆರ್.ವಿ. ಚಂದ್ರಶೇಖರ್, ಸಿಂಡಿಕೇಟ್‌ ಸದಸ್ಯ ಮಹೇಶ ಹುಲ್ಲೆನ್ನವರ, ಪ್ರೊ. ಅರವಿಂದ ಮೂಲಿಮನಿ, ಪ್ರೊ. ಎಸ್.ಕೆ. ಪವಾರ್ ಇದ್ದರು.

ಯಮನೂರಪ್ಪ ಎಚ್. ನಿರೂಪಿಸಿದರು. ಗದಗದ ಶರೀಫ್ ಮತ್ತು ತಂಡದವರು ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಡಾಕ್ಟರ್ ಬಾಬು ಜಗಜೀವನ್ ರಾಮ್ ಅವರ ಕ್ರಾಂತಿ-ಗೀತೆಗಳನ್ನು ಹಾಡಿದರು. ಎರಡು ದಿನಗಳ ಕಾರ್ಯಾಗಾರದಲ್ಲಿ ಎಂಟು ಗೋಷ್ಠಿಗಳು ನಡೆಯಲಿವೆ. ಪ್ರಖ್ಯಾತ ಉಪನ್ಯಾಸಕರು ಉಪನ್ಯಾಸ ನೀಡಲಿದ್ದಾರೆ. ರಾಜ್ಯದ ಹತ್ತು ಜಿಲ್ಲೆಗಳಿಂದ 125 ಪ್ರತಿನಿಧಿಗಳು ಭಾಗವಹಿಸಿದ್ದರು.