ಕನ್ನಡಪ್ರಭ ವಾರ್ತೆ,ರಬಕವಿ-ಬನಹಟ್ಟಿ

ಜೀವನದಲ್ಲಿ ಪ್ರತಿಯೊಬ್ಬರೂ ಯಶಸ್ಸಿನತ್ತ ಸಾಗಲು ಪ್ರಯತ್ನಿಸುತ್ತಾರೆ. ಆದರೆ ಬದುಕಿಗೆ ಮೂಲದ್ರವ್ಯವಾಗಿರುವುದು ಸಾರ್ಥಕತೆ ಎಂದರಿತು ಮಾನವೀಯ ಮೌಲ್ಯಗಳೊಡನೆ ಬದುಕುವವರು ಸದಾ ಸಂತಸದಿಂದಿರುತ್ತಾರೆಂದು ನಿವೃತ್ತ ಪ್ರಾಚಾರ್ಯ ಎಸ್.ಎಂ.ಶೇಖ ಹೇಳಿದರು.

ಬನಹಟ್ಟಿ ಸರ್ಕಾರಿ ಪಿಯೂ ಕಾಲೇಜಿನ ಜೆಓಡಿಸಿ ವಿಭಾಗದ ೨೦೦೨-೦೪ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಶ್ರೀನೀಲಕಂಠೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸ್ನೇಹ ಸಂಗಮ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಕುಟುಂಬ ವರ್ಗ, ಉಪನ್ಯಾಸಕರು, ಸ್ನೇಹಿತರು ೨೨ ವರ್ಷಗಳ ಬಳಿಕ ಸೇರಿ ದಿನವಿಡೀ ಹಳೆಯ ನೆನಪುಗಳ ಮೆಲುಕು ಹಾಕಿ ಹಾಡು, ನೃತ್ಯ, ಮ್ಯೂಸಿಕಲ್ ಚೇರ್ ಆಯೋಜಿಸಿ ಸಂಭ್ರಮಿಸಿದರು.

೨೨ ವರ್ಷಗಳ ಬಳಿಕ ಹರಿದು ಹಂಚಿ ಹೋಗಿದ್ದ ನಾವೆಲ್ಲ ಒಂದೆಡೆ ಸೇರುತ್ತಿರುವುದು ವಿಸ್ಮಯ. ಶಿಕ್ಷಣದ ಬಳಿಕ ಯಾರೂ ಸಂಪರ್ಕದಲ್ಲಿರಲಿಲ್ಲ. ಕೇವಲ ೩ ತಿಂಗಳಲ್ಲಿ ಒಬ್ಬರಿಂದೊಬ್ಬರು ಸಂಪರ್ಕಕ್ಕೆ ಬಂದು ಒಟ್ಟಾಗಿ ಕಲೆತದ್ದು ಖುಷಿ ತಂದಿದೆ. ಬಾಲ್ಯದ ದಿನಗಳನ್ನು ನೆನೆದು ಭಾವುಕರಾದೆವೆಂದು ಹಳೆಯ ವಿದ್ಯಾರ್ಥಿಗಳು ಅಭಿಪ್ರಾಯಪಟ್ಟರು. ಉಪನ್ಯಾಸಕರು ಹಳೆಯ ಶಿಷ್ಯರನ್ನುದ್ದೇಶಿಸಿ ಹಿತನುಡಿ ಹೇಳಿದರು. ನಿವೃತ್ತ ಪ್ರಾಚಾರ್ಯ ಎಸ್.ಎಂ.ಶೇಖ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಎಸ್.ಎಸ್. ಚನಾಳ, ಎಸ್.ಎಸ್.ಪತಂಗಿ, ಎಸ್.ಕೆ.ಪತ್ತಾರ, ಎಸ್.ಎಂ.ಪತ್ತಾರ, ಎ.ಎಂ.ಕಡಕೋಳ, ಕೆ.ಡಿ.ಪತ್ರಿ, ಹಳೆಯ ವಿದ್ಯಾರ್ಥಿಗಳಾದ ಅಪರ್ಣಾ, ಸಂತೋಷ ಕುಳ್ಳಿ, ಮಿಯಾ, ಅಜಿತ ಸಣ್ಣಕ್ಕಿ, ಗೀತಾ, ಮೋಮಿನ್, ಭುವನೇಶ್ವರಿ, ಶಿಲ್ಪಾ, ನಂದಿನಿ, ಪ್ರೇಮಾ, ಪುಷ್ಪಾ, ಸನ್ಮಾನ ಸೇರಿದಂತೆ ಹಲವು ಗೆಳೆಯರು ಪಾಲ್ಗೊಂಡಿದ್ದರು. ಅಪರ್ಣಾ, ಸಂತೋಷ ಕುಳ್ಳಿ ನಿರೂಪಿಸಿದರು. ಭವನೇಶ್ವರಿ ಸ್ವಾಗತಿಸಿದರು. ಶಿಲ್ಪಾ ವಂದಿಸಿದರು.