ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಇಲ್ಲಿನ ಪದವಿಪೂರ್ವ ಕಾಲೇಜು ಬಳಿ ಇರುವ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಭೇಟಿ ನೀಡಿ ವಸತಿ ನಿಲಯದ ಮೂಲಸೌಕರ್ಯ, ವ್ಯವಸ್ಥೆಗಳನ್ನು ಪರಿಶೀಲಿಸಿದರು.ಕುಡಿಯುವ ನೀರು, ಅಡುಗೆಕೋಣೆ, ವಿಶ್ರಾಂತಿ ಕೊಠಡಿ, ಶೌಚಾಲಯ ವ್ಯವಸ್ಥೆಗಳ ಪರಿಶೀಲಿಸಿದ ಅಧಿಕಾರಿಗಳು ವಸತಿನಿಲಯದ ಮೇಲ್ವಿಚಾರಕರಿಂದ ಮಾಹಿತಿ ಪಡೆದರು.
ಅಡುಗೆ ಕೋಣೆ ಪರಿಶೀಲಿಸಿದ ಅಧಿಕಾರಿಗಳು ಆಹಾರ ದಾಸ್ತಾನಿಟ್ಟಿದ್ದ ಡಬ್ಬಗಳನ್ನು ಆಹಾರ ಸಾಮಗ್ರಿಗಳ ಗುಣಮಟ್ಟ ಪರಿಶೀಲಿಸಿದರು. ಮಳೆಗಾಲದಲ್ಲಿ ಮಕ್ಕಳಿಗೆ ಬಿಸಿ ನೀರು ಕೊಡಬೇಕು, ಸಣ್ಷ ಪುಟ್ಟ ಅನಾರೋಗ್ಯ ಕಂಡು ಬಂದರೆ ತಕ್ಷಣ ಸ್ಥಳೀಯ ಅರೋಗ್ಯಕೇಂದ್ರಕ್ಕೆ ಕರೆದುಕೊಂಡು ಹೋಗುವಂತೆ ಸೂಚಿಸಿದರು. ಈ ಬಗ್ಗೆ ನಿರ್ಲಕ್ಷ್ಯ ಕಂಡು ಬಂದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳುವ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಎಚ್ಚರಿಕೆ ನೀಡಿದರು. ವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಮಾಹಿತಿ ಸಂಗ್ರಹಿಸಿದ ಅಧಿಕಾರಿಗಳು ಆಹಾರ ವ್ಯವಸ್ಥೆ, ಇನ್ನಿತರ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ವಸತಿ ನಿಲಯದಲ್ಲಿ ಸಮಸ್ಯೆ ಕಂಡು ಬಂದರೆ ಲೋಕಾಯುಕ್ತಕ್ಕೆ ದೂರು ನೀಡುವಂತೆ ಅವರು ತಿಳಿಸಿದರು.ಈ ವಸತಿ ನಿಲಯದ ವಿದ್ಯಾರ್ಥಿಗಳು ಶೇ .100 ಫಲಿತಾಂಶ ಪಡೆದ ಬಗ್ಗೆ ವಸತಿ ನಿಲಯದ ಕಲ್ಯಾಣಾಧಿಕಾರಿ ಜೋಸೆಫ್ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಜೋಸೆಪ್ ಮಾಹಿತಿ ನೀಡಿ, ಮೆಟ್ರಿಕ್ ನಂತರದ ಬಾಲಕರ ವಸತಿನಿಲಯದಲ್ಲಿ ಸ್ಥಳದ ಅಭಾವವಿದೆ. ಮಕ್ಕಳ ಸಂಖ್ಯೆ ಕಡಿಮೆ ಮಾಡಿದರೆ ಇರುವ ಮಕ್ಕಳಿಗೆ ಇನ್ನಷ್ಟು ಅನುಕೂಲವಾಗಲಿದೆ. ಇಲ್ಲಿ ದಾಖಲಾತಿ 125 ಕ್ಕೆ ಅವಕಾಶ ಇದ್ದರೂ ಈಗ 110 ಮಕ್ಕಳನ್ನು ದಾಖಲಾತಿ ಮಾಡಲಾಗಿದೆ. ವಸತಿ ನಿಲಯದ ಸುತ್ತ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ರಾತ್ರಿ ಹೊತ್ತು ಸಿಬ್ಬಂದಿ ವಾಸ್ತವ್ಯ ಇದ್ದು ಮಕ್ಕಳ ಸುರಕ್ಷತೆಗೆ ಗಮನ ಹರಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ನಿವೇಶನ ಸಮಸ್ಯೆ: ಸರ್ಕಾರ ವಸತಿ ನಿಲಯ ಮಂಜೂರು ಗೊಳಿಸಿದರೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಕಡೆ ಸರ್ಕಾರಿ ನಿವೇಶನ ಸಿಗುತ್ತಿಲ್ಲ. ದೂರದ ಹಳ್ಳಿ ಪ್ರದೇಶದಲ್ಲಿ ವಸತಿ ನಿಲಯ ಮಾಡಿದರೆ ಮಕ್ಕಳಿಗೆ ಹೋಗಿ ಬರಲು ಸಮಸ್ಯೆಯಾಗುತ್ತದೆ. ಈ ಬಗ್ಗೆ ಕಂದಾಯ ಅಧಿಕಾರಿಗಳು ಗಮನ ಹರಿಸಿದರೆ ಒಳ್ಳೆಯದು ಎಂದು ಲೋಕಾಯುಕ್ತ ಅಧಿಗಳಲ್ಲಿ ವಸತಿ ನಿಲಯದ ಅದಿಕಾರಿಗಳು ಪ್ರಸ್ತಾಪಿಸಿದರು. ಈ ಬಗ್ಗೆ ಮಾಹಿತಿ ಕೊಡುವಂತೆ ಲೋಕಾಯುಕ್ತ ಅಧಿಕಾರಿಗಳು ಸೂಚಿಸಿದರು.ಲೋಕಾಯುಕ್ತ ಎಸ್ಪಿ ನಟರಾಜ್ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ಗಳಾದ ಚಂದ್ರಶೇಖರ ಸಿ.ಎಲ್., ಚಂದ್ರಶೇಖರ ಕೆ. ಎನ್., ಅಮಾನುಲ್ಲ, ಸಿಬ್ಬಂದಿ ವಿನಾಯಕ್, ಮಹೇಶ್, ಪಾಪಣ್ಣ ಇದ್ದರು.
ಬೆಳ್ತಂಗಡಿ ಮೆಟ್ರಿಕ್ ನಂತರದ ಬಾಲಕರ ವಸತಿನಿಲಯ ಪರಿಶೀಲನೆ ಮಾಡಲಾಗಿದೆ. ಇಲ್ಲಿನ ಮಕ್ಕಳ ಫಲಿತಾಂಶ ಉತ್ತಮವಾಗಿದೆ. ಬಹುತೇಕ ಉತ್ತಮ ವ್ಯವಸ್ಥೆಗಳಿವೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿ, ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದಿದ್ದು ಈ ಬಗ್ಗೆ ವರದಿ ನೀಡುವಂತೆ ತಿಳಿಸಲಾಗಿದೆ.
- ಅಮಾನುಲ್ಲ, ಲೋಕಾಯುಕ್ತ ಇನ್ಸ್ಪೆಕ್ಟರ್