ಕನ್ನಡಪ್ರಭ ವಾರ್ತೆ ಪಾಂಡವಪುರ

ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಅವರ ಕಾಲದಲ್ಲಿ ರಚಿಸಲ್ಪಟ್ಟ ವಚನ ಸಾಹಿತ್ಯವನ್ನು ವಿರೋಧಿಗಳಿಂದ ರಕ್ಷಣೆ ಮಾಡಿದ ಮಹಾನ್ ನಾಯಕರ ಮಡಿವಾಳ ಮಾಚಿದೇವರು ಎಂದು ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್ ಹೇಳಿದರು.

ಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ನಡೆದ ಮಡಿವಾಳ ಮಾಚಿದೇವರು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಡಿವಾಳ ಮಾಚಿದೇವರು ಮಾಡಿದ ಶ್ರೇಷ್ಠ ಕೆಲಸದಿಂದ ವಚನ ಸಾಹಿತ್ಯಗಳು ನಮಗೆ ಲಭಿಸಿವೆ. ಮಡಿವಾಳರು ಸಮಾಜದಲ್ಲಿ ಶ್ರೇಷ್ಠ ಸಂಸ್ಕೃತಿಯನ್ನು ಹೊಂದಿದ್ದಾರೆ. ಸಮಾಜದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆದರೂ ಅಲ್ಲಿ ಮಡಿವಾಳ ಸಮುದಾಯದವರು ಉಪಸ್ಥಿತಿ ಅತ್ಯಗತ್ಯ. ಹಾಗಾಗಿ ಮುಂದಿನ ದಿನಗಳಲ್ಲಿ ಮಡಿವಾಳ ಮಾಚಿದೇವರ ಜಯಂತಿಯನ್ನು ತಾಲೂಕು ಆಡಳಿತ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಆಚರಣೆ ಮಾಡುವ ಮೂಲಕ ಅವರ ಬಗ್ಗೆ ಜನತೆ ಹೆಚ್ಚಿನ ಮಟ್ಟದಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.

ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಮಾತನಾಡಿ, ಶರಣಾದ ಮಡಿವಾಳ ಮಾಚಿದೇವರು ವೃತ್ತಿಯಲ್ಲಿ ಮಡಿವಾಳರಾಗಿದ್ದರು. ಹಲವಾರು ವಚನ ಸಾಹಿತ್ಯವನ್ನು ರಚನೆ ಮಾಡುವ ಜತೆಗೆ ಶರಣರ ಕ್ರಾಂತಿಯ ಸಮಯದಲ್ಲಿ ಹೋರಾಟಮಾಡಿ ವಚನ ಸಾಹಿತ್ಯಗಳನ್ನು ರಕ್ಷಣೆ ಮಾಡಿದ ಮಹಾನ್ ನಾಯಕರು, ಹಾಗಾಗಿ ಇಂತಹ ಮಹಾನ್ ನಾಯಕರ ಆದರ್ಶವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದರು.


ನಾನು ತಹಸೀಲ್ದಾರ್ ಆಗಿ ಇಲ್ಲಿಗೆ ವರ್ಗಾವಣೆಯಾಗಿ ಬಂದ ಬಳಿಕ ಸುಮಾರು 2500ಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದೇನೆ. ಇತ್ಯರ್ಥಪಡಿಸಿರುವ ಪ್ರಕರಣಗಳ ಮಾಹಿತಿಯನ್ನು ನೋಟಿಸ್ ಬೋರ್ಡ್‌ನಲ್ಲಿ ಹಾಕುತ್ತೇನೆ. ಸಾರ್ವಜನಿಕರು ಇಲ್ಲಿ ಯಾರಿಗಾದರೂ ಲಂಚ ನೀಡಿದ ಮಾಹಿತಿ ನೀಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮಡಿವಾಳ ತಾಲೂಕು ಸಂಘದ ಅಧ್ಯಕ್ಷ ಹರಳಹಳ್ಳಿ ರಾಮಚಂದ್ರು ಮಾತನಾಡಿ, ಪಟ್ಟಣದಲ್ಲಿ ಒಂದು ವೃತ್ತಕ್ಕೆ ಮಡಿವಾಳ ಮಾಚಿದೇವರ ಹೆಸರು ಇಡಬೇಡಬೇಕು. ಈ ಕುರಿತು ಈಗಾಗಲೇ ಪುರಸಭೆ ಅರ್ಜಿ ಸಲ್ಲಿಸಿದ್ದೇವೆ. ಜತೆಗೆ ಪಟ್ಟಣದಲ್ಲಿ ಮಡಿವಾಳರ ಸಂಘದ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡುವಂತೆ ಮನವಿ ಮಾಡಿದರು.

ಇದೇ ವೇಳೆ ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕರ ಕಾರ್ಡ್ ವಿತರಣೆ ಮಾಡಲಾಯಿತು. ಉಪ ವಿಭಾಗಾಧಿಕಾರಿ ಶ್ರೀನಿವಾಸ್, ಜಿಲ್ಲಾಧ್ಯಕ್ಷ ರವಿ, ರಾಜ್ಯ ನಿರ್ದೇಶಕಿ ಪದ್ಮಾವತಿ, ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಸಂದೇಶ್, ತಾಲೂಕು ಅಧ್ಯಕ್ಷ ರಾಮಚಂದ್ರು, ಮಂಡಿಬೆಟ್ಟಹಳ್ಳಿ ಮಂಜುನಾಥ್, ದ್ಯಾವಪ್ಪ, ಮೈಸೂರು ಬೃಂದಾವನ ಮಡಿವಾಳರ ಸಂಘದ ಅಧ್ಯಕ್ಷ ಮಹೇಶ್, ಸಿದ್ದಶೆಟ್ಟಿ, ಮುಖಂಡರಾದ ಮಹದೇವು, ರಘು, ಶಿವಕುಮಾರ್, ರಂಗಶೆಟ್ಟಿ, ಅರುಣ್, ಹಿಂದೂಧರ, ಮಾದಶೆಟ್ಟಿ ಸೇರಿದಂತೆ ಸಮುದಾಯದ ಮುಖಂಡರು ಹಾಜರಿದ್ದರು.