ಸಾರಾಂಶ
ಸಾಮಾಜಿಕ ಪರಿಶೋಧನೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು.
ಕನ್ನಡಪ್ರಭ ವಾರ್ತೆ ಹೊಸಪೇಟೆ
ಸಾಮಾಜಿಕ ಪರಿಶೋಧನೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಜಿಪಂ ಸಿಇಒ ಅಕ್ರಂ ಷಾ ತಿಳಿಸಿದರು.ಸಾಮಾಜಿಕ ಪರಿಶೋಧನೆ 2025-26ರ ನಿಮಿತ್ತ ಗ್ರಾಮಸಭೆ ಮತ್ತು ಶಾಲಾ ಸಭೆ ನೋಡಲ್ ಅಧಿಕಾರಿಗಳಿಗೆ ಬುಧವಾರ ನಡೆದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸಾಮಾಜಿಕ ಪರಿಶೋಧನೆಯಲ್ಲಿ ಗ್ರಾಮಸಭೆ ಮತ್ತು ಶಾಲಾ ಸಭೆ ನೋಡಲ್ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ನೋಡಲ್ ಅಧಿಕಾರಿಗಳು ಗ್ರಾಮ ಸಭೆ ಹಾಗೂ ಶಾಲಾ ಸಭೆಗಳ ಚರ್ಚೆ ನಿಯಂತ್ರಣ ಅಧಿಕಾರಿಗಳಾಗಿದ್ದು, ಸಾಮಾಜಿಕ ಪರಿಶೋಧನೆ ಎಲ್ಲಾ ಅಂಶಗಳನ್ನು ಗ್ರಾಮಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಬೇಕು ಎಂದರು.
ಸಾಮಾಜಿಕ ಪರಿಶೋಧನೆ ಜೂನ್ 2025ರಿಂದ ಮಾರ್ಚ್ 2026ರವರೆಗೆ ಅನುಮೋದಿತ ವೇಳಾಪಟ್ಟಿಗನುಗುಣವಾಗಿ ನಡೆಯಲಿದ್ದು, ಮನರೇಗಾ, 15ನೇ ಹಣಕಾಸು, ರಾಜ್ಯ ಹಣಕಾಸು ಯೋಜನೆಗಳ ಕಡತ ಮತ್ತು ದಾಖಲೆಗಳನ್ನು ಸಾಮಾಜಿಕ ಪರಿಶೋಧನೆ ಪ್ರಕ್ರಿಯೆ ಮೊದಲನೇ ದಿನವೇ ಕಡ್ಡಾಯವಾಗಿ ನೀಡಿ, ಸಾಮಾಜಿಕ ಪರಿಶೋಧನೆ ಎಲ್ಲಾ ಪ್ರಕ್ರಿಯೆಗಳಿಗೆ ಸಹಕಾರ ನೀಡಿ ಐಇಸಿ ಚಟುವಟಿಕೆಗಳ ಮೂಲಕ, ಗ್ರಾಮ ಸಭೆಗಿಂತ ಮುನ್ನ ಡಂಗೂರ, ಧ್ವನಿವರ್ಧಕ, ಬ್ಯಾನರ್ ಮೂಲಕ ಸಾರ್ವಜನಿಕರಿಗೆ ಮಾಹಿತಿ ತಿಳಿಸಿ, ನಿಗದಿತ ದಿನದಂದು ಗ್ರಾಮಸಭೆ ನಡೆಸುವ ಮೂಲಕ ಸಾಮಾಜಿಕ ಪರಿಶೋಧನೆ ಯಶಸ್ವಿಗೊಳಿಸಬೇಕು ಎಂದರು.ಜಿಪಂ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ ಮಾತನಾಡಿ, ಎಲ್ಲಾ ನೋಡಲ್ ಅಧಿಕಾರಿಗಳು ಕಡ್ಡಾಯವಾಗಿ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆ ಹಾಗೂ ಶಾಲಾ ಸಭೆಗಳಲ್ಲಿ ಭಾಗವಹಿಸಿ ಸಭೆಗಳನ್ನು ಯಶಸ್ವಿಗೊಳಿಸಲು ಸೂಚಿಸಿದರು.
ಸಂಪನ್ಮೂಲ ಅಧಿಕಾರಿ ಸುಭಾಸ ಚಂದ್ರಗೌಡ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಎಡಿಪಿಸಿ ಬಸವರಾಜ್, ಜಿಲ್ಲಾ ಐಇಸಿ ಸಂಯೋಜಕ ಎನ್. ಫಾಜೀಲ್ ಅಹಮದ್, ಜಿಲ್ಲಾ ಲೆಕ್ಕ ವ್ಯವಸ್ಥಾಪಕ ಸುನಿಲ್, ಜಿಲ್ಲಾ ಎಂಐಎಸ್ ಸಂಯೋಜಕ ಏಕಾಂತ್ ಹಾಗೂ ಜಿಲ್ಲೆಯ ಎಲ್ಲಾ ತಾಲೂಕುಗಳ ನೋಡಲ್ ಅಧಿಕಾರಿಗಳು, ಎಲ್ಲಾ ತಾಲೂಕಿನ ಸಾಮಾಜಿಕ ಪರಿಶೋಧನಾ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಇದ್ದರು.