ಸಾರಾಂಶ
ಕನ್ನಡಪ್ರಭ ವಾರ್ತೆ ಮಾಲೂರು
ಮಾಲೂರಿನಲ್ಲಿ ಆಶ್ರಯ ಯೋಜನೆಯಲ್ಲಿ 1200 ಅರ್ಹ ಪಲಾನುಭವಿಗಳಿಗೆ ವಿತರಿಸಲಾಗುವ ಉಚಿತ ನಿವೇಶನದ ಜತೆಯಲ್ಲಿ ರಾಜೀವ ಗಾಂಧಿ ವಸತಿ ನಿಗಮದ ಮೂಲಕ ಮನೆ ಮಂಜೂರಾತಿ ಮಾಡಲು ಸಚಿವ ಜಮೀರ್ ಅಹಮದ್ ಒಪ್ಪಿಗೆ ಸೂಚಿಸಿದ್ದು, ಅವರಿಗೆ ತಾಲೂಕಿನ ಜನತೆ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ಅವರು ಕನ್ನಡಪ್ರಭದೊಂದಿಗೆ ಮಾತನಾಡಿ, ಈ ಸಂಬಂಧ ವಿಧಾನಸೌಧದ ರಾಜೀವದ ವಸತಿ ನಿಗಮದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಚಿವ ಜಮೀರ್ ಅಹಮದ್ ಎರಡು ದಶಕಗಳ ಕಾಲದಿಂದ ನನೆಗುದಿಗೆ ಬಿದಿದ್ದ ಈ ಆಶ್ರಯ ಯೋಜನೆಯನ್ನು ತಾರ್ಕಿಕ ಅಂತ್ಯ ಕಾಣಿಸುವ ಬಗ್ಗೆ ನಡೆಸಿದ ಹೋರಾಟ ಬಗ್ಗೆ ಮಾಹಿತಿ ಪಡೆದರಲ್ಲದೇ ನಮ್ಮ ಪ್ರಯತ್ನವನ್ನು ಶ್ಲಾಘೀಸಿ ಇಲಾಖೆ ಅಧಿಕಾರಿಗಳೂಡನೆ ಸಾಧ್ಯತೆ ಬಾಧ್ಯತೆ ಯನ್ನು ಚರ್ಚಿಸಿ 30 ಎಕರೆಯಲ್ಲಿ ಬರುವ ಎಲ್ಲ ನಿವೇಶನದಾರರಿಗೆ ಮನೆ ಕಟ್ಟಿಕೊಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಖಾತೆಗೆ ಹಣ ವಾಪಸ್ಈಗಾಗಲೇ ನಿವೇಶನಕ್ಕಾಗಿ ಬಡವರು ಈ ಹಿಂದೆ ಕಟ್ಟಿದ್ದ 35 ಸಾವಿರ ರು.ಗಳನ್ನು ಬ್ಯಾಂಕ್ ಬಡ್ಡಿ ಸಮೇತ ಪಲಾನುಭವಿಗಳ ಖಾತೆಗೆ ನೇರವಾಗಿ ಹಿಂದುರುಗಿಸಲಾಗಿದೆ. ಇನ್ನೆರಡು ತಿಂಗಳಲ್ಲಿ ಬಡಾವಣೆ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದರು.
ಸಮಾರಂಭಕ್ಕೆ ಸಿಎಂಗೆ ಆಹ್ವಾನಮುಖ್ಯ ಮಂತ್ರಿಗಳು ಸೇರಿದಂತೆ ಹಲವು ಮಂತ್ರಿಗಳ ಸಮ್ಮುಖದಲ್ಲಿ ಬಡವರಿಗೆ ನಿವೇಶನ ಹಾಗೂ ಮನೆ ಮಂಜೂರಾತಿ ಪತ್ರ ವಿತರಿಸಲಾಗುವುದು ಎಂದರು. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಸಚಿವ ಜಮೀರ್ ಅಹಮದ್,ವಸತಿ ನಿಗಮದ ಅಧಿಕಾರಿಗಳು, ಮಾಲೂರು ಪುರಸಭೆ ಅಧಿಕಾರಿಗಳು ಭಾಗವಹಿಸಿದ್ದರು.