ಹೊನ್ನಾಳಿ: ನಗರ ದೇವತೆ ಶ್ರೀಮಾರಿಕಾಂಬ ದೇವಿ ಜಾತ್ರಾ ಮಹೋತ್ಸವ ಆಗಸ್ಟ್ 4 ರಿಂದ 6ರವರೆಗೆ ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಎಚ್.ಎ. ಧರ್ಮಪ್ಪ ಹೇಳಿದರು.

ಸೋಮವಾರ ಪಟ್ಟಣದ ಶ್ರೀ ಮಾರಿಕಾಂಬದೇವಿ ಜಾತ್ರಾ ಮಹೋತ್ಸವದ ಪೂರ್ವಸಿದ್ಧತಾ ಕಾರ್ಯಗಳನ್ನು ಪರಿಶೀಲನೆ ಮಾಡಿ ನಂತರ ಸಭೆಯಲ್ಲಿ ಅವರು ಮಾತನಾಡಿದರು. ಮಾರಿಹಬ್ಬದ ಕುರಿತು ಜುಲೈ 28ರ ಮಂಗಳವಾರ ರಾತ್ರಿ ಸಾರಲಾಗುವುದು (ಸಾರುವುದು). ಇಲ್ಲಿಂದ ಪ್ರತಿದಿನ ದೇವಿಗೆ ಸಂಬಂಧಪಟ್ಟ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ ಎಂದರು.

ಹಿರೇಕಲ್ಮಠದ ಡಾ. ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆ.4ರ ಬೆಳಗ್ಗೆ 10.30 ರಿಂದ 11 ಗಂಟೆವರೆಗೆ ಶುಭ ಮುಹೂರ್ತದಲ್ಲಿ ದೇವಿಗೆ ಮಾಂಗಲ್ಯಧಾರಣೆ, ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9 ಗಂಟೆಗೆ ಕುಂಬಾರ ಬೀದಿಯಲ್ಲಿರುವ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಿಂದ ಡೊಳ್ಳು, ಭಜನೆ, ವಾದ್ಯಗಳೊಂದಿಗೆ ರಾಜಬೀದಿಯಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮೂಲಕ ಶ್ರೀ ಹಳದಮ್ಮದೇವಿ ದೇವಸ್ಥಾನದ ಹಿಂಭಾಗದಲ್ಲಿರುವ ಶ್ರೀದೇವಿ ಗದ್ದಿಗೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು. ಅನಂತರ ಶ್ರೀ ದೇವಿಗೆ ಮಹಾಮಂಗಳಾರತಿ, ಹುಲಸಿನ ಜೋಳ ಹಾಕುವುದು ಮುಂತಾದ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ಜಾತ್ರಾ ಮಹೋತ್ಸವದ ಉಸ್ತುವಾರಿ ಬಯಲುಸೀಮೆ ಪ್ರದೇಶ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಊರಿನ ಯುವ ಮುಖಂಡ ಎಚ್.ಬಿ. ಮಂಜಪ್ಪ ಮಾತನಾಡಿ, ಆ.5ರಂದು ಸಂಜೆ 5 ಗಂಟೆಗೆ ಗಾವುಮರಿ ತರುವುದು, ಹುಲುಸಿನ ಜೋಳ ಒಡೆಯುವುದು, ಅಸಾದಿ ಹೊಗಳಿಕೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಆ.6ರಂದು ಮಧ್ಯಾಹ್ನ 1.29 ಗಂಟೆಗೆ ಅಲಂಕರಿಸಿದ ರಥದಲ್ಲಿ ದೇವಿಗೆ ಮಹಾ ಮಂಗಳಾರತಿಯೊಂದಿಗೆ ಡೊಳ್ಳು, ಭಜನೆ, ಕೋಲಾಟ, ಕೀಲುಕುದುರೆ, ನೃತ್ಯ, ಚಂಡೆ, ಹೆಣ್ಣುಮಕ್ಕಳ ಡೊಳ್ಳಿನ ತಂಡದವರು ನಗರದ ರಾಜಬೀದಿಗಳಲ್ಲಿ ಮೆರವಣಿಗೆ ಹೊರಟು ತುಮ್ಮಿನಕಟ್ಟೆ ರಸ್ತೆಯಲ್ಲಿರುವ ಮಾತಂಗೆಮ್ಮ ದೇವಿ ದೇವಸ್ಥಾನಕ್ಕೆ ಕರೆತರಲಾಗುವುದು. ಬಳಿಕ ಪೂಜಾ ವಿಧಿ ವಿಧಾನಗಳ ಮೂಲಕ ಮಹೋತ್ಸವಕ್ಕೆ ತೆರೆ ಎಳೆಯಲಾಗುವುದು ಎಂದರು.


ಸರ್ವಜನಾಂಗದವರು ಕೂಡಿ ಮಾಡುವ ಈ ಜಾತ್ರಾ ಮಹೋತ್ಸವದ ಉದ್ದೇಶ ಸಮೃದ್ಧ ಮಳೆಯಾಗಿ ಹುಲುಸಾಗಿ ಬೆಳೆ ಬೆಳೆಯುವಂತೆ ದೇವಿ ಕರುಣಿಸಬೇಕು ಎಂದು ಪ್ರಾರ್ಥನೆ ಸಲ್ಲಿಸುವುದಾಗಿದೆ. ಎಲ್ಲರೂ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು

ಮುಖಂಡರಾದ ಎಚ್.ಎ. ಉಮಾಪತಿ ಜಾತ್ರಾ ವಿಧಿವಿಧಾನಗಳ ಕುರಿತು ಮಾತನಾಡಿದರು. ಈ ಸಂದರ್ಭ ಜಾತ್ರಾ ಮಹೋತ್ಸವ ಸಮಿತಿಯ ಖಜಾಂಚಿ ಕೆ.ಪುಟ್ಟಪ್ಪ, ಗೌರವಾಧ್ಯಕ್ಷರಾದ ಎಚ್.ಎ. ರಾಜಪ್ಪ, ತೆಂಗಿನಮರದ ಮಾದಪ್ಪ, ಮಾಲೀಗೌಡ್ರು, ಮುರುಗಿ ರಮೇಶ್, ಜಾತ್ರಾ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಆರ್. ಮಹೇಶ್, ದೊಡ್ಡಕೇರಿಯ ಬುದ್ಧಿವಂತರ ನರಸಿಂಹಪ್ಪ, ಗೌಡ್ರು ಗಾಳೇಶಪ್ಪ, ಮುಖಂಡರಾದ ಎಚ್.ಎ. ನರಸಿಂಹಪ್ಪ, ಕೋಳಿ ಸತೀಶ್, ವಿಜಯ್‌ ಗೌಡ, ರಾಜೇಂದ್ರ, ಎ.ಕೆ.ರಾಜು, ತಳವಾರ ಅಣ್ಣಪ್ಪ, ಚಿಗರಿ ಮಂಜು, ನೂರಾರು ಯುವಕರು ಹಾಜರಿದ್ದರು.

- - -

-27ಎಚ್.ಎಲ್.ಐ1: