ಭಕ್ತಿ,ಶಕ್ತಿ, ಯುಕ್ತಿ ಮೂರರ ತ್ರಿವೇಣಿ ಸಂಗಮವೇ ಮಾರುತಿ

| Published : Apr 13 2025, 02:00 AM IST

ಸಾರಾಂಶ

ಜೊತೆಗೆ ಭಕ್ತಿ, ಶಕ್ತಿ, ಯುಕ್ತಿ ಈ ಮೂರರ ತ್ರಿವೇಣಿ ಸಂಗಮವೇ ಮಾರುತಿಯಾಗಿದ್ದಾರೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ನುಡಿದರು.

ಕನ್ನಪ್ರಭ ವಾರ್ತೆ ರಬಕವಿ-ಬನಹಟ್ಟಿ

ಜೊತೆಗೆ ಭಕ್ತಿ, ಶಕ್ತಿ, ಯುಕ್ತಿ ತ್ರಿವೇಣಿ ಸಂಗಮವೇ ಮಾರುತಿಯಾಗಿದ್ದಾರೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ನುಡಿದರು.

ತಾಲೂಕಿನ ಮದನಮಟ್ಟಿ ಗ್ರಾಮದ ಗುಡ್ಡದ ಪ್ರದೇಶದಲ್ಲಿರುವ ಶ್ರೀಹನುಮಾನ ದೇವಸ್ಥಾನದಲ್ಲಿ ಹನುಮ ಜಯಂತಿ ನಿಮಿತ್ತ ಶನಿವಾರ ನೂತನ ರಥಕ್ಕೆ ಪೂಜೆ ಸಲ್ಲಿಸಿ ಅವರು ಆಶೀರ್ವಚನ ನೀಡಿದರು. ಬುದ್ದಿವಂತರಲ್ಲಿ ಶ್ರೇಷ್ಠವಾದ ವ್ಯಕ್ತಿ ಹನುಮ. ಹಾಗಾಗಿ ಲಂಕೆಗೆ ಸೇತುವೆ ಕಟ್ಟುವ ಸಂದರ್ಭದಲ್ಲಿ ಹನುಮಂತ ಕಲ್ಲುಗಳ ಮೇಲೆ ಜೈ ಶ್ರೀರಾಮ ಎಂದು ಬರೆದರೆ ಅದು ನೀರಿನಲ್ಲಿ ತೇಲುತ್ತಿತ್ತು. ಇದನ್ನು ರಾಮ ಕಂಡು ಹನುಮನ ಭಕ್ತಿಯನ್ನು ಕೊಂಡಾಡಿದ ಎಂದು ದೃಷ್ಟಾಂತವನ್ನು ವಿವರಿಸಿದರು.

ಗ್ರಾಮದ ಹನುಮಾನ ದೇವಸ್ಥಾನದ ಸುತ್ತಲೂ ನವಗ್ರಹ, ಆನೆಗಳ ಪ್ರತಿಮೆ, ಆಲಗಂಬ, ತುಳಸಿ ಕಟ್ಟೆ, ಸಾವಿರಕ್ಕೂ ಅಧಿಕ ಮರಗಳನ್ನು ನೆಟ್ಟು ಸುಂದರ ತಾಣವನ್ನಾಗಿ ಮಾಡಿದ್ದು,ಹಲವು ದೇವಾನುದೇವತೆಗಳ ಮಂದಿರ ನಿರ್ಮಿಸಿದ್ದು ಇದೊಂದು ಪುಣ್ಯಕ್ಷೇತ್ರವಾಗಿ ದೇಶಕ್ಕೆ ಕೀರ್ತಿ ಮತ್ತು ಮಾದರಿ ಗ್ರಾಮವಾಗಲಿ ಎಂದು ಶ್ರೀಗಳು ಹಾರೈಸಿದರು.

ಗ್ರಾಮದ ಹಿರಿಯರಾದ ಬಾಬಾಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ದೇವಸ್ಥಾನದ ಅಭಿವೃದ್ಧಿ ನಡೆದು ಬಂದ ದಾರಿಯನ್ನು ವಿವರಿಸಿದರು.

ಗರ್ಭಗುಡಿಯಲ್ಲಿರುವ ಹನುಮನಿಗೆ ವಿಶೇಷ ಪೂಜೆ, ಹೋಮ ಹವನ, ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸೇರಿದಂತೆ ಅನೇಕ ಕಾರ್ಯಕ್ರಮ ಜರುಗಿದವು.

ನಂತರ ಜರುಗಿದ ವೇದಿಕೆ ಸಮಾರಂಭದಲ್ಲಿ ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು, ಹಳಿಂಗಳಿಯ ಶಿವಾನಂದ ಶ್ರೀಗಳು, ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು, ಬಂಡಿಗಣಿ ನೀಲಮಾಣಿಕ ಮಠದ ಅನ್ನದಾನೇಶ್ವರ ಶ್ರೀಗಳು, ಚಿಮ್ಮಡ ವಿರಕ್ತಮಠದ ಪ್ರಭು ಸ್ವಾಮಿಗಳು, ಚಿಮ್ಮಡ ಸಾಧುನ ಮಹಾರಾಜ ಮಠದ ಜನಾರ್ದನ ಮಹಾರಾಜರ ಯರಗಟ್ಟಿಕರ ಸ್ವಾಮಿಗಳು, ಸಂಸದ ಪಿ.ಸಿ. ಗದ್ದಿಗೌಡರ, ವಿದ್ಯಾಧರ ಸವದಿ, ಲಕ್ಕಪ್ಪ ಪಾಟೀಲ, ಯಮನಪ್ಪ ಕದ್ದಿ, ಶ್ರೀಶೈಲ ಕಂಕನವಾಡಿ, ಸುರೇಶ ಪಾಟೀಲ, ರಾಜು ಮಠದ, ಶ್ರೀಶೈಲ ದಲಾಲ, ಸಂಜಯ ತೆಗ್ಗಿ, ಸಂಗಮೇಶ ಪಾಟೀಲ, ಎಸ್, ಎಸ್, ಪಾಲಬಾಂವಿ ವೇದಿಕೆಯಲ್ಲಿದ್ದರು. ಸಂಗಮೇಶ ಪಾಟೀಲ ಸ್ವಾಗತಿಸಿದರು. ಮಲ್ಲಿಕಾರ್ಜುನ ಗಡೆನ್ನವರ ನಿರೂಪಿಸಿದರು. ಹನುಮಾನ ದೇವಸ್ಥಾನ ಸೇವಾ ಸಮಿತಿಯ ಸದಸ್ಯರು, ಮಹಿಳಾ ಮಂಡಳದ ಸದಸ್ಯೆಯರು ಹಾಗೂ ಗ್ರಾಮದ ಸರ್ವರು, ಸುತ್ತಮುತ್ತಲ ಗ್ರಾಮಸ್ಥರು ಇದ್ದರು. ಸಂಜೆ ರಥೋತ್ಸವ ಸಂಭೃಮ ಸಡಗರದಿಂದ ಜರುಗಿತು.