ಸಾರಾಂಶ
ಜಿಲ್ಲೆಯ ವಿವಿಧೆಡೆ ಮೈಸೂರು ಮಹಾರಾಜರಿಗೆ ಸೇರಿದ ಸುಮಾರು 4000 ಎಕರೆಗೂ ಅಧಿಕ ಆಸ್ತಿಯನ್ನು ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ರಾಜವಂಶಸ್ಥೆ ಪ್ರಮೋದಾದೇವಿ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದ ಬೆನ್ನಲ್ಲೇ ಹಲವು ಗ್ರಾಮಗಳು ಜನರು ಆಸ್ತಿ ಕಳೆದುಕೊಳ್ಳುವ ಭಯದಲ್ಲಿ ವಿಚಲಿತರಾಗಿದ್ದಾರೆ.
ಚಾಮರಾಜನಗರ : ಜಿಲ್ಲೆಯ ವಿವಿಧೆಡೆ ಮೈಸೂರು ಮಹಾರಾಜರಿಗೆ ಸೇರಿದ ಸುಮಾರು 4000 ಎಕರೆಗೂ ಅಧಿಕ ಆಸ್ತಿಯನ್ನು ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ರಾಜವಂಶಸ್ಥೆ ಪ್ರಮೋದಾದೇವಿ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದ ಬೆನ್ನಲ್ಲೇ ಹಲವು ಗ್ರಾಮಗಳು ಜನರು ಆಸ್ತಿ ಕಳೆದುಕೊಳ್ಳುವ ಭಯದಲ್ಲಿ ವಿಚಲಿತರಾಗಿದ್ದಾರೆ.
ಆದರೆ ಜಿಲ್ಲಾಧಿಕಾರಿ ಅವರು ಈ ಜನರಿಗೆ ನಿಮ್ಮ ಊರುಗಳು ಕಂದಾಯ ಗ್ರಾಮಗಳಾಗುವ ಹಂತದಲ್ಲಿದ್ದು ಯಾವುದೇ ಆತಂಕ ಬೇಡ ಎಂದು ಅಭಯ ನೀಡಿದ್ದಾರೆ.
60-70 ವರ್ಷಗಳಿಂದ ಭೂಮಿ ನಂಬಿ ಜೀವನ ಸಾಗಿಸುತ್ತಿರುವ ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ, ಅಟ್ಟಗುಳಿಪುರ ಗ್ರಾಮಸ್ಥರು ಶುಕ್ರವಾರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಜಯಚಾಮರಾಜೇಂದ್ರ ಒಡೆಯರ್ ನಮಗೆ 1035 ಎಕರೆ ಭೂಮಿ ದಾನ ನೀಡಿದ್ದಾರೆ. 1982ರಲ್ಲಿ ಸರ್ಕಾರ ಸಾಗುವಳಿ ಚೀಟಿ ನೀಡಿದೆ. ಈಗ ಪ್ರಮೋದಾದೇವಿ ಒಡೆಯರ್ ನಮ್ಮ ಊರಿನ ಸರ್ವೆ ನಂ.ಗಳನ್ನು ಉಲ್ಲೇಖಿಸಿ ಖಾತೆ ಮಾಡಿಕೊಡುವಂತೆ ಪತ್ರ ಬರೆದಿದ್ದಾರೆ ಎಂದು ಜಿಲ್ಲಾಧಿಕಾರಿ ಬಳಿ ಅಳಲು ತೋಡಿಕೊಂಡರು. 4000ಕ್ಕೂ ಹೆಚ್ಚು ಜನಸಂಖ್ಯೆ ಸಿದ್ದಯ್ಯನಪುರ ಗ್ರಾಮದಲ್ಲಿದ್ದು ಪ್ರಮೋದಾದೇವಿ ಅವರಿಗೆ ಭೂಮಿ ಖಾತೆ ಮಾಡಿ ಕೊಟ್ಟರೆ ಇಡೀ ಊರಿಗೆ ಊರೆ ಖಾಲಿ ಮಾಡಬೇಕಾಗುತ್ತದೆ. ಈ ಸಮಸ್ಯೆ ಬಗೆಹರಿಸಿ ಎಂದು ಮನವಿ ಮಾಡಿದರು.
ಆತಂಕ ಬೇಡ ಎಂದ ಜಿಲ್ಲಾಧಿಕಾರಿ:
ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರತಿಕ್ರಿಯಿಸಿ, ಈಗಾಗಲೇ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ನಡೆಸಿ ಸರ್ಕಾರಿ ಜಾಗ ಎಂದು ಖಚಿತಪಡಿಸಿಕೊಂಡು ಕಂದಾಯ ಗ್ರಾಮವಾಗಿ ಘೋ಼ಷಣೆ ಮಾಡಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತಿದೆ. ಪ್ರಮೋದಾದೇವಿ ಒಡೆಯರ್ ತಕರಾರು ಅರ್ಜಿ ಸಲ್ಲಿಸಿದ್ದರೂ ಯಾವುದೇ ಪೂರಕ ದಾಖಲೆ ಲಗತ್ತಿಸಿಲ್ಲ. ನ್ಯಾಯಾಲಯದ ಆದೇಶವಿಲ್ಲ. ಆದ್ದರಿಂದ, ಯಾವುದೇ ಆತಂಕ ಬೇಡ, ನಿಮ್ಮ ಊರುಗಳು ಕಂದಾಯ ಗ್ರಾಮಗಳಾಗುವ ಹಂತದಲ್ಲಿವೆ ಎಂದು ಭರವಸೆ ನೀಡಿದರು.
ಏನಿದು ಪತ್ರ ವಿವಾದ:
ಚಾಮರಾಜನಗರ ಜಿಲ್ಲೆಯಲ್ಲಿ ಮೈಸೂರು ಮಹಾರಾಜರಿಗೆ ಸೇರಿರುವ ಖಾಸಗಿ ಆಸ್ತಿಗಳನ್ನು ಖಾತೆ ಮಾಡಿಕೊಡುವ ಬಗ್ಗೆ ಹಾಗೂ ಖಾತೆಯಾಗುವ ತನಕ ಸದರಿ ಜಮೀನುಗಳ ಬಗ್ಗೆ ಯಾವುದೇ ರೀತಿ ಖಾತೆ, ಕಂದಾಯ ಗ್ರಾಮ ಇನ್ನಿತರೆ ಯಾವುದೇ ವಹಿವಾಟು ನಡೆಸದಂತೆ ಜಿಲ್ಲಾಡಳಿತಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮಾ.27 ರಂದು ತಕರಾರು ಅರ್ಜಿ ಸಲ್ಲಿಸಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ 4 ಸಾವಿರಕ್ಕೂ ಅಧಿಕ ಎಕರೆ ಭೂಮಿ ಮಹಾರಾಜರ ಖಾಸಗಿ ಸ್ವತ್ತಾಗಿದೆ. ಈ ಸ್ವತ್ತುಗಳನ್ನು ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಪ್ರಮೋದಾದೇವಿ ಕೋರಿದ್ದಾರೆ.