ಪೆಟ್ರೋಲ್‌ ಸುರಿದುಕೊಳ್ಳುತ್ತೇನೆಂದು ವ್ಯಾಪಾರಿಯ ಬೆದರಿಕೆ

ಜಿಸಿಬಿ ವೇಗಕ್ಕೆ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ಕೆಲಕಾಲ ಭೀತಿ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಪಾದಾಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿದ್ದ ಅಂಗಡಿ ಮುಂಗಟ್ಟುಗಳಿಗೆ ಶನಿವಾರ ಕೊಳ್ಳೇಗಾಲ ನಗರಸಭೆ ಬಿಸಿ ಮುಟ್ಟಿಸಿದ್ದು, ತೆರವು ಕಾರ್ಯಾಚರಣೆ ನಡೆಸಿದೆ. ಈ ವೇಳೆ ವ್ಯಾಪಾರಿಯೋರ್ವ ಪತ್ರಕರ್ತರೊಬ್ಬರ ಮೇಲೆ ಪೆಟ್ರೋಲ್‌ ಸುರಿದ ಘಟನೆ ನಡೆದಿದೆ. ಸಮಯೋಚಿತವಾಗಿ ಪೊಲೀಸರು ವರ್ತಿಸಿದ ಹಿನ್ನೆಲೆ ಆರೋಪಿಯನ್ನು ವಶಕ್ಕೆ ಪಡೆದು ಪರಿಸ್ಥಿತಿ ಶಾಂತಗೊಳಿಸಿದರು.

ಕುಮಾರ ಎಲೆಕ್ಟ್ರಿಕಲ್ ರಸ್ತೆ, ಚಿನ್ನಬೆಳ್ಳಿ ವರ್ತಕರ ರಸ್ತೆ, ಎಸ್‌.ಟಿ ರಸ್ತೆ, ರಾಜಕುಮಾರ್‌ ರಸ್ತೆ, ಬಸ್ತೀಪುರ ರಸ್ತೆ ಸೇರಿದಂತೆ ಹಲವೆಡೆ ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು.


ಸುಪ್ರೀಂ ಕೋರ್ಟ್‌ ಆದೇಶದಂತೆ ನಗರಸಭೆ ಅಧಿಕಾರಿಗಳು, ಪೊಲೀಸರು ಜಂಟಿಯಾಗಿ ತೆರವುಗೊಳಿಸಿದರು.

ಪೆಟ್ರೋಲ್ ಸುರಿದು ಹೈಡ್ರಾಮ:

ರಾಜಕುಮಾರ್‌ ರಸ್ತೆಯಿಂದ ಹಳೆ ಕುರುಬರ ಬೀದಿಗೆ ತೆರಳುವ ಮಾರ್ಗದಲ್ಲಿ ಒತ್ತುವರಿ ತೆರವು ವೇಳೆ ನ್ಯೂ ಮದೀನ ಚಿಕನ್‌ ಸೆಂಟರ್‌ ಮಾಲೀಕ ಸೈಯದ್‌ ಆಸೀಫ್‌ ಎಂಬಾತ ತನ್ನ ಅಂಗಡಿ ತೆರವು ಮಾಡಿದ್ದೇ ಆದಲ್ಲಿ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದ. ಈ ಸನ್ನಿವೇಶವನ್ನು ಚಿತ್ರೀಕರಿಸುತ್ತಿದ್ದ ಪತ್ರಕರ್ತ ಬಸಂತ್‌ ಕುಮಾರ್‌ ಎಂಬುವರ ಮೇಲೆ ಪೆಟ್ರೋಲ್‌ ಸುರಿಯಲು ಯತ್ನಿಸಿ ಕೈಗೆ ಹಾಕಿದ್ದಾನೆ. ಪೊಲೀಸರು ಕ್ಷಿಪ್ರವಾಗಿ ಪ್ರತಿಕ್ರಿಯಸಿ ಸೈಯದ್‌ನನ್ನು ವಶಕ್ಕೆ ಪಡೆದರು. ಈ ವೇಳೆ ಬಸಂತ್ ಮೇಲೆ ಹಾಗೂ ಆಹಾರ ನಿರೀಕ್ಷಕ ಚೇತನ್, ಪೌರಯುಕ್ತ ನಟರಾಜು ಹಾಗೂ ಇನ್ನಿತರರ ಮೇಲೆ ಪೆಟ್ರೋಲ್ ಚೆಲ್ಲಿತು ಎನ್ನಲಾಗಿದೆ.

ಈ ವೇಳೆ ಪತ್ರಕರ್ತ ಬಸಂತ್ ಪಟ್ಟಣ ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದರಾದರೂ ಒತ್ತಡಕ್ಕೆ ಮಣಿದು ಪ್ರಕರಣ ಹಿಂಪಡೆದರು ಎನ್ನಲಾಗಿದೆ.

ಕರೆಂಟ್‌ ಕಂಬಕ್ಕೆ ಜೆಸಿಬಿ ಡಿಕ್ಕಿ:

ಒತ್ತುವರಿ ತೆರವು ಮಾಡುತ್ತಿದ್ದ ಜೆಸಿಬಿಯೊಂದು ರಭಸವಾಗಿ ಬಂದ ಹಿನ್ನೆಲೆ ಚಿಕನ್‌ ಅಂಗಡಿ ಮುಂದೆ ಇದ್ದ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆಯಿತು. ಪರಿಣಾಮ ಕಂಬ ಅಲುಗಾಡಿತು. ಈ ವೇಳೆ ಅಲ್ಲಿದ್ದ ಜನರು ಕೆಲ ಕಾಲ ಭಯಭೀತರಾದರು. ಅದೃಷ್ಟವಶಾತ್‌ ಯಾವುದೇ ಅಪಾಯ ಸಂಭವಿಸಿಲ್ಲ.

---1ಕೆಜಿಎಲ್ 76ಕೊಳ್ಳೇಗಾಲದ ಹಲವೆಡೆ ಪುಟ್‌ಪಾತ್ ತೆರವು ವೇಳೆ ಪೆಟ್ರೋಲ್ ಸುರಿದುಕೊಳ್ಳುವುದಾಗಿ ಅಧಿಕಾರಿಗಳಿಗೆ ಬೆದರಿಸಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ಯುತ್ತಿರುವುದು.