ಪಕ್ಷವನ್ನು ನಾವು ಬಿಟ್ಟುಕೊಡೊದಿಲ್ಲ. ಪಕ್ಷಕ್ಕಾಗಿ ನಾವು ಹೋರಾಟ ಮಾಡುತ್ತೇವೆ. ನಾವು ಬೇಡ ಅಂದರು ಸರ್ಕಾರ ಉಳಿಯುತ್ತದೆ ಎಂದು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಮ್ಮಲ್ಲಿ ಯಾರೇ ಮುಖ್ಯಮಂತ್ರಿ ಆದರೂ ಪಕ್ಷ ಬಹಳ ದೊಡ್ಡದು. ಪಕ್ಷವನ್ನು ನಾವು ಬಿಟ್ಟುಕೊಡೊದಿಲ್ಲ. ಪಕ್ಷಕ್ಕಾಗಿ ನಾವು ಹೋರಾಟ ಮಾಡುತ್ತೇವೆ. ನಾವು ಬೇಡ ಅಂದರು ಸರ್ಕಾರ ಉಳಿಯುತ್ತದೆ ಎಂದು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಚಿಂತನೆ ಕುರಿತು ಪ್ರತಿಕ್ರಿಯಿಸಿದ ಅವರು, ಈಗಾಗಲೇ ಸಿಎಂ, ಡಿಸಿಎಂ ಪ್ರತಿಕ್ರಿಯಿಸಿದ್ದಾರೆ. 140 ಜನ ಶಾಸಕರು ನಾವು ಒಗ್ಗಟ್ಟಾಗಿಲ್ವಾ ಹೇಗೆ?, ನಮ್ಮ ಒಗ್ಗಟ್ಟಿನ ಬಗ್ಗೆ ಸಂಶಯ ಇದೆಯಾ?. ಬಿಜೆಪಿಗೆ ಬೇಗ ಗದ್ದುಗೆ ಏರುವ ಆತುರತೆ ಇದೆ ಎಂದರು. ಡಿಸಿಎಂ ನಿವಾಸದಲ್ಲಿ ಸಿಎಂ ಬ್ರೇಕ್‌ಫಾಸ್ಟ್ ಮೀಟಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಹಳ ಒಳ್ಳೆಯದಾಯ್ತು, ದೇವರು ಒಳ್ಳೆಯ ಬುದ್ಧಿ ಕೊಡಲಿ. ಇಬ್ಬರು ಕೂಡಿ ಮಾಧ್ಯಮಗಳಿಗೆ ನೀಡುತ್ತಿರುವ ಆಹಾರ ಬಂದ್ ಆಗಲಿ ಎಂದು ಆಶಿಸಿದರು.

ರಾಜ್ಯದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರಕ್ಕಾಗಿ ರೈತರ ಹೋರಾಟ ಕುರಿತು ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರಕ್ಕೆ ಈಗಾಗಲೇ ನಾನು ಪತ್ರ ಬರೆದು ಮನವಿ ಮಾಡಿದ್ದೇನೆ. ರಾಜ್ಯದಲ್ಲಿ ಮೆಕ್ಕೆಜೋಳ ಉತ್ಪಾದನೆ ಹೆಚ್ಚಾಗಿದೆ. ಆತಂಕದ ಪರಿಸ್ಥಿತಿಯಿದೆ ಎಂದು ಪತ್ರ ಬರೆದಿದ್ದೇನೆ. ಕಳೆದ ಅಕ್ಟೋಬರ್‌ನಲ್ಲೇ ಪತ್ರ ಬರೆದು ಕೇಂದ್ರಕ್ಕೆ ಮಾಹಿತಿ ನೀಡಿದ್ದೇನೆ.‌ ಮೆಕ್ಕೆಜೋಳ ಖರೀದಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ. ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ₹1800 ಹಾಗೂ ₹2000 ಇದೆ. ಇದನ್ನು ಏಕೆ ಬಿಜೆಪಿ ನಾಯಕರು ಕೇಂದ್ರಕ್ಕೆ ಪ್ರಶ್ನೆ ಮಾಡೋದಿಲ್ಲ? ಪಾರ್ಲಿಮೆಂಟ್ ನಡೆದಿದೆ‌. ರಾಜ್ಯದವರು ಇದನ್ನು ಏಕೆ ಅಧಿವೇಶನದಲ್ಲಿ ಪ್ರಶ್ನೆ ಮಾಡುತ್ತಿಲ್ಲ?. ಬೊಮ್ಮಾಯಿ ಅವರು ರೈತರ ಜೊತೆಗೆ ಹೋಗಿ ಪ್ರತಿಭಟನೆ ಮಾಡುತ್ತಾರೆ. ಅಧಿವೇಶನದಲ್ಲಿ ಯಾಕೆ ಪ್ರಸ್ತಾಪ ಮಾಡ್ತಾಯಿಲ್ಲ? ನಾಳೆ ಪ್ರಸ್ತಾಪ ಮಾಡಲಿ ಎಂದ ಅವರು, ಕೊನೆ ಪಕ್ಷ ಮಾಧ್ಯಮಗಳಿಗಾದರೂ ಬೊಮ್ಮಾಯಿ ಹೇಳಿಕೆ ನೀಡಲಿ ಎಂದು ಆಗ್ರಹಿಸಿದರು.

ಕರ್ನಾಟಕವನ್ನು ಬಿಜೆಪಿ ಸಂಸದರು ಟಾರ್ಗೆಟ್ ಮಾಡುತ್ತಿದ್ದಾರೆ. ನಾನು ಕೇಂದ್ರಕ್ಕೆ ಎಷ್ಟೇ ಪತ್ರ ಬರೆದರೂ ನಮಗೆ ಮಾತುಕತೆಗೆ ಕರೆಯುತ್ತಿಲ್ಲ. ಮೆಕ್ಕೆಜೋಳ ಖರೀದಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಸೀಮಿತ ಅಧಿಕಾರವಿದೆ. ಮಾಧ್ಯಮಗಳೇ ಇದರ ಬಗ್ಗೆ ಅಧ್ಯಯನ ಮಾಡಲಿ. ಮೆಕ್ಕೆಜೋಳ ಖರೀದಿ ವಿಚಾರದಲ್ಲಿ ಯಾರ ಅಧಿಕಾರ ಜಾಸ್ತಿ ಇದೆ ಅನ್ನೋದನ್ನು ನೀವೇ ಜನರಿಗೆ ತಿಳಿಸಿ ಎಂದರು.