ರಂಗ-ಶಂಕರನ ಕೃಪೆಯಿಂದ ನಾಡಿಗೆ ಮಳೆ-ಬೆಳೆಯಾಗಲಿ

| Published : Apr 08 2025, 12:33 AM IST

ಸಾರಾಂಶ

ದಿನದಿಂದ ದಿನಕ್ಕೆ ಬೇಸಿಗೆ ತೀವ್ರತೆ ಹೆಚ್ಚಾಗುತ್ತಿದ್ದು ಪ್ರಕೃತಿಯಲ್ಲೂ ಅಸಮತೋಲನ ಉಂಟಾಗಿ ಹನಿ ಹನಿ ನೀರಿಗಾಗಿ ಜನ ಜಾನುವಾರುಗಳು ಪರದಾಡುವಂತಾಗಿದ್ದು ಶ್ರೀ ಕ್ಷೇತ್ರದ ಆರಾಧ್ಯ ದೈವಗಳಾದ ರಂಗ-ಶಂಕರ ಹಾಗೂ ಹಿರಿಯ ಶ್ರೀಗಳವರ ಕೃಪೆಯಿಂದ ಕಲ್ಪತರು ನಾಡಿಗೆ ಆದಷ್ಟು ಬೇಗ ಮಳೆ ಬರುವ ಮೂಲಕ ಎಲ್ಲರ ದಾಹ ತೀರುವಂತಾಗಿ ಉತ್ತಮ ಕೃಷಿ ಚಟುವಟಿಕೆಗಳು ಪ್ರಾರಂಭವಾಗಲಿ ಎಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರು ಹರಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ದಿನದಿಂದ ದಿನಕ್ಕೆ ಬೇಸಿಗೆ ತೀವ್ರತೆ ಹೆಚ್ಚಾಗುತ್ತಿದ್ದು ಪ್ರಕೃತಿಯಲ್ಲೂ ಅಸಮತೋಲನ ಉಂಟಾಗಿ ಹನಿ ಹನಿ ನೀರಿಗಾಗಿ ಜನ ಜಾನುವಾರುಗಳು ಪರದಾಡುವಂತಾಗಿದ್ದು ಶ್ರೀ ಕ್ಷೇತ್ರದ ಆರಾಧ್ಯ ದೈವಗಳಾದ ರಂಗ-ಶಂಕರ ಹಾಗೂ ಹಿರಿಯ ಶ್ರೀಗಳವರ ಕೃಪೆಯಿಂದ ಕಲ್ಪತರು ನಾಡಿಗೆ ಆದಷ್ಟು ಬೇಗ ಮಳೆ ಬರುವ ಮೂಲಕ ಎಲ್ಲರ ದಾಹ ತೀರುವಂತಾಗಿ ಉತ್ತಮ ಕೃಷಿ ಚಟುವಟಿಕೆಗಳು ಪ್ರಾರಂಭವಾಗಲಿ ಎಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರು ಹರಸಿದರು.

ತಾಲೂಕಿನ ಕೆರೆಗೋಡಿ-ರಂಗಾಪುರ ಶ್ರೀಮಠದಲ್ಲಿ ಗ್ರಾಮೀಣ ಶಿಕ್ಷಣ ಭೀಷ್ಮ, ತ್ರಿವಿಧ ದಾಸೋಹಿ, ನಡೆದಾಡುವ ಶಂಕರೇಶ್ವರ, ಅಭಿನವ ಸಿದ್ಧರಾಮ ಎಂದೇ ಪ್ರಖ್ಯಾತರಾದ ಸುಕ್ಷೇತ್ರಾಧ್ಯಕ್ಷರಾದ ಏಳನೇ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರ ೭೩ನೇ ವರ್ಷದ ಜನ್ಮವರ್ಧಂತಿ ಅಂಗವಾಗಿ ಸುಕ್ಷೇತ್ರದ ಹಿರಿಯ ವಿದ್ಯಾರ್ಥಿಗಳು ಹಾಗೂ ಭಕ್ತರು ಹಮ್ಮಿಕೊಂಡಿದ್ದ ಜನ್ಮವರ್ಧಂತಿ ಮಹೋತ್ಸವವನ್ನು ಶ್ರೀಗಳವರ ಪಾದಪೂಜೆಯೊಂದಿಗೆ ನೆರವೇರಿಸಲಾಯಿತು.

ಗುರುವಂದನೆ ಸ್ವೀಕರಿಸಿ ಆಶೀರ್ವಚನ ನೀಡಿದ ಶ್ರೀಗಳು ಪ್ರಕೃತಿಯ ಏರುಪೇರು ಹಾಗೂ ಗಿಡಮರಗಳ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಇತ್ತೀಚಿನ ವರ್ಷಗಳಲ್ಲಿ ಉಂಟಾಗುತ್ತಿರುವ ಹವಾಮಾನ ಅಸಮತೋಲನವು ಇಂದಿನ ಬರಗಾಲಕ್ಕೆ ಕಾರಣವಾಗುತ್ತಿದೆ. ಇದರಿಂದ ರೈತರು ಕೃಷಿಯಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸುವಂತಾಗಿದ್ದು ಸರ್ಕಾರ ಕೆರೆಕಟ್ಟೆಗಳನ್ನು ಅಭಿವೃದ್ಧಿಗೊಳಿಸಿ ಲಭ್ಯವಿರುವ ಮೂಲಗಳಿಂದ ನೀರು ತುಂಬಿಸುವ ಕೆಲಸ ಮಾಡಬೇಕಿದೆ ಎಂದರು.

ಶಾಸಕ ಕೆ. ಷಡಕ್ಷರಿ ಮಾತನಾಡಿ ಇದೊಂದು ಭಕ್ತಿಮಾರ್ಗದ ಶ್ರೀಮಠವಾಗಿದೆ. ಕೃಷಿ ಜೊತೆ ಹೆಚ್ಚಿನ ಒಡನಾಟ ಇಟ್ಟುಕೊಂಡಿರುವ ಶ್ರೀಗಳು ಸರಳಜೀವನದ ಮಾರ್ಗದರ್ಶಕರಾಗಿದ್ದು ಇಲ್ಲಿನ ಎಲ್ಲ ಕಾರ್ಯಕ್ರಮಗಳಿಗೂ ನನ್ನ ಸ್ಪಂಧನೆ ಸದಾಕಾಲ ಇರುತ್ತದೆ ಎಂದು ತಿಳಿಸಿ ಶ್ರೀಗಳಿಗೆ ಭಗವಂತ ಹೆಚ್ಚಿನ ಆರೋಗ್ಯ, ಆಯಸ್ಸು ನೀಡಲಿ ಎಂದು ಕೇಳಿಕೊಳ್ಳುವೆ ಎಂದರು. ಗೋಡೆಕೆರೆ ಶ್ರೀಮಠದ ಚರಪಟ್ಟಾಧ್ಯಕ್ಷರಾದ ಶ್ರೀ ಮೃತ್ಯುಂಜಯದೇಶಿಕೇಂದ್ರ ಸ್ವಾಮೀಜಿ ಹಾಗೂ ಮಾಡಾಳು ಮಠದ ಶ್ರೀ ರುದ್ರಮುನಿ ಸ್ವಾಮೀಜಿಯವರು ಮಾತನಾಡಿದರು. ಹಿರಿಯ ವಿದ್ಯಾರ್ಥಿ ಹಾಗೂ ಶ್ರೀ ಕ್ಷೇತ್ರಾಭಿಮಾನಿಗಳ ಸಂಘದ ಅಧ್ಯಕ್ಷರಾದ ಯು.ಕೆ. ಶಿವಪ್ಪ ಮಾತನಾಡಿ, ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಶ್ರೀಗಳು ಉತ್ತಮ ಸೌಕರ್ಯಗಳಿರುವ ಕಟ್ಟಡ ನಿರ್ಮಿಸಿ, ತಾವು ಮಾತ್ರ ಹಳೆ ಮಠದಲ್ಲಿದ್ದಾರೆ. ಹಾಗಾಗಿ ಮುಂದಿನ ವರ್ಷಕ್ಕೆ ಶ್ರೀಗಳು ಶ್ರೀಮಠದ ಅಧಿಕಾರ ವಹಿಸಿಕೊಂಡು ೫೦ವರ್ಷಗಳು ತುಂಬಲಿವೆ. ಆಸಂದರ್ಭದಲ್ಲಿ ತುಂಬಾ ಹಳೆಯದಾಗಿರುವ ಶ್ರೀಮಠದ ಮಹಾಮನೆಯನ್ನು ನೂತನವಾಗಿ ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಹಳೆವಿದ್ಯಾರ್ಥಿಗಳು ಹಾಗೂ ಭಕ್ತರೆಲ್ಲಾ ಸೇರಿ ನಿರ್ಮಿಸಿಕೊಡುವ ಕಾರ್ಯಕ್ಕೆ ಮುಂದಾಗಬೇಕಿದ್ದು ಇದಕ್ಕೆ ಶ್ರೀಗಳ ಒಪ್ಪಿಗೆ ಪಡೆದು ಸದ್ಯದಲ್ಲೇ ಸಭೆ ಹಮ್ಮಿಕೊಳ್ಳಲಿದ್ದು ಎಲ್ಲರೂ ಸಲಹೆ ಸಹಕಾರ ನೀಡಬೇಕೆಂದು ತಿಳಿಸಿದರು. ಸಮಾರಂಭದಲ್ಲಿ ಮಾಜಿ ಸಚಿವ ಬಿ.ಸಿ. ನಾಗೇಶ್, ಮಾಜಿ ಶಾಸಕ ಬಿ. ನಂಜಾಮರಿ, ಬಿಜೆಪಿ ಮುಖಂಡ ಲೋಕೇಶ್ವರ, ಜೆಡಿಎಸ್ ಮುಖಂಡ ಶಾಂತಕುಮಾರ್, ನಮ್ರತಾ ಆಯಿಲ್ ಪ್ರಸಾದ್, ಕೆ.ಆರ್. ಶಂಕರಪ್ಪ, ನಿವೃತ್ತ ಶಿಕ್ಷಕರಾದ ಡಿ.ಹೆಚ್. ಗಂಗಣ್ಣ, ರೋಟರಿ ಸಂಸ್ಥೆಯವರು, ವೈದ್ಯರಾದ ಡಾ. ಮಧುಸೂಧನ್, ಡಾ, ಹಿತೇಶ್, ಬೋರ್‌ವೆಲ್ ಮಧು, ರಾಜು ಇತರರಿದ್ದರು.