ಕುಂದಾಪುರ ಎಂಐಟಿ ಸಾವಿಷ್ಕಾರ್‌: ಬಿಬಿ ಹೆಗ್ಡೆ ಕಾಲೇಜು ಸಮಗ್ರ ಚಾಂಪಿಯನ್‌

| Published : Apr 08 2025, 12:33 AM IST

ಕುಂದಾಪುರ ಎಂಐಟಿ ಸಾವಿಷ್ಕಾರ್‌: ಬಿಬಿ ಹೆಗ್ಡೆ ಕಾಲೇಜು ಸಮಗ್ರ ಚಾಂಪಿಯನ್‌
Share this Article
  • FB
  • TW
  • Linkdin
  • Email

ಸಾರಾಂಶ

ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯ ಆಯೋಜಿಸಿದ ರಾಜ್ಯಮಟ್ಟದ ಎರಡು ದಿನಗಳ ಅಂತರ್ ಕಾಲೇಜು ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧಾಕೂಟ ‘ಸಾವಿಷ್ಕಾರ್’ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಐ.ಎಂ.ಜೆ. ವಿದ್ಯಾಸಂಸ್ಥೆಗಳ ಛೇರ್ಮನ್ ಸಿದ್ದಾರ್ಥ ಜೆ. ಶೆಟ್ಟಿ ಟ್ರೋಫಿ ಬಿಡುಗಡೆ ಮಾಡಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಕುಂದಾಪುರ

ಇಲ್ಲಿನ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯ ಆಯೋಜಿಸಿದ ರಾಜ್ಯಮಟ್ಟದ ಎರಡು ದಿನಗಳ ಅಂತರ್ ಕಾಲೇಜು ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧಾಕೂಟ ‘ಸಾವಿಷ್ಕಾರ್’ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಐ.ಎಂ.ಜೆ. ವಿದ್ಯಾಸಂಸ್ಥೆಗಳ ಛೇರ್ಮನ್ ಸಿದ್ದಾರ್ಥ ಜೆ. ಶೆಟ್ಟಿ ಟ್ರೋಫಿ ಬಿಡುಗಡೆ ಮಾಡಿ ಚಾಲನೆ ನೀಡಿದರು.

ಈ ಸ್ಪರ್ಧಾಕೂಟದಲ್ಲಿ ರಾಜ್ಯದ ವಿವಿಧ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಕುಂದಾಪುರದ ಬಿ.ಬಿ.ಹೆಗ್ಡೆ ಕಾಲೇಜ್ ಸಮಗ್ರ ಚಾಂಪಿಯನ್ ಹಾಗೂ ಶಿರ್ವದ ಸೈಂಟ್ ಮೇರೀಸ್ ಕಾಲೇಜು ರನ್ನರ್ ಅಪ್ ಪ್ರಶಸ್ತಿ ತನ್ನದಾಗಿಸಿಕೊಂಡಿತು.ಎಲ್ಲಾ ವಿಭಾಗದ ವಿಜೇತರಿಗೆ ನಗದು ಬಹುಮಾನದ ಜೊತೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ರಂಗು ಹೆಚ್ಚಿಸಲು 30ಕ್ಕೂ ಅಧಿಕ ಕಂಪನಿಗಳ ಮಾದರಿ ಕಾರುಗಳು ಮತ್ತು 75ಕ್ಕೂ ಅಧಿಕ ವಿವಿಧ ಬೈಕ್ ಗಳ ಪ್ರದರ್ಶನ ನಡೆಯಿತು. ಅಲ್ಲದೆ, ಆರ್.ಡಿ.ಎಕ್ಸ್ ತಜ್ಞರಿಂದ ಬೈಕ್ ಸ್ಟಂಟ್ ಪ್ರದರ್ಶನ ಎಲ್ಲಾ ವಿದ್ಯಾರ್ಥಿಗಳಿಗೆ ಮನೋರಂಜನೆ ನೀಡಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿತು.

ಎರಡು ದಿನಗಳ ಸಂಜೆಯ ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ, ಖ್ಯಾತ ಗಾಯಕಿ ದಿವ್ಯ ರಾಮಚಂದ್ರ ಮತ್ತು ಗಾಯಕ ಸುಪ್ರೀತ್ ಅವರ ಜೊತೆ ಪ್ರಸಿದ್ಧ ರಾಪ್ ಗಾಯಕ ರಾಹುಲ್ ಡಿಟ್ಟೋ ಪ್ರಪ್ರಥಮ ಬಾರಿಗೆ ಕುಂದಾಪುರದಲ್ಲಿ ತಮ್ಮ ಕಾರ್ಯಕ್ರಮ ನೀಡಿ ದೊಡ್ಡ ಪ್ರೇಕ್ಷಕ ವರ್ಗವನ್ನು ರಂಜಿಸಿದರು.

ಎರಡನೆ ದಿನದ ಸಂಜೆ ಬೆಂಗಳೂರಿನ ಸವಾರಿ ಬ್ಯಾಂಡ್ ತಂಡದಿಂದ ನಡೆಸಿದ ಸಂಗೀತ ಮನೋರಂಜನೆ ಸಾವಿಷ್ಕಾರ್ ನಂತಹ ದೊಡ್ಡ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.