ಕನ್ನಡಪ್ರಭ ವಾರ್ತೆ ನಂಜನಗೂಡು ತೀವ್ರ ಬೇಡಿಕೆಯಾಗಿದ್ದ ನವಿಲೂರು, ಮುದ್ದಹಳ್ಳಿ. ಸೂರಹಳ್ಳಿ ಮೂಲಕ ಹಲ್ಲರೆಗೆ ಸೇರುವ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ 4.57 ಕೋಟಿ ವೆಚ್ಚದಲ್ಲಿ ಚಾಲನೆ ನೀಡಲಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು. ತಾಲೂಕಿನ ದೇವಿರಮ್ಮನಹಳ್ಳಿ, ದೇವರಸನಹಳ್ಳಿ, ಕೆಬ್ಬೆಪುರ, ನವಿಲೂರು, ಮಸಗೆ ಗ್ರಾಮಗಳಲ್ಲಿ 6.2 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.ಕಳೆದ 30 ವರ್ಷಗಳಿಂದ ರಸ್ತೆ ಅಭಿವೃದ್ಧಿ ಕಾಣದೆ ತೀವ್ರ ಹಳ್ಳ ಕೊಳ್ಳಗಳು ಉಂಟಾಗಿ, ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು, ಗ್ರಾಮಸ್ಥರು ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರು, ಗ್ರಾಮಸ್ಥರ ಮನವಿಯ ಮೇರೆಗೆ ಸುಮಾರು 4.57 ಕೋಟಿ ವೆಚ್ಚದಲ್ಲಿ 2.15 ಕಿ.ಮೀ ಉದ್ದದಲ್ಲಿ ಮುಖ್ಯ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು, ಇದರಿಂದ ಮುದ್ದಹಳ್ಳಿ, ನವಿಲೂರು, ಹಲ್ಲರೆ ಸೇರಿದಂತೆ ಹಲವಾರು ಗ್ರಾಮಗಳ ಜನರಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು. ಗ್ರಾಮೀಣ ಭಾಗದ ಜನರಿಗೆ ಮೂಲ ಸೌಕರ್ಯ ಒದಗಿಸುವ ಸಲುವಾಗಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ತಾಲೂಕಿನ ದೇವಿರಮ್ಮನಹಳ್ಳಿ ಗ್ರಾಮದ ಸಾಮಾನ್ಯ ವರ್ಗದ ಬೀದಿಯಲ್ಲಿ 65 ಲಕ್ಷ, ದೇವರಸನಹಳ್ಳಿ ಗ್ರಾಮದ ಸಾಮಾನ್ಯ ವರ್ಗದ ಬೀದಿಯಲ್ಲಿ 25 ಲಕ್ಷ, ಮಸಗೆ ಗ್ರಾಮದಲ್ಲಿ 30 ಲಕ್ಷ ವೆಚ್ಚದಲ್ಲಿ ಸಾಮಾನ್ಯ ವರ್ಗದ ಬೀದಿಯಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಯನ್ನು ನಡೆಸಲಾಗುವುದು, ಒಟ್ಟಾರೆ ಇಂದು 6 ಕೋಟಿ 2 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು. ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಮಹೇಶ್, ಎಸ್ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಣ್ಣ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಾಗರಾಜ್, ಮುಖಂಡರಾದ ಅಶೋಕ್, ರಾಜೇಶ್, ಮುದ್ದುಮಾದಶೆಟ್ಟಿ, ನಾಯಕ, ರಘು, ಮಂಜುನಾಥ್, ಚೆಲುವಪ್ಪ, ಬಸವಣ್ಣ, ಲೋಕೋಪಯೋಗಿ ಇಲಾಖೆ ಎಇಇ ರಮೇಶ್, ಎಇ ಬಸವರಾಜು, ಪಂಚಾಯತ್ ರಾಜ್ ಇಲಾಖೆ ಎಇಇ ರಾಜು, ಎಇ, ಶಿವಮೂರ್ತಿ, ಈರಯ್ಯ ಇದ್ದರು.