ಕನ್ನಡಪ್ರಭ ವಾರ್ತೆ ಪಾವಗಡ

ತಾಲೂಕಿನ ಕೆ.ಸೇವಾಲಾಲ್‌ಪುರ ಗ್ರಾಮದಲ್ಲಿ ನಡೆದ ಸತ್ತಿ ದೇವರ ಕಾರ್ಯಕ್ರಮದಲ್ಲಿ ವಿಷಾಹಾರ ಸೇವಿಸಿದ ಪರಿಣಾಮ 150ಕ್ಕೂ ಹೆಚ್ಚು ಗ್ರಾಮಸ್ಥರು ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿದ್ದ ವಿಷಯ ತಿಳಿಯುತ್ತಿದ್ದಂತೆ ಶಾಸಕ ಎಚ್‌.ವಿ.ವೆಂಕಟೇಶ್ ಅವರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ಕುರಿತು ಮಾಹಿತಿ ಪಡೆದರು. ಇದೇ ವೇಳೆ ತಾಲೂಕಿನ ಕೆ.ಸೇವಾಲಾಲ್‌ಪುರ ತಾಂಡಾಗೆ ಭೇಟಿ ನೀಡಿ ಸಮಸ್ಯೆ ಕುರಿತು ಸ್ಥಳೀಯ ಜನತೆಯೊಂದಿಗೆ ಸಮಾಲೋಚನೆ ನಡೆಸಿದರು. ಕುಡಿಯುವ ನೀರು ಹಾಗೂ ಚರಂಡಿ ಮತ್ತು ನೈರ್ಮಲ್ಯ ಶುಚಿತ್ವ ಕುರಿತು ತಾಪಂ ಇಒ ಹಾಗೂ ಅಭಿವೃದ್ಧಿ ಅಧಿಕಾರಿಯಿಂದ ವಿವರ ಪಡೆದರು. ಯಾವುದೇ ರೀತಿಯ ನಿರ್ಲಕ್ಷ್ಯವಾಗದಂತೆ ಎಲ್ಲ ರೋಗಿಗಳಿಗೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯಗಳು, ಔಷಧೋಪಚಾರ ಹಾಗೂ ಆರೈಕೆಯನ್ನು ಸಮರ್ಪಕವಾಗಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ಡಿಎಚ್‌ಒ ಚಂದ್ರಶೇಖರ್, ತಹಸೀಲ್ದಾರ್ ವೈ ರವಿ,ತಾಪಂ ಇಒ ಮಧುಸೂದನ್‌,ಟಿಎಚ್ಒ ನಾಗೇಶ್, ಮುಖಂಡರಾದ ಸುದೇಶ್ ಬಾಬು, ಶಂಕರ್ ರೆಡ್ಡಿ, ಕಲ್ಪವೃಕ್ಷ ರವಿ,ನೌಕರರ ಸಂಘದ ತಾಲೂಕು ಅಧ್ಯಕ್ಷ ಎಚ್‌.ವಿ. ರವಿಕುಮಾರ್,ಎರ್ರಿಸ್ವಾಮಿ ಇತರೆ ಗ್ರಾಮದ ಸಾರ್ವಜನಿಕರಿದ್ದರು.