ಕನ್ನಡಪ್ರಭ ವಾರ್ತೆ ಅರಕಲಗೂಡು

ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ತಳಹದಿಯ ಮೇಲೆ ಕಟ್ಟಿರುವ ದೇಶದ ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲು ಭಾನುವಾರ ಪ್ರಜಾಪ್ರಭುತ್ವ ಮಾನವ ಸರಪಳಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೃಹತ್ ಮಾನವ ಸರಪಳಿ ಕಾರ್ಯಕ್ರಮಕ್ಕೆ ಶಾಸಕ ಎ ಮಂಜು ಅವರು ಅರಕಲಗೂಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಡವಿನಹೊಸಳ್ಳಿಯಲ್ಲಿ ಚಾಲನೆ ನೀಡಿ, ಸಂವಿಧಾನ ಪೀಠಿಕೆ ಬೋಧಿಸಿ ಪ್ರತಿಜ್ಞೆ ಸ್ವೀಕರಿಸಿದರು.ಬಳಿಕ ಶಾಸಕ ಎ. ಮಂಜು ಮಾತನಾಡಿ, ಭಾರತ ಸಂವಿಧಾನ ಸರ್ವಧರ್ಮ ಸಮಾನತೆಯನ್ನು ಒಳಗೊಂಡಿದ್ದು, ನಾವೆಲ್ಲರೂ ಪ್ರೀತಿಯಿಂದ, ಒಗ್ಗಟ್ಟಿನಿಂದ ಇರಬೇಕು. ಪ್ರಜಾಪ್ರಭುತ್ವ ದಿನವನ್ನು ಒಂದು ದಿನ ಆಚರಿಸದೆ ಪ್ರತಿದಿನ ಪಾಲಿಸಬೇಕು ಎಂದ ಅವರು, ಕರೆಗೆ ಓಗೊಟ್ಟು ಶಾಲಾಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಲು ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆ ತಿಳಿಸಿದರು.

ಕಡವಿನ ಹೊಸಳ್ಳಿಯಿಂದ ಆರಂಭವಾದ ಮಾನವ ಸರಪಳಿ ಸಿದ್ದಾಪುರ ಗೇಟ್, ಕೊಣನೂರು, ರಾಮನಾಥಪುರ, ದೊಡಮಗ್ಗೆ, ಮೊಕಲಿ, ಅರಕಲಗೂಡು ಅನಕೃ ವೃತ್ತ, ಎಚ್. ಆರ್‌ ಪಿ ವಡ್ಡರಹಳ್ಳಿ ವರೆಗೆ ಸುಮಾರು 38 ಕಿಲೋ ಮೀಟರ್‌ವರೆಗೆ ಮಾನವ ಸರಪಳಿ ನಿರ್ಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ತಹಸೀಲ್ದಾರ್‌ ಸೌಮ್ಯ, ಅಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.