ಕನ್ನಡಪ್ರಭ ವಾರ್ತೆ ಶಿರಸಿ
12 ವರ್ಷಗಳ ಅಧಿಕಾರ ಅವಧಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣಿಭೂತರಾಗಿದ್ದಾರೆ. ನಮ್ಮ ಶ್ರದ್ಧಾ ಕೇಂದ್ರಗಳ ಅಭಿವೃದ್ಧಿಗೆ ಕೂಡ ಶ್ರಮವಹಿಸಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ನಗರದ ಪಂಡಿತ್ ದೀನ ದಯಾಳ್ ಭವನದಲ್ಲಿ ನಡೆದ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು.ಅಲ್ಲದೆ ಇಂದು ದೇಶ ಸುರಕ್ಷಿತವಾಗಿ ಹಾಗೂ ಪ್ರಗತಿ ಪಥದಲ್ಲಿ ಸಾಗಲು ಅನೇಕ ಕಾರ್ಯಕ್ರಮ ರೂಪಿಸಿ ಅವುಗಳು ಯಶಸ್ವಿಯಾಗಿ ಅನುಷ್ಠಾನ ಆಗುವಂತೆ ನೋಡಿಕೊಂಡಿದ್ದಾರೆ. ನಾವೆಲ್ಲರೂ ಕೂಡ ಸರ್ಕಾರದ ಯೋಜನೆಗಳ ಪ್ರಯೋಜನ ಜನರಿಗೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.ಶಿವಮೊಗ್ಗ ವಿಭಾಗ ಪ್ರಭಾರಿ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಆರ್.ಕೆ. ಸಿದ್ದರಾಮಣ್ಣ ಮಾತನಾಡಿ, ಮತದಾರರ ಪಟ್ಟಿಯ ಶುದ್ಧೀಕರಣದ ಕೆಲಸ ಎಸ್ಐಆರ್ ನಲ್ಲಿ ಆಗುತ್ತಿದೆ. ಚುನಾವಣಾ ಆಯೋಗಕ್ಕೆ ಈ ಪ್ರಕ್ರಿಯೆ ಮಾಡುವ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿರುವುದಲ್ಲದೆ, ಕಾಲಕಾಲಕ್ಕೆ ಮತದಾರರ ಪಟ್ಟಿಯ ಪರಿಷ್ಕರಣೆ ಆಯೋಗದ ಜವಾಬ್ದಾರಿ ಎಂಬುದಾಗಿ ಕೂಡ ಉಲ್ಲೇಖಿಸಿದೆ ಎಂದರು.ಎಸ್ಐಆರ್ಗೆ ಪೂರಕವಾಗಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರಿಂದ ಆಗಬೇಕಾದ ಕೆಲಸಗಳ ಕುರಿತು, ವಿಶ್ವ ಪರಿಸರ ದಿನ ಹಾಗೂ ಅಂತಾರಾಷ್ಟ್ರೀಯ ಯೋಗ ದಿನದ ಕುರಿತಾಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಮಾಹಿತಿ ನೀಡಿದರು.
ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿ ಯಾವೊಬ್ಬ ಅರ್ಹ ಮತದಾರ ಕೂಡ ಮತದಾರರ ಪಟ್ಟಿಯಿಂದ ಹೊರಗಡೆ ಇರಕೂಡದು. ಅಂತೆಯೇ ಅಕ್ರಮ ವಲಸಿಗರು ಮತದಾರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳದಂತೆ ಜಾಗೃತಿ ವಹಿಸಬೇಕು. ಎಸ್ಐಆರ್ ನಲ್ಲಿ ನಮ್ಮ ಎಲ್ಲ ಪ್ರಮುಖರು ಮತ್ತು ಕಾರ್ಯಕರ್ತರು ಈ ಪ್ರಕ್ರಿಯೆಯಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದರು.ಈ ಸಂದರ್ಭ ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನಿಲ್ ನಾಯ್ಕ, ವಿಭಾಗ ಸಹ ಪ್ರಭಾರಿ ಆರ್.ಡಿ. ಹೆಗಡೆ, ವೆಂಕಟೇಶ ನಾಯಕ, ಗೋವಿಂದ ನಾಯ್ಕ, ಹರಿಪ್ರಕಾಶ್ ಕೋಣೆಮನೆ, ಕೆ.ಜಿ. ನಾಯ್ಕ, ಅಶೋಕ ಚಲವಾದಿ, ಎಂ.ಜಿ. ಭಟ್, ಶಿವಾನಿ ಶಾಂತಾರಾಮ್, ಪ್ರೇಮಕುಮಾರ ನಾಯ್ಕ ಉಪಸ್ಥಿತರಿದ್ದರು.
ಶಿವಾಜಿ ನರಸಾನಿ ಸ್ವಾಗತಿಸಿದರು, ಪ್ರಶಾಂತ್ ನಾಯ್ಕ ನಿರ್ವಹಿಸಿದರು ಹಾಗೂ ಸುಬ್ರಾಯ ದೇವಾಡಿಗ ವಂದಿಸಿದರು.