ಉಣುಗು ಮನುಷ್ಯರಿಗೆ ಕಚ್ಚಿದರೆ ಮಂಗನ ಕಾಯಿಲೆ

| Published : Nov 21 2024, 01:01 AM IST

ಸಾರಾಂಶ

ಸೋಂಕಿತ ಮಂಗನಿಗೆ ಕಚ್ಚಿರುವ ಉಣುಗು ಮನುಷ್ಯರಿಗೆ ಕಚ್ಚಿದರೆ ಮಂಗನ ಕಾಯಿಲೆ ಹರಡುತ್ತದೆ ಎಂದು ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಯ ಸಾಂಕ್ರಾಮಿಕ ರೋಗ ಶಾಸ್ತ್ರ ತಜ್ಞ ಡಾ. ಆಕರ್ಷ ತಿಳಿಸಿದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಸೋಂಕಿತ ಮಂಗನಿಗೆ ಕಚ್ಚಿರುವ ಉಣುಗು ಮನುಷ್ಯರಿಗೆ ಕಚ್ಚಿದರೆ ಮಂಗನ ಕಾಯಿಲೆ ಹರಡುತ್ತದೆ ಎಂದು ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಯ ಸಾಂಕ್ರಾಮಿಕ ರೋಗ ಶಾಸ್ತ್ರ ತಜ್ಞ ಡಾ. ಆಕರ್ಷ ತಿಳಿಸಿದರು.

ಅ‍ವರು ಮಂಗಳವಾರ ಹೊನ್ನೇಕೊಡಿಗೆ ಗ್ರಾಮ ಪಂಚಾಯಿತಿ ವರ್ಕಾಟೆ ಕಾಲೋನಿ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮಂಜುಶ್ರೀ ಜ್ಞಾನ ವಿಕಾಸ ಕೇಂದ್ರದ ಆಶ್ರಯದಲ್ಲಿ ನಡೆದ ಆರೋಗ್ಯ ಮಾಹಿತಿ ಕಾರ್ಯಾಗಾರದಲ್ಲಿ ಮಂಗನ ಕಾಯಿಲೆ ಬಗ್ಗೆ ಮಾಹಿತಿ ನೀಡಿದರು.

ಪ್ಲೆವಿ ವೈರಸ್‌ನಿಂದ ಮಂಗನ ಕಾಯಿಲೆ ಬರುತ್ತದೆ. ಮಂಗನ ಕಾಯಿಲೆ ಬಂದವರಿಗೆ ಮೈ ಕೈ ನೋವು, ಕುತ್ತಿಗೆ ಹಿಂಬದಿಯಲ್ಲಿ ನೋವು, ಹೊಟ್ಟೆ ನೋವು, ಹಸಿವು ಆಗದಿರುವುದು, ವಾಕರಿಕೆ, ಕಣ್ಣು ಗುಡ್ಡೆ ಕೆಂಪಾಗುವುದು, ವಸಡಿನಲ್ಲಿ ರಕ್ತ ಸ್ರಾವ ಉಂಟಾಗುತ್ತದೆ. ಈ ರೀತಿ ಲಕ್ಷಣ ಕಂಡು ಬಂದವರು ತಕ್ಷಣ ಸಮೀಪದ ಆಸ್ಪತ್ರೆಗೆ ಬಂದು ರಕ್ತ ತಪಾಸಣೆ ಮಾಡಿಸಿಕೊಳ್ಳಬೇಕು. ಮಂಗನ ಕಾಯಿಲೆಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇರುವುದಿಲ್ಲ. ಲಕ್ಷಣಾಧಾರಿತ ಚಿಕಿತ್ಸೆ ನೀಡಲಾಗುವುದು ಎಂದರು.

ತಾಲೂಕು ಹಿರಿಯ ಆರೋಗ್ಯ ನಿರೀಕ್ಷಿಕ ದರ್ಶನಾಥ್‌ ಮಾತನಾಡಿ, ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳಿಂದ ದೇಹದಲ್ಲಿ ಅಪೌಷ್ಠಿಕತೆ ಉಲ್ಬಣವಾಗುತ್ತದೆ. ದೇಹದಲ್ಲಿ ಪೋಷಕಾಂಶಗಳ ಕೊರತೆ ಇದ್ದರೆ ಅಪೌಷ್ಠಿಕತೆ ಎನ್ನುತ್ತೇವೆ. ಅಪೌಷ್ಠಿಕತೆಯಿಂದ ರಕ್ತ ಹೀನತೆ, ರೋಗ ನಿರೋಧಕ ಶಕ್ತಿ ಕುಂದುತ್ತದೆ. ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ಕಡಿಮೆ ತೂಕದ ಮಕ್ಕಳ ಜನನ, ಪದೇ, ಪದೇ ಗರ್ಭ ಪಾತವಾಗಲಿದೆ. ಆದ್ದರಿಂದ ಗರ್ಭಿಣಿಯರು, ಹಸಿರು ಸೊಪ್ಪುಗಳನ್ನು ಹೆಚ್ಚಾಗಿ ಬಳಸಬೇಕು. ಪೌಷ್ಠಿ ಕಯುಕ್ತ ಆಹಾರವನ್ನು ಸಮಲೋತನವಾಗಿ ಸ್ವೀಕರಿಸುವುದರಿಂದ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ತಿಳಿಸಿದರು.

ರಾಷ್ಟೀಯ ಕಿಶೋರಿ ಸ್ವಾಸ್ತ ಕಾರ್ಯಕ್ರಮದ ಸಮಾಲೋಚಕ ಸುಹಾಸ್‌, ಹದಿಹರೆಯದಲ್ಲಿ ಉಂಟಾಗುವ ಬದಲಾವಣೆಗಳು ಮತ್ತು ಅವರ ಆರೋಗ್ಯದ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಆಂತರಿಕ ಲೆಕ್ಕ ಪರಿಶೋಧಕ ಪ್ರದೀಪ್‌ ಜ್ಞಾನ ವಿಕಾಸ ಕೇಂದ್ರದ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಸಭೆಯ ಅಧ್ಯಕ್ಷತೆಯನ್ನು ರಾಧಮ್ಮ ವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ಕ್ಷಯ ರೋಗ ಚಿಕಿತ್ಸಾ ಮೇಲ್ವೀಚಾರಕ ಪವನ್ ಕರ್, ಸೇವಾ ಪ್ರತಿನಿಧಿ ಭಾನುಮತಿ, ಲೀಲಾವತಿ ಇದ್ದರು. ಮಾಹಿತಿ ಕಾರ್ಯಾಗಾರದಲ್ಲಿ ಮಂಜುಶ್ರೀ ಮಹಿಳಾ ಜ್ಞಾನಿ ವಿಕಾಸ ಕೇಂದ್ರದ ಸದಸ್ಯರು ಪಾಲ್ಗೊಂಡಿದ್ದರು.