ರೈತರ ಕೃಷಿ ಚಟುವಟಿಕೆ ಪ್ರಾರಂಭ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ತಾಲೂಕಿನಲ್ಲಿ ಮುಂಗಾರು ಚುರುಕಾಗಿದ್ದು ಕಳೆದ 3 ದಿನದಿಂದ ಬಿಟ್ಟೂ, ಬಿಟ್ಟೂ ಮಳೆ ಸುರಿಯುತ್ತಿದ್ದು ರೈತರ ಕೃಷಿ ಚಟುವಟಿಕೆ ಪ್ರಾರಂಭವಾಗಿದೆ.

ಮಳೆಯಿಂದ ಬತ್ತಿಹೋಗಿದ್ದ ಹಳ್ಳಗಳಲ್ಲಿ ಸಣ್ಣ ಪ್ರಮಾಣದಲ್ಲಿ ಹಳ್ಳ ಹರಿಯಲು ಪ್ರಾರಂಭವಾಗಿದೆ. ಕಳೆದ 5 ದಿನದಿಂದ ದಿನಕ್ಕೆ 30 ರಿಂದ 40 ಮಿ.ಮೀ.ಮಳೆ ಸುರಿಯುತ್ತಿದೆ. ಜನವರಿಯಿಂದ ಜುಲೈ 3 ರ ವರೆಗೆ ತಾಲೂಕಿನಲ್ಲಿ 447 ಮಿ.ಮೀ.ವಾಡಿಕೆ ಮಳೆ ಬರಬೇಕಾಗಿತ್ತು. ಆದರೆ, ಕೇವಲ 288 ಮಿ.ಮೀ. ಮಳೆ ಮಾತ್ರ ಸುರಿದಿದೆ.159 ಮಿ.ಮೀ. ಮಳೆ ಕೊರತೆಯಾಗಿದೆ.

ತಾಲೂಕಿನಲ್ಲಿ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದು ರೈತರು ಸಸಿ ಮುಡಿ ತಯಾರಿಕೆಯಲ್ಲಿ ನಿರತರಾಗಿದ್ದಾರೆ.ಈಗಾಗಲೇ ಕೃಷಿ ಇಲಾಖೆಯಿಂದ ಕೆಎಚ್ ಪಿ -11 ( ಐ.ಇ.ಟಿ.ಸಣ್ಣ) ತುಂಗಾ, ಎಂ.ಟಿ.ಯು. 1001, ಆರ್.ಎನ್.ಆರ್ 15048, ಉಮಾ, ಜ್ಯೋತಿ ಎಂಬ ತಳಿಗಳ ಭತ್ತದ ಬೀಜಗಳನ್ನು ಎನ್.ಆರ್.ಪುರ ರೈತ ಸಂಪರ್ಕ ಕೇಂದ್ರದಿಂದ ಹಾಗೂ ಬಾಳೆಹೊನ್ನೂರು ರೈತ ಸಂಪರ್ಕ ಕೇಂದ್ರದಿಂದ ರೈತರು ಪಡೆದುಕೊಂಡಿದ್ದಾರೆ.


ತಾಲೂಕಿನ ಬೈರಾಪುರ, ಬಿ.ಕಣಬೂರು ಗ್ರಾಮಗಳಲ್ಲಿ ರೈತರು ಅಂದಾಜು 5 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ, ಮೆಕ್ಕೆ ಜೋಳ ಬೆಳೆದಿದ್ದಾರೆ. ಅಡಿಕೆ ಧಾರಣೆ ಏರಿಕೆ ಹಿನ್ನೆಲೆಯಲ್ಲಿ ರೈತರು ಭತ್ತದ ಕೃಷಿಯಲ್ಲಿ ಆಸಕ್ತಿ ಕಳೆದುಕೊಂಡಿದ್ದು ಪ್ರತಿ ವರ್ಷ ಭತ್ತದ ಗದ್ದೆಗಳು ಅಡಿಕೆ ತೋಟವಾಗಿ ಪರಿವರ್ತನೆಯಾಗುತ್ತಿದೆ.ಕೆಲವು ರೈತರು ಭತ್ತದ ಗದ್ದೆಯನ್ನು ಹಾಳು ಬಿಟ್ಟಿದ್ದಾರೆ.

-- ಬಾಕ್ಸ್ --

ಕೃಷಿ ಯಾಂತ್ರೀಕರಣ ಹಾಗೂ ಸೂಕ್ಷ್ಮ ನೀರಾವರಿ ಯೋಜನೆ ಸಹಾಯ ಧನಕ್ಕಾಗಿ ರೈತರು ಅರ್ಜಿ ಸಲ್ಲಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ಮಹೇಶ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಎನ್.ಆರ್.ಪುರ ಹಾಗೂ ಬಾಳೆಹೊನ್ನೂರು ರೈತ ಸಂಪರ್ಕ ಕೇಂದ್ರದಲ್ಲಿ ಡಯಾಂಚ ಹಸಿರೆಲೆ ಗೊಬ್ಬರ ಬಿತ್ತನೆ ಬೀಜ, ಟೈಕೋ ಟರ್ಮ ರಿಯಾಯ್ತಿ ದರದಲ್ಲಿ ಲಭ್ಯವಿದೆ. ಭತ್ತದ ಸಾಲು ನಾಟಿ ಅಥವಾ ನಾಟೀ ಯಂತ್ರದಿಂದ ಭತ್ತದ ನಾಟೀ ಮಾಡುವ ರೈತರಿಗೆ 1 ಎಕ್ರೆಗೆ ಉಚಿತವಾಗಿ 25 ಕೆಜಿ ಆರ್ ಎನ್.ಆರ್. 150 48 ಬಿತ್ತನೆ ಬೀಜವನ್ನು ನೀಡಲಾಗುವುದು. ಈಗಾಗಲೇ 200 ರೈತರಿಗೆ ಉಚಿತ ಭತ್ತದ ಬೀಜವನ್ನು ನೀಡಲಾಗಿದೆ ಎಂದರು.