ಕುಕನೂರು: ವಿದ್ಯಾರ್ಥಿಗಳಿಗೆ ನೈತಿಕತೆ, ವರ್ತನೆ, ವಿಧೇಯತೆಗಳಿಗೆ ಭೂಷಣ ಎಂದು ಇಟಗಿಯ ಶ್ರೀಮಹೇಶ್ವರ ವಿದ್ಯಾವರ್ಧಕ ಸಮಿತಿಯ ನಿರ್ದೇಶಕಿ ಕಾವ್ಯಾ ಬಿ. ಪಾಟೀಲ ಹೇಳಿದರು.

ತಾಲೂಕಿನ ಇಟಗಿಯ ಶ್ರೀಮಹೇಶ್ವರ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಸಂಸ್ಕಾರ ಮುಖ್ಯವಾಗಿದೆ. ಸಂಸ್ಕಾರವಂತ ಮಕ್ಕಳು ಆದರ್ಶ ಸಮಾಜ ನಿರ್ಮಾಣ ಮಾಡಬಲ್ಲರು. ವಿದ್ಯಾರ್ಥಿಗಳು ಆದರ್ಶಮಯವಾಗಿ ಬೆಳೆಯಬೇಕು ಎಂದರು.

ಕಾಲೇಜಿನ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇಟಗಿಯ ಶಿವಶರಣ ಶ್ರೀಗದಿಗೆಪ್ಪ ಅಜ್ಜನವರು ವಸ್ತ್ರದಾನ ಮಾಡಿದರು. ಅವರಿಗೆ ಈ ವೇಳೆ ಸನ್ಮಾನಿಸಲಾಯಿತು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ರಂಗದಲ್ಲಿ ಕಷ್ಟಪಟ್ಟು ಓದಿ ಹೆತ್ತವರ ಹೆಸರನ್ನು ತರಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಗಂಗಾಧರ ಅವಟೇರ ಮಾತನಾಡಿ, ಶ್ರೀಶಿವಶರಣ ಗದಿಗೆಪ್ಪಜ್ಜನವರು ನೂರಾರು ಉಚಿತ ಸಾಮೂಹಿಕ ವಿವಾಹ ಮಾಡಿಕೊಟ್ಟಿದ್ದಾರೆ. ಉಚಿತವಾಗಿ ಸಮವಸ್ತ್ರ ದಾನಮಾಡಿ ಬಡಮಕ್ಕಳ ಬದುಕಿಗೆ ಊರು ಗೋಲಾಗಿದ್ದಾರೆ ಎಂದರು.

ದೈಹಿಕ ಉಪನ್ಯಾಸಕ ಗವಿಸಿದ್ದಪ್ಪ ಉಸಗಲಿ ಸ್ವಾಗತಿಸಿದರು. ಇಂಗ್ಲಿಷ್ ಭಾಷಾ ಉಪನ್ಯಾಸಕ ಶರಪ್ಪ ಗುಡ್ಲಾನೂರು ನಿರೂಪಣೆ ಮಾಡಿ ವಂದಿಸಿದರು.