ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಸನ್ ಮ್ಯಾಟ್ರಿಕ್ಸ್ ಸಿನಿಮಾಸ್ ಮತ್ತು ಫಿಲ್ಮ್ ವೀಲ್ ಸ್ಟುಡಿಯೋಸ್ ಅರ್ಪಿಸುವ ‘ಸ್ಕೂಲ್ ಲೀಡರ್’ ಸಿನಿಮಾ ಮಂಗಳೂರಿನ ನಗರದ ಬಿಗ್ ಸಿನಿಮಾಸ್ನಲ್ಲಿ ಶುಕ್ರವಾರ ಬಿಡುಗಡೆಯಾಯಿತು.ಸಿನಿಮಾ ಬಿಡುಗಡೆಗೊಳಿಸಿ ಮಾತಾಡಿದ ಸಿಎ ಎಸ್. ಎಸ್. ನಾಯಕ್, ಇದು ನಿರ್ಮಾಪಕ ಸತ್ಯೇಂದ್ರ ಪೈ ಅವರ ಮೂರನೇ ಸಿನಿಮಾ. ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಒತ್ತಡದಿಂದ ಹೊರಬಂದು ಹೇಗೆ ಜೀವನದಲ್ಲಿ ಸಾಧನೆ ಮಾಡಬಹುದು ಅನ್ನುವುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಕನ್ನಡ ಶಾಲೆಗಳ ಇಂದಿನ ಪರಿಸ್ಥಿತಿಯನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ. ಎಲ್ಲರೂ ಸಿನಿಮಾ ನೋಡಿ ಮಕ್ಕಳನ್ನು ಪ್ರೋತ್ಸಾಹಿಸಿ ಎಂದರು. ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಮಾತಾಡಿ, ಸ್ಕೂಲ್ ಲೀಡರ್ ಹೈಸ್ಕೂಲ್ ಜೀವನದ ಕಥೆ ಎಲ್ಲರಿಗೂ ಈ ಸಿನಿಮಾ ಖಂಡಿತ ಇಷ್ಟವಾಗುತ್ತದೆ, ಎಲ್ಲರೂ ಸಿನಿಮಾ ನೋಡಿ ಎಂದು ಶುಭ ಹಾರೈಸಿದರು. ಹಿರಿಯ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮಾತಾಡಿ, ಪೆನ್ಸಿಲ್ ಬಾಕ್ಸ್ ಕೊಟ್ಟಿದ್ದ ಚಿತ್ರ ನಿರ್ದೇಶಕ ರಝಾಕ್ ಪುತ್ತೂರು ಈಗ ಸ್ಕೂಲ್ ಲೀಡರ್ ನಂತಹ ಉತ್ತಮ ಗುಣಮಟ್ಟದ ಸಿನಿಮಾ ಕೊಟ್ಟಿದ್ದಾರೆ. ಇಂತಹ ಇನ್ನಷ್ಟು ಸಿನಿಮಾಗಳು ಬರಲಿ ಎಂದರು. ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಭರತ್ ಮಾತಾಡಿ, ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಯಾವ ರೀತಿ ಬೆಳೆಸುತ್ತಾರೆ ಅನ್ನುವುದನ್ನು ಸಿನಿಮಾದಲ್ಲಿ ತೋರಿಸಿದ್ದಾರೆ. ಸಿನಿಮಾ ನೂರು ದಿನ ಪೂರೈಸಲಿ ಎಂದರು. ಸಮಾರಂಭದಲ್ಲಿ ನಿರ್ಮಾಪಕ ಸತ್ಯೇಂದ್ರ ಪೈ, ನಿರ್ದೇಶಕ ರಝಾಕ್ ಪುತ್ತೂರು, ವಾಲ್ಟರ್ ನಂದಳಿಕೆ, ಹಿರಿಯ ಪತ್ರಕರ್ತ ಆನಂದ ಶೆಟ್ಟಿ, ಚಿತ್ರ ನಿರ್ದೇಶಕ ರಜಾಕ್ ಪುತ್ತೂರು, ಭೋಜರಾಜ್ ವಾಮಂಜೂರ್, ಪ್ರಸನ್ನ ಶೆಟ್ಟಿ, ವಾಮನ ಕಾಮತ್, ಸುಚಿತ್ರ ನಾಯಕ್, ತ್ರಿಶುಲ್ ಶೆಟ್ಟಿ, ಮಯೂರ್ ಶೆಟ್ಟಿ, ಬಾಳ ಜಗನ್ನಾಥ ಶೆಟ್ಟಿ, ಬಿ. ರವೀಂದ್ರ ಶೆಟ್ಟಿ, ಸುದರ್ಶನ್ ಶಂಕರ್, ರಮೇಶ್ ನಾಯಕ್ ಮತ್ತಿತರರು ಇದ್ದರು.
ಕುಮಾರ್ ವಿಟ್ಲ ನಿರೂಪಿಸಿದರು.