ಸಾರಾಂಶ
ಧಾರವಾಡ:
ಫೆ. 14ರಿಂದ 19ರ ವರೆಗೆ ಆರು ದಿನ ಪಂ. ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಬಹುಭಾಷಾ ನಾಟಕೋತ್ಸವ ಆಯೋಜಿಸಿದೆ ಎಂದು ರಂಗಾಯಣದ ನಿರ್ದೇಶಕ ರಾಜು ತಾಳಿಕೋಟಿ ಹೇಳಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕನ್ನಡದ ಜತೆಗೆ ಹಿಂದಿ, ಮರಾಠಿ, ಮಲೆಯಾಳಂ ಭಾಷೆಯ ನಾಟಕಗಳ ಮೂಲಕ ಹೆಣ್ಣಿನ ಅಸ್ಮಿತೆಯ ಹೋರಾಟ, ಕಲಾವಿದನ ಅಸ್ಮಿತೆಯ ಬಿಕ್ಕಟ್ಟು, ಮನುಷ್ಯನಾಗುವುದೆಂದರೆ ಸಹಜ-ಸರಳವಾಗಿರುವುದು ಎಂಬ ಸಂದೇಶ ನೀಡುವ ನಾಟಕಗಳನ್ನು ಆಯ್ದುಗೊಳ್ಳಲಾಗಿದೆ. ನಾಟಕೋತ್ಸವಕ್ಕೆ ಖ್ಯಾತ ನಾಟಕಕಾರ, ಸಾಹಿತಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಫೆ. 14ರಂದು ಸಂಜೆ 6ಕ್ಕೆ ಉದ್ಘಾಟಿಸಲಿದ್ದಾರೆ ಎಂದರು.
6 ದಿನ ಆರು ನಾಟಕ:ಫೆ. 14ರಂದು ಮಾಯಾರಾವ್ ರಚನೆ, ನರೇಂದ್ರ ಸಾಚರ ನಿರ್ದೇಶನದ ಗ್ವಾಲೆ ಮತವಾಲೆ ಎಂಬ ಹಿಂದಿ ನಾಟಕವನ್ನು ರಿವಿಂಗ್ ಲೈಟ್ಲಿ ಹಾಗೂ ಬೆಂಬೆ ಥಿಯೇಟರ್ ಗ್ರುಪ್ ರಂಗಾಯಣದ ಸಹಕಾರದಲ್ಲಿ ಪ್ರದರ್ಶಿಸಲಿದೆ. ಫೆ. 15ರಂದು ಕಾವಾಲಂ ನಾರಾಯಣ ಪಣಿಕ್ಕರ ರಚಿಸಿದ ಸಂಜೀವಶರ್ಮಾ ನಿರ್ದೇಶನದ ಕಲಿವೇಷಂ ಮಲಿಯಾಳಂ ನಾಟಕವನ್ನು ಕೇರಳಾದ ಸೋಪಾನ ತಂಡವು ಪ್ರದರ್ಶಿಸಲಿದೆ. ಫೆ. 16ರಂದು ಜಿತೇಂದ್ರ ದೇಶಪಾಂಡೆ ರಚನೆ ಹಾಗೂ ನಿರ್ದೇಶನದ ಶ್ವೇತವರ್ಣಿ ಶಾಮಕರ್ಣಿ ಮರಾಠಿ ನಾಟಕವನ್ನು ಕೊಲ್ಲಾಪುರದ ಅಭಿರುಚಿ ತಂಡವು ಪ್ರಸ್ತುತ ಪಡಿಸಲಿದೆ ಎಂದು ತಿಳಿಸಿದರು.
ಫೆ. 17ರಂದು ಜಿ.ಬಿ. ಜೋಶಿ ರಚಿಸಿದ ಹುಲುಗಪ್ಪ ಕಟ್ಟಿಮನಿ ನಿರ್ದೇಶನದಲ್ಲಿ ಸತ್ತವರ ನೆರಳು ನಾಟಕವನ್ನು ರಂಗಾಯಣದ ತಾತ್ಕಾಲಿಕ ರೆಪರ್ಟರಿ ಕಲಾವಿದರು ಪ್ರಸ್ತುತಪಡಿಸಿದರೆ, ಫೆ. 18ರಂದು ಕೆ.ವಿ. ಅಕ್ಷರ ಅವರು ರಚಿಸಿದ ಆಶೀಫ್ ಕ್ಷತ್ರೀಯ ಮತ್ತು ಶ್ವೇತಾ ಶ್ರೀನಿವಾಸ ನಿರ್ದೇಶನದ ಇದ್ದಾಗ ನಿಮ್ದು ಕದ್ದಾಗ ನಮ್ದು ಕನ್ನಡ ನಾಟಕವನ್ನು ಬೆಂಗಳೂರಿನ ಶ್ರೀನಿವಾಸ ತಂಡವು ಪ್ರದರ್ಶಿಸಲಿದೆ. ಫೆ. 19ರಂದು ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಆಶೀಫ್ ಕ್ಷತ್ರೀಯ ಮತ್ತು ಶ್ವೇತಾ ಶ್ರೀನಿವಾಸ ನಿರ್ದೇಶನದ ಧರ್ಮನಟಿ ಕನ್ನಡ ನಾಟಕವನ್ನು ಬೆಂಗಳೂರಿನ ರಂಗರಥ ಟ್ರಸ್ಟ್ ಪ್ರಸ್ತುತಪಡಿಸಲಿದೆ ಎಂದು ತಾಳಿಕೋಟಿ ತಿಳಿಸಿದರು.ರಂಗಾಯಣದ ಆಡಳಿತಾಧಿಕಾರಿ ಶಶಿಕಲಾ ಹುಡೇದ ಮಾತನಾಡಿ, ನಾಟಕ ಕಟ್ಟುವಲ್ಲಿ ಬಹುದೊಡ್ಡ ಶ್ರಮವಿದೆ. ಆದ್ದರಿಂದ ಪ್ರತಿ ನಾಟಕಕ್ಕೂ ₹ 100 ಪ್ರವೇಶ ದರ ಹಾಗೂ ಆರೂ ನಾಟಕಗಳಿಗಾಗಿ ₹ 500 ದರ ನಿಗದಿಪಡಿಸಲಾಗಿದೆ. ಎಲ್ಲ ನಾಟಕಗಳು ಪ್ರತಿದಿನ ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿವೆ. ನಾಟಕದ ಪೂರ್ವದಲ್ಲಿ ಪ್ರತಿದಿನ ಮಧುರವೇಣಿ ನೃತ್ಯಾಲಯ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ನೃತ್ಯ ಪ್ರದರ್ಶನವಿರುತ್ತದೆ ಎಂಬ ಮಾಹಿತಿ ನೀಡಿದರು. 8ರಂದು ಸತ್ತವರ ನೆರಳು..
ಜಡಭರತ ಎಂದ ಖ್ಯಾತನಾಮ ಜಿ.ಬಿ. ಜೋಶಿ ಅವರು ಕನ್ನಡ ಪ್ರಮುಖ ನಾಟಕಕಾರರಲ್ಲಿ ಒಬ್ಬರು. ಅವರ ಸತ್ತವರ ನೆರಳು ನಾಟಕವನ್ನು ಬಿ.ವಿ. ಕಾರಂತರು ಹೊರತುಪಡಿಸಿ ಮತ್ತಾರು ನಿರ್ದೇಶಿಸಲು ಸಾಧ್ಯವಾಗಿಲ್ಲ. ಈ ನಾಟಕವನ್ನು ಇದೀಗ ಕಾರಂತರ ಶಿಷ್ಯರಲ್ಲಿ ಒಬ್ಬರಾದ ತಾವು ಪ್ರಯತ್ನಿಸಿದ್ದೇವೆ. ರಂಗಾಯಣದ ಬಹುಭಾಷಾ ನಾಟಕೋತ್ಸವದಲ್ಲಿ ಫೆ. 17ರಂದು ಈ ನಾಟಕ ಪ್ರದರ್ಶನವಿದ್ದರೂ ಇದಕ್ಕೂ ಮುಂಚೆ ಫೆ. 8ರಂದು ಸೃಜನಾ ರಂಗಮಂದಿರದಲ್ಲಿ ಸಂಜೆ 6ಕ್ಕೆ ಆಯೋಜಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಒಟ್ಟು 20 ಪ್ರದರ್ಶನ ಹಮ್ಮಿಕೊಳ್ಳಲು ಯೋಜಿಸಲಾಗಿದೆ ಎಂದು ಹುಲುಗಪ್ಪ ಕಟ್ಟಿಮನಿ ಮಾಹಿತಿ ನೀಡಿದರು.