ಸಾರಾಂಶ
ನಮ್ಮ ದೇಶದಲ್ಲಿ ಹಿಂದೂ-ಮುಸ್ಲಿಮರು ಸಾಮರಸ್ಯದಿಂದ ಇದ್ದಾರೆ. ಆದರೆ ಕೆಲವು ಸಮಾಜಘಾತಕ ವ್ಯಕ್ತಿಗಳು ಅಶಾಂತಿ ಹರಡಲು ಪ್ರಯತ್ನಿಸುತ್ತಿದ್ದಾರೆ
ನರಗುಂದ: ಜಗತ್ತು ಬಹಳ ವೇಗವಾಗಿ ಬೆಳೆಯುತ್ತಿದೆ. ಆದ್ದರಿಂದ ಮುಸ್ಲಿಂ ಸಮಾಜದವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಜಿಪಂ, ಜಿಲ್ಲಾ ಆಡಳಿತ, ತಾಪಂಯ 2024-25ನೇ ಸಾಲಿನ ಅಲ್ಪಸಂಖ್ಯಾತರ ಕಾಲನಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ₹3 ಕೋಟಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. 30-40 ವರ್ಷಗಳಿಂದ ಮುಸ್ಲಿಂ ಸಮಾಜದವರು ತಾವು ವಾಸ ಮಾಡುವ ಗಲ್ಲಿಗಳು ಮತ್ತು ಕಬರಸ್ತಾನಕ್ಕೆ ಹೋಗುವ ರಸ್ತೆಗಳನ್ನು ಅಭಿವೃದ್ಧಿ ಮಾಡಬೇಕು ಎಂದು ಬೇಡಿಕೆ ಸಲ್ಲಿಸುತ್ತಿದ್ದರು. ಸಚಿವ ಜಮೀರ್ ಅಹಮದ್ ಖಾನ್ ಅವರು ವಿಶೇಷ ಆಸಕ್ತಿ ವಹಿಸಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು.ನಮ್ಮ ದೇಶದಲ್ಲಿ ಹಿಂದೂ-ಮುಸ್ಲಿಮರು ಸಾಮರಸ್ಯದಿಂದ ಇದ್ದಾರೆ. ಆದರೆ ಕೆಲವು ಸಮಾಜಘಾತಕ ವ್ಯಕ್ತಿಗಳು ಅಶಾಂತಿ ಹರಡಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಮುಸ್ಲಿಂ ಸಮಾಜದವರು ಸಮಾಜಘಾತಕ ವ್ಯಕ್ತಿಗಳ ಬಗ್ಗೆ ಬಹಳ ಜಾಗ್ರತರಾಗಿರಬೇಕು ಎಂದು ಕಿವಿಮಾತು ಹೇಳಿದರು.
40 ವರ್ಷ ನನ್ನ ರಾಜಕಾರಣದಲ್ಲಿ ಮುಸ್ಲಿಂ ಸಮಾಜದ ಅಭಿವೃದ್ಧಿಗೆ ವಿರೋಧ ಮಾಡಿಲ್ಲ. ಮುಸ್ಲಿಂ ಸಮಾಜದ ಸಮುದಾಯ ಭವನಕ್ಕೆ, ಮೌಲಾನ ಆಜಾದ್ ಶಾಲೆಗೆ ಹೆಚ್ಚಿನ ಅನುದಾನ ನೀಡಿದ್ದೇನೆ. ಆದರೆ ಪ್ರತಿ ಚುನಾವಣೆಯಲ್ಲಿ ನೀವು ಬೆಂಬಲಿಸುವ ಕಾಂಗ್ರೆಸ್ ಮಾಜಿ ಶಾಸಕರು ನಿಮ್ಮ ಸಮಾಜದ ಅಭಿವೃದ್ಧಿಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿಕೊಳ್ಳುವುದು ಅಗತ್ಯ ಎಂದು ಸಿ.ಸಿ. ಪಾಟೀಲ್ ಹೇಳಿದರು.ಮುಸ್ಲಿಂ ಸಮಾಜದವರು ಶಾಸಕ ಸಿ.ಸಿ. ಪಾಟೀಲ್ ಅವರನ್ನು ಗೌರವಿಸಿದರು. ಪುರಸಭೆ ಅಧ್ಯಕ್ಷ ನೀಲವ್ವ ವಡ್ಡಿಗೇರಿ, ಮಹೇಶ ಹಟ್ಟಿ, ಎಸ್.ಆರ್. ಪಾಟೀಲ, ಬಿ.ಆರ್. ಜೋರಂ, ಕೆ.ಬಿ. ಖಲೀಫ್, ಡಿ.ಎಂ. ನಾಯ್ಕರ, ಸಿದ್ದಪ್ಪ ಯಲಿಗಾರ, ದಿವಾನಸಾಬ ಸವಟಿಗಿ, ರಿಯಾಜ ಕೊಣ್ಣೂರ, ರಫೀಕ್ ಧಾರವಾಡ, ಗೌಡ ತಾಲೀಮನವರು, ಬಸವರಾಜ ಪವಾರ ಉಪಸ್ಥಿತರಿದ್ದರು.