ಸೋಮವಾರಪೇಟೆ: ಸಮೀಪದ ಐಗೂರಿನ ಶ್ರೀ ಮುತ್ತಪ್ಪ ದೇವರು ಹಾಗೂ ಪರಿವಾರ ದೈವಗಳ ಕೋಲ ಮತ್ತು ವೆಳ್ಳಾಟಂ ಸೇವೆಗಳು ಈಚೆಗೆ ಎರಡು ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ನಡೆಯಿತು.ಭಾನುವಾರ ಬೆಳಗ್ಗೆ ಗಣಪತಿ ಹೋಮದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಜೆ ಗುಳಿಗಪ್ಪ ದೇವಾಲಯದಿಂದ ಹೊರಟ ಭವ್ಯ ಮೆರವಣಿಗೆಯು ಚಂಡೆಮೇಳದ ಸದ್ದಿನೊಂದಿಗೆ ಐಗೂರಿನ ಮುಖ್ಯ ಬೀದಿಗಳಲ್ಲಿ ನಡೆಯಿತು. ರಾತ್ರಿ ಮುತ್ತಪ್ಪನ್, ತಿರುವಪ್ಪನ್, ಕುಟ್ಟಿಚಾತನ್ ಹಾಗೂ ಗುಳಿಗನ್ ವೆಳ್ಳಾಟಂ ಸೇವೆಗಳು ನಡೆದವು. ಉತ್ಸವದ ಎರಡನೇ ದಿನವಾದ ಬೆಳಿಗ್ಗೆ ವಿವಿಧ ದೈವಗಳ ಕೋಲ ಸೇವೆಗಳು ಆರಂಭವಾದವು. 3 ಗಂಟೆಗೆ ಗುಳಿಗನ ಕೋಲ, ಶ್ರೀ ಮುತ್ತಪ್ಪ ದೇವರ ಕೋಲ, ತಿರುವಪ್ಪನ್ ಕೋಲ ಹಾಗೂ ಕುಟ್ಟಿಚಾತನ್ ಕೋಲಗಳು ಸಾಂಗವಾಗಿ ನೆರವೇರಿದವು. ನಂತರ ನಡೆದ ಪೋದಿ ಕೋಲ, ಗುರು ಶ್ರೀ ತರ್ಪಣ ಕಾರ್ಯಕ್ರಮದೊಂದಿಗೆ ಈ ಬಾರಿಯ ಉತ್ಸವಕ್ಕೆ ತೆರೆ ಬಿತ್ತು. ಉತ್ಸವದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಮಹೇಶ್, ಕಾರ್ಯದರ್ಶಿ ವಿಜಯ್, ಉತ್ಸವ ಸಮಿತಿ ಅಧ್ಯಕ್ಷರಾದ ಮಣಿಕಂಠ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು, ಭಕ್ತಾದಿಗಳು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.ಎರಡು ದಿನಗಳ ಕಾಲ ನಡೆದ ಈ ಧಾರ್ಮಿಕ ಉತ್ಸವದಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.