ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಜಿಲ್ಲೆಗೆ ಅಪೂರ್ವ ಕೊಡುಗೆ ನೀಡಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಕೆ.ವಿ.ಶಂಕರಗೌಡರನ್ನು ಈ ನೆಲದ ಜನರು ಎಂದಿಗೂ ಮರೆಯಲಾರರು ಎಂದು ಬದುಕು ಬೆಳಕು ಸೇವಾ ಸಮಿತಿ ಅಧ್ಯಕ್ಷ ಎಚ್.ಆರ್.ಅರವಿಂದ್ ಹೇಳಿದರು.ನಗರಲ್ಲಿರುವ ಸರ್ಕಾರಿ ಪ್ರೌಢಶಾಲೆ (ಮಾಜಿ ಪುರಸಭೆ)ಯಲ್ಲಿ ಬದುಕು ಬೆಳಕು ಸೇವಾ ಸಮಿತಿ, ಅಖಿಲ ಕರ್ನಾಟಕ ಸಿರಿಗನ್ನಡ ಪ್ರತಿಷ್ಠಾನ ಆಯೋಜಿಸಿದ್ದ ಕೆ.ವಿ.ಶಂಕರಗೌಡ ಜನ್ಮದಿನಾಚರಣೆ ಅಂಗವಾಗಿ ಪ್ರಬಂಧ ಸ್ಪರ್ಧೆ, ಬಹುಮಾನ ವಿತರಣೆ ಮತ್ತು ಕೆ.ವಿ.ಶಂಕರಗೌಡ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಆಡಳಿತ ನಡೆಸುವವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಕೆ.ವಿ.ಶಂಕರಗೌಡರು ಮಾದರಿಯಾಗಿದ್ದಾರೆ. ಅಂತಹವರ ಕೊಡುಗೆ ಮತ್ತು ಸಾಧನೆಗಳನ್ನು ನೋಡಿ, ಕಲಿತು ಆಡಳಿತ ವ್ಯವಸ್ಥೆಯಲ್ಲಿ ಜಾರಿಗೊಳಿಸುವ ಅವಶ್ಯಕತೆ ಇದೆ. ಇಂದಿನ ರಾಜಕರಣ ಹಣದ ಮೇಲೆ ನಡೆಯುತ್ತಿದೆಯೇ ವಿನಃ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ನಿತ್ಯ ಸಚಿವ ಕೆ.ವಿಶಂಕರಗೌಡ ಅವರು ಸಹಕಾರಿಯಾಗಿ, ಶಾಸಕರಾಗಿ, ಸಂಸದರಾಗಿ, ಸಚಿವರಾಗಿ ಅಪಾರ ಕೊಡಗೆ ನೀಡಿದ್ದಾರೆ, ಸಾಕಷ್ಟು ಕ್ಷೇತ್ರಗಳನ್ನು ಅಭಿವೃದ್ಧಿಪಥದಲ್ಲಿ ಮುನ್ನಡೆಸಿದ್ದಾರೆ. ಅವರು ಕಟ್ಟಿರುವ ಶಿಕ್ಷಣ ಸಂಸ್ಥೆಗಳು, ಶಾಲಾ-ಕಾಲೇಜುಗಳು, ಆರೋಗ್ಯ ಕೇಂದ್ರಗಳೆಲ್ಲವೂ ಸಾಕ್ಷಿ ಗುಡ್ಡೆಗಳಾಗಿ ಇಂದಿಗೂ ಇವೆ. ರಾಷ್ಟ್ರಕವಿ ಕುವೆಂಪು ಅವರಿಂದ ನಿತ್ಯ ಸಚಿವ ಎಂದು ಬಿರುದು ಪಡೆದುಕೊಂಡಿರುವುದು ಅವರು ಕಾರ್ಯದಕ್ಷತೆಗೆ ಸಾಕ್ಷಿ ಎಂದರು.
ವೈದ್ಯಕೀಯ ಸೇವಾ ಕ್ಷೇತ್ರದಲ್ಲಿ ಅಪರೂಪದ ವೈದ್ಯರಾಗಿ ಡಾ.ಕೆ.ಎಂ.ಶಿವಕುಮಾರ್ ಸಾಧನೆ ಮಾಡಿದ್ದಾರೆ, ನಿವೃತ್ತಿ ಬಳಿಕವೂ ಇವರ ಸೇವೆಯು ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಸಾಗುತ್ತಿದೆ. ಅವರ ಸೇವೆ ಜನಮನ್ನಣೆಗೆ ಪಾತ್ರವಾಗಿದ್ದು, ಇನ್ನಷ್ಟು ಕಾಲ ಅವರು ಜನಪರವಾಗಿ ಆರೋಗ್ಯಸೇವೆ ನೀಡಲಿ ಎಂದು ಆಶಿಸಿದರು.ಇದೇ ವೇಳೆ ಮಿಮ್ಸ್ ನಿವೃತ್ತ ಪ್ರಾಂಶುಪಾಲ ಡಾ.ಕೆ.ಎಂ.ಶಿವಕುಮಾರ್ ಅವರಿಗೆ ಕೆ.ವಿ.ಶಂಕರಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಪಿಇಟಿ ನಿರ್ದೇಶಕ ಡಾ.ರಾಮಲಿಂಗಯ್ಯ, ಉದ್ಯಮಿ ಎಂ.ವಿನಯ್ಕುಮಾರ್, ಹಿರಿಯ ಸಹಶಿಕ್ಷಕ ಮಲ್ಲಿಕಾರ್ಜುನ್, ಅಖಿಲ ಕರ್ನಾಟಕ ಸಿರಿಗನ್ನಡ ಪ್ರತಿಷ್ಠಾನ ಅಧ್ಯಕ್ಷ ಎಂ.ಲೋಕೇಶ್ ಮತ್ತಿತರರಿದ್ದರು.