ಕನ್ನಡಪ್ರಭ ವಾರ್ತೆ ಮಧುಗಿರಿ

ದಾಬಸ್ ಪೇಟೆಯಿಂದ -ಮಧುಗಿರಿ-ಪಾವಗಡ ಮೂಲಕ ಬಳ್ಳಾರಿ ಸಂಪರ್ಕಿಸುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಿಸುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ಪಟ್ಟಣದ ಹೊರ ವಲಯದಲ್ಲಿ ತುಮಕೂರು-ರಾಯದುರ್ಗ ಹೊಸ ರೈಲು ಮಾರ್ಗ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಹೊಸ ಹೆದ್ದಾರಿ ನಿರ್ಮಾಣದಿಂದ ಈ ಭಾಗದ ರೈತರ ,ಸಂಚಾರ ವ್ಯಪಾರ ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಮಧುಗಿರಿ ರೈಲು ನಿಲ್ದಾಣಕ್ಕೆ ಮಧುಗಿರಿ ಎಂದೇ ನಾಮಕರಣ ಮಾಡಲಾಗುವುದು ಎಂದು ಘೋಷಿಸಿದ ಅವರು, ಮುಂದಿನ 15 ದಿನಗಳ ಒಳಗಾಗಿ 180 ಕೋಟಿ ರು.ವೆಚ್ಚದ ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. 2027ರ ಡಿಸೆಂಬರ್ ಒಳಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಧುಗಿರಿ ರೈಲು ನಿಲ್ದಾಣವನ್ನು ಉದ್ಘಾಟಿಸುವ ಗುರಿ ಹೊಂದಿದ್ದು, ಅದಕ್ಕೆ ಬೇಕಾದ ಅಗತ್ಯ ಕ್ರಮ ಕೈಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಮಧುಗಿರಿಯಲ್ಲಿ ರೈಲ್ವೆ ಟರ್ಮಿನಲ್ ಸ್ಥಾಪಿಸುವುದಾಗಿ ತಿಳಿಸಿ ಇದರಿಂದ ರೈತರು, ಕೂಲಿಕಾರ್ಮಿಕರು ವ್ಯಾಪಾರಿಗಳು ಕೈಗಾರಿಕೆಗಳಿಗೆ ಸರಕು ಸಾಗಾಣೆ ಸುಲಭವಾಗಿ ಆರ್ಥಿಕ ಚಟುವಟಿಕೆಗಳಿಗೆ ಮತ್ತಷ್ಠು ಉತ್ತೇಜನ ದೊರೆಯಲಿದೆ ಎಂದರು.

ಶಿರಾ ನಗರದಿಂದ ಬಡವನಹಳ್ಳಿ-ಮಧುಗಿರಿ ಮೂಲಕ ಭೈರೇನಹಳ್ಳಿ ಸಂಪರ್ಕಿಸುವ ರಾಷ್ಟ್ರಿಯ ಹೆದ್ದಾರಿ ಚತುಷ್ಪಥ ರಸ್ತೆ ಕಾಮಗಾರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು 675 ಕೋಟಿ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡುವುದಾಗಿ ತಿಳಿಸಿದರು. ಶಾಸಕ ಕೆ.ಎನ್.ರಾಜಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, 2012ರಲ್ಲಿಯೇ 24 ಎಕರೆ ಭೂಮಿಯನ್ನು ರೈಲು ಮಾರ್ಗ ನಿರ್ಮಾಣಕ್ಕೆ ರೈತರು ಜಮೀನು ಬಿಟ್ಟು ಕೊಟ್ಟಿದ್ದು ಇದೀಗ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿರುವುದು ಸಂತಸದ ವಿಚಾರ. ಭೂಮಿ ನೀಡಿದ ಎಲ್ಲಾ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ನೀರಾವರಿ ಅಭಿವೃದ್ಧಿಗೆ 120 ಕೋಟಿ ಅನುದಾನ ಮಂಜೂರಾಗಿದ್ದು, ಈ ಯೋಜನೆಗಳಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಇದರ ಕೀರ್ತಿ ಸೋಮಣ್ಣಗೆ ಸಲ್ಲಬೇಕು ಎಂದರು.


ಮಧುಗಿರಿಯನ್ನು ಜಿಲ್ಲೆಯಾಗಿಸುವ ಎಲ್ಲ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದ ಅವರು, ಕೊರಟಗೆರೆ, ಶಿರಾ, ಪಾವಗಡ ಹಾಗೂ ಮಧುಗಿರಿ ಈ ನಾಲ್ಕೂ ತಾಲೂಕುಗಳನ್ನು ಸೇರಿಸಿ ಮಧುಗಿರಿ ಜಿಲ್ಲೆಯನ್ನಾಗಿಸಬೇಕಿದೆ. ಅದೇ ರೀತಿ ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ಹಾಗೂ ಅರಸೀಕೆರೆ ಸೇರಿ ಜಿಲ್ಲೆಯಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಎಸಿ ಗೋಟೂರು ಶಿವ್ಪಪ್ಪ , ತಹಸೀಲ್ದಾರ್ ನಂದಿನಿ, ಪ್ರಸಾದ್, ಸೂರಜ್, ವಿಜಯ ಕುಮಾರ್, ಶ್ರೀನಿವಾಸ್, ರಾಜ್ ಗೋಪಾಲ್, ಜಿ.ಜೆ.ರಾಜಣ್ಣ, ಹನುಮಂತರೆಡ್ಡಿ, ಕೆ.ಎಸ್.ಪಾಂಡುರಂಗಾರೆಡ್ಡಿ, ಡಾ.ಎಂ.ಜಿ.ಶ್ರೀನಿವಾಕಸಮೂರ್ತಿ, ಎಲ್‌.ಸಿ.ನಾಗರಾಜು,ತುಂಗೋಟಿ ರಾಮಣ್ಣ, ಎಂ.ಕೆ.ನಂಜುಂಡರಾಜು, ಲಾಲಪೇಟೆ ಮಂಜುನಾಥ್, ಲಕ್ಷ್ಮೀಪತಿ ಸೇರಿದಂತೆ ಅನೇಕರಿದ್ದರು.