ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ನವಜಾತ ಶಿಶು ಸಪ್ತಾಹ- 2025 ಹಾಗೂ ನ್ಯುಮೋನಿಯಾ ಜಾಗೃತಿ ಅಭಿಯಾನ- 2025 ಕಾರ್ಯಕ್ರಮ ವೆನ್ಲಾಕ್ ಆಸ್ಪತ್ರೆಯ ಆರ್ಎಪಿಸಿಸಿ ಸಭಾಂಗಣದಲ್ಲಿ ನಡೆಯಿತು.
ಮಂಗಳೂರು: ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ನವಜಾತ ಶಿಶು ಸಪ್ತಾಹ- 2025 ಹಾಗೂ ನ್ಯುಮೋನಿಯಾ ಜಾಗೃತಿ ಅಭಿಯಾನ- 2025 ಕಾರ್ಯಕ್ರಮ ವೆನ್ಲಾಕ್ ಆಸ್ಪತ್ರೆಯ ಆರ್ಎಪಿಸಿಸಿ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ಕೆ.ಎಂ.ಸಿ ಆಸ್ಪತ್ರೆ ಮಕ್ಕಳ ತಜ್ಞೆ ಡಾ.ಸುಜೇತ ರಾವ್ ಮಾತನಾಡಿ, ನವಜಾತ ಶಿಶು ಆರೈಕೆಯೊಂದಿಗೆ ನ್ಯುಮೋನಿಯಾ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುವುದು ಸರ್ಕಾರದ ಮುಖ್ಯ ಉದ್ದೇಶ. ಪ್ರತಿಯೊಬ್ಬ ತಾಯಂದಿರು ಮಗುವಿನ ಆರೈಕೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ಶಿಶು ಮರಣವನ್ನು ತಡೆಹಿಡಿಯಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವೆನ್ಲಾಕ್ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ಸುಧಾಕರ್ ಮಾತನಾಡಿ, ಕೆಲವೊಂದು ಸಮಯದಲ್ಲಿ ನವಜಾತ ಶಿಶು ಆರೈಕೆಯಲ್ಲಿ ಅವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿ, ಶಿಶುವನ್ನು ತಾಯಂದಿರೇ ಅನಾರೋಗ್ಯಕ್ಕೆ ಒಳಪಡಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಆದ್ದರಿಂದ ಮೂಢನಂಬಿಕೆಯನ್ನು ಹೋಗಲಾಡಿಸಿ, ತಾಯಂದಿರಿಗೆ ಆರಂಭಿಕ ಹಂತದಲ್ಲಿ ಗರ್ಭಿಣಿ ಹಂತದಿಂದಲೇ ನವಜಾತ ಶಿಶುವಿನ ಆರೈಕೆ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಉಳೆಪಾಡಿ ಪ್ರಾಸ್ತಾವಿಕ ಮಾತನಾಡಿದರು. ವೆನ್ಲಾಕ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಕೃಷ್ಣ, ಪೌಷ್ಠಿಕ ಪುನಶ್ಚೇತನ ಕೇಂದ್ರದ ವೈದ್ಯಾಧಿಕಾರಿ ಡಾ.ದೀಕ್ಷಾ, ಪಿಐಸಿಯು ವೈದ್ಯಾಧಿಕಾರಿ ಡಾ.ಜನಾರ್ಧನ ಶೆಣೈ, ಎನ್.ಐ.ಸಿ.ಯು. ವೈದ್ಯಾಧಿಕಾರಿ ಡಾ.ಸಿಂಚನಾ, ವೆನ್ಲಾಕ್ ನರ್ಸಿಂಗ್ ಕಾಲೇಜು ಉಪ ಪ್ರಾಂಶುಪಾಲೆ ಗೀತಾ ಇದ್ದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಲಿಯಮ್ಮ ಸ್ವಾಗತಿಸಿ, ನಿರೂಪಿಸಿದರು.