ಸಾರಾಂಶ
ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನೆಹರು ಅವರ ಪುಣ್ಯಸ್ಮರಣೆ ಆಚರಿಸಲಾಯಿತು.
ಕನ್ನಡಪ್ರ ಭಾರ್ತೆ, ಚಿತ್ರದುರ್ಗ
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನೆಹರು ಅವರ ಪುಣ್ಯಸ್ಮರಣೆ ಆಚರಿಸಲಾಯಿತು. ನೆಹರು ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಿಸಲಾಯಿತು.ಬಳಿಕ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ ಫೀರ್, ದೇಶದ ಮೊದಲ ಪ್ರಧಾನಿ ಯಾಗಿದ್ದ ಪಂಡಿತ್ ಜವಾಹರ ಲಾಲ್ ನೆಹರು ರವರು ಕೃಷಿ, ಶಿಕ್ಷಣ, ಕೈಗಾರಿಕೆಗೆ ಒತ್ತು ಕೊಟ್ಟಿದ್ದರು. ಕುಟುಂಬ ರಾಜಕಾರಣ ಎಂದಿಗೂ ಮಾಡಲಿಲ್ಲ. ಅವರ ನಿಧನದ ನಂತರ ಮಗಳು ಇಂದಿರಾಗಾಂಧಿ ದೇಶದ ಪ್ರಧಾನಿ ಯಾಗಬೇಕಾಯಿತೆಂದರು.
ಮಹಾತ್ಮಗಾಂಧಿ, ಮೌಲಾನಾ ಅಬ್ದುಲ್ ಕಲಾಂ, ಸರ್ದಾರ್ ವಲ್ಲಭ ಭಾಯಿ ಪಟೇಲ್, ಡಾ.ಬಾಬುಜಗಜೀವನರಾಂ ಇವರುಗಳ ಜೊತೆ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ನೆಹರುರವರು ಎಐಸಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ದೇಶ ಸಂಕಷ್ಟದಲ್ಲಿದ್ದ ಪರಿಸ್ಥಿತಿಯಲ್ಲಿ ಪಂಚ ವಾರ್ಷಿಕ ಯೋಜನೆ ಜಾರಿಗೆ ತಂದು ಅನೇಕ ಡ್ಯಾಂಗಳನ್ನು ಕಟ್ಟಿಸಿ ಸ್ಟೀಲ್ ಪ್ಲಾಂಟ್, ಕೈಗಾರಿಕೆ ಆರಂಭಿಸಿದರು. ಮೂರು ಅವಧಿಗೆ ದೇಶದ ಪ್ರಧಾನಿಯಾಗಿದ್ದ ನೆಹರುರವರಲ್ಲಿ ದೂರ ದೃಷ್ಟಿಯಿತ್ತು ಎಂದರು.ನೆಹರುರವರು ಕುಟುಂಬ ರಾಜಕಾರಣ ಮಾಡಿದರೆಂದು ಬಿಜೆಪಿ ಯವರು ಅಪಪ್ರಚಾರ ಮಾಡುತ್ತಿದ್ದಾರೆ. ದೇಶ ಹಾಗೂ ಪಕ್ಷವನ್ನು ಮುನ್ನಡೆಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದ್ದುದರಿಂದ ಇಂದಿರಾಗಾಂಧಿ ಹತ್ಯೆ ನಂತರ ಅವರ ಪುತ್ರ ರಾಜೀವ್ ಗಾಂಧಿ ದೇಶದ ಪ್ರಧಾನಿಯಾದರು. ಈಗ ಸೋನಿಯಾಗಾಂಧಿ, ರಾಹುಲ್ಗಾಂಧಿ, ಪ್ರಿಯಾಂಕಗಾಂಧಿ ಇವರುಗಳು ಪಕ್ಷ ಉಳಿಸುವುದಕ್ಕಾಗಿ ಸಾರಥ್ಯ ವಹಿಸಿಕೊಂಡಿದ್ದಾರೆಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್ಕುಮಾರ್, ಡಿ.ಎನ್.ಮೈಲಾರಪ್ಪ, ಉಪಾಧ್ಯಕ್ಷ ಎಸ್.ಎನ್.ರವಿಕುಮಾರ್, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್, ಚಿದಾನಂದಮೂರ್ತಿ ಪುಣ್ಯಸ್ಮರಣೆಯಲ್ಲಿ ಭಾಗವಹಿಸಿದ್ದರು.