ನಿಟ್ಟೆ ಮದೆನಾಡುವಿನಲ್ಲಿ ಜವಳಿ ಪಾರ್ಕ್ ಯೋಜನೆಯ ಶಂಕುಸ್ಥಾಪನೆ ನಡೆದು ಮೂರು ವರ್ಷಗಳಾದರೂ ಇದುವರೆಗೂ ಯಾವುದೇ ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾಗಿಲ್ಲ. ಯೋಜನೆ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಸ್ಥಳೀಯ ಜನರಲ್ಲಿ ತೀವ್ರ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಬೆಳ್ಳಿಪ್ಪಾಡಿ ನೇಮಿರಾಜ ರೈ ಹೇಳಿದ್ದಾರೆ.

ಕಾರ್ಕಳ: ನಿಟ್ಟೆ ಮದೆನಾಡುವಿನಲ್ಲಿ ಜವಾಳಿ ಪಾರ್ಕ್ ಯೋಜನೆಯ ಶಂಕುಸ್ಥಾಪನೆ ನಡೆದು ಮೂರು ವರ್ಷಗಳಾದರೂ ಇದುವರೆಗೂ ಯಾವುದೇ ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾಗಿಲ್ಲ. ಯೋಜನೆ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಸ್ಥಳೀಯ ಜನರಲ್ಲಿ ತೀವ್ರ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಬೆಳ್ಳಿಪ್ಪಾಡಿ ನೇಮಿರಾಜ ರೈ ಹೇಳಿದ್ದಾರೆ.

ಅವರು‌ ಕಾರ್ಕಳ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. “ಚುನಾವಣೆ ಉದ್ದೇಶಕ್ಕಾಗಿ ತರಾತುರಿಯಲ್ಲಿ ಶಂಕುಸ್ಥಾಪನೆ ನಡೆಸಿ ಜನರನ್ನು ಮಂಗ ಮಾಡಲಾಗಿದೆ. ಇದೊಂದು ವಿಶ್ವಾಸದ್ರೋಹದ ನಾಟಕ ಎಂದು ಆರೋಪಿಸಿದರು. ಈ ಯೋಜನೆಯನ್ನು ನಿಟ್ಟೆಯಿಂದ ಬೇರೆ ಕಡೆಗೆ ವರ್ಗಾಯಿಸುವ ಹುನ್ನಾರ ನಡೆಯುತ್ತಿದೆ . ಸುನಿಲ್ ಕುಮಾರ್ ಅವರು ಈ ಯೋಜನೆಯನ್ನು ಎತ್ತಂಗಡಿ ಮಾಡುವ ಮೂಲಕ ನಿಟ್ಟೆಯ ಜನರ ಅನ್ನದ ಬಟ್ಟಲಿಗೆ ಕಲ್ಲು ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ನೇಮಿರಾಜ ರೈ ಟೀಕಿಸಿದರು.ಈ ಜವಳಿ ಪಾರ್ಕ್ ಯೋಜನೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 20 ಕೋಟಿ ರು. ಮೊತ್ತದ ಯೋಜನೆಯಾಗಿದ್ದು, ನಂತರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ 27 ಕೋಟಿ ರು.ಗೆ ಹೆಚ್ಚಿಸಲಾಗಿತ್ತು. ಬಜೆಟ್‌ನಲ್ಲಿಯೂ ಯೋಜನೆಗೆ ಮನ್ನಣೆ ನೀಡಲಾಗಿತ್ತು. ಆದರೂ ಕಾರ್ಯಾರಂಭವಾಗದೇ ಇರುವುದರಿಂದ ಯೋಜನೆಯ ಹೆಸರಿನಲ್ಲಿ ಕೋಟ್ಯಾಂತರ ರು. ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಸುಮಾರು ಎರಡು ಕೋಟಿ ರು. ದುರುಪಯೋಗವಾಗಿದೆ ಎಂಬ ಅನುಮಾನವೂ ವ್ಯಕ್ತವಾಗಿದೆ.

“ನಡವಳಿಕೆಯ ಮೂಲಕ ಜನರನ್ನು ಮೂರ್ಖರನ್ನಾಗಿಸಲಾಗಿದೆ. ವಿಶ್ವಾಸದ್ರೋಹವೆಸಗಿದವರು ಇದಕ್ಕೆ ಉತ್ತರಿಸಬೇಕು, ಎಂದು ಮಾತನಾಡಿದ ನೇಮಿರಾಜ ರೈ, ನಿಟ್ಟೆಯ ಜನರು ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳಬೇಕೆಂದು ಕರೆ ನೀಡಿದರು. ಕಾಂಗ್ರೆಸ್ ಸರ್ಕಾರವು ಈ ಯೋಜನೆಯನ್ನು ಪೂರ್ಣಗೊಳಿಸುವ ಜವಾಬ್ದಾರಿ ವಹಿಸಬೇಕು ಮತ್ತು ನಡೆದಿರುವ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಅನಂದ ಜೋಸೆಫ್ ಮದೆನಾಡು, ಮೊಹಮ್ಮದ್ ಹಸನ್ ನಿಟ್ಟೆ, ಶರತ್ ಶೆಟ್ಟಿ ಮದೆನಾಡು‌ ಉಪಸ್ಥಿತರಿದ್ದರು.