ಹೊಸಕೋಟೆ: ಕೇಂದ್ರದಲ್ಲಿ ಯುಪಿಎ ಸರ್ಕಾರದ ನೇತೃತ್ವದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಜಾರಿಗೆ ತಂದಿದ್ದ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆ ಹೆಸರನ್ನು ಬದಲಾಯಿಸಿ ಯೋಜನೆಯನ್ನೇ ಕಗ್ಗೊಲೆ ಮಾಡಲು ಕೇಂದ್ರ ಸರ್ಕಾರ ಹೊರಟಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಆರೋಪಿಸಿದರು.

ಹೊಸಕೋಟೆ: ಕೇಂದ್ರದಲ್ಲಿ ಯುಪಿಎ ಸರ್ಕಾರದ ನೇತೃತ್ವದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಜಾರಿಗೆ ತಂದಿದ್ದ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆ ಹೆಸರನ್ನು ಬದಲಾಯಿಸಿ ಯೋಜನೆಯನ್ನೇ ಕಗ್ಗೊಲೆ ಮಾಡಲು ಕೇಂದ್ರ ಸರ್ಕಾರ ಹೊರಟಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಆರೋಪಿಸಿದರು.

ತಾಲೂಕಿನ ಮುತ್ಕೂರು ಗ್ರಾಮದಲ್ಲಿ ನರೇಗಾ ಕಾಮಗಾರಿ ವೀಕ್ಷಣೆಗೆ ಆಗಮಿಸಿದ್ದ ಎಐಸಿಸಿ ರಾಜ್ಯ ಉಸ್ತುವಾರಿ ಕಾರ್ಯದರ್ಶಿ ಅಭಿಷೇಕ್ ದತ್ತ ಅವರಿಗೆ ಮಾಹಿತಿ ನೀಡಿದ ಬಳಿಕ ವಿಭಾ ಜಿ ರಾಮ್ ಜಿ ಯೋಜನೆಯನ್ನು ವಿರೋಧಿಸಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಯುಪಿಎ ಸರ್ಕಾರದ ಅವಧಿಯಲ್ಲಿ ನರೇಗಾವನ್ನು ಉದ್ಯೋಗ ದಾನವಲ್ಲ, ಹಕ್ಕು ಎಂಬ ತತ್ವದ ಮೇಲೆ ಕಾಯ್ದೆ ರೂಪಿಸಿದ್ದರು. ಯುಪಿಎ ಅವಧಿಯಲ್ಲಷ್ಟೇ ಅಲ್ಲ, ಇತಿಹಾಸದಲ್ಲಿಯೂ ಗಂಗರು, ಹೊಯ್ಸಳರು, ವಿಜಯನಗರ, ಮೈಸೂರು ಮಹಾರಾಜರು ಜನರಿಗೆ ಕೆಲಸ ನೀಡಿ ಸ್ವಾಭಿಮಾನ ಕಾಪಾಡುವ ಪರಂಪರೆ ರೂಢಿಸಿಕೊಂಡಿದ್ದರು. ನರೇಗಾ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಲಕ್ಷಾಂತರ ಮಾನವ ದಿನಗಳ ಉದ್ಯೋಗ ದಕ್ಕುತ್ತಿತ್ತು. ಅನಗೊಂಡನಹಳ್ಳಿ ಗ್ರಾಪಂನಲ್ಲಿ 2024–25ರಲ್ಲಿ 5280 ಮಾನವ ದಿನಗಳ ಗುರಿ ನೀಡಲಾಗಿ 14692 ಮಾನವ ದಿನಗಳ ಗುರಿ ತಲುಪಿದ್ದೆವು. ಈ ಹಣ ನೇರ ಕಾರ್ಮಿಕರ ಖಾತೆಗಳಿಗೆ ಜಮೆ ಆಗಿದೆ ಎಂದರು.

ಪ್ರಧಾನಿ ಮೋದಿ ನರೇಗಾ ಯೋಜನೆಯನ್ನು ಕುರಿತು ಕಾಂಗ್ರೆಸ್ ದೇಶವನ್ನು ಅಭಿವೃದ್ದಿಪಡಿಸಿದ್ದರೆ ಜನರಿಗೆ ಗುಂಡಿ ತೋಡುವ ಕೆಲಸ ಕೊಡುವ ಯೋಜನೆ ಏಕೆ ಬೇಕಾಗಿತ್ತು ಎಂದು ಪ್ರಶ್ನಿಸಿದ್ದರು. ಮನರೇಗಾ ಕಾಂಗ್ರೆಸ್ ಸರ್ಕಾರದ ವೈಫಲ್ಯದ ಸ್ಮಾರಕವಾಗಿದ್ದು ಈ ಯೋಜನೆ ರದ್ದು ಮಾಡುವುದಿಲ್ಲ. ಅದು ಕಾಂಗ್ರೆಸ್ ಆಡಳಿತದ ದೌರ್ಬಲ್ಯಗಳ ನೆನೆಪಿಗಾಗಿ ಉಳಿಯಬೇಕು ಎಂದಿದ್ದರು. ಆದರೆ ಈಗ ಹೆಸರು ಬದಲಾಯಿಸಿ ಗ್ರಾಮಸಭೆಗಳ ಅಧಿಕಾರ ಕಡಿತಗೊಳಿಸಿ, ದೆಹಲಿ ಮಟ್ಟದಲ್ಲಿ ಯೋಜನೆಗಳನ್ನು ನಿರ್ಧರಿಸುತ್ತಿದೆ. ರಾಜ್ಯಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಹಾಕುತ್ತಿದೆ. ಆದ್ದರಿಂದ ಕೇಂದ್ರದ ಜನವಿರೋಧಿ ನೀತಿಗಳ ವಿರುದ್ಧ ಗ್ರಾಪಂ ಮಟ್ಟದಲ್ಲಿ ಸಭೆ ನಡೆಸಿ ಬೃಹತ್ ಹೋರಾಟ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದರು.

ಎಐಸಿಸಿ ಕರ್ನಾಟಕ ಉಸ್ತುವಾರಿ ಕಾರ್ಯದರ್ಶಿ ಅಭಿಷೇಕ್ ದತ್ತ ಮಾತನಾಡಿ, ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಮನರೇಗಾ ಯೋಜನೆ ಜಾರಿಗೊಳಿಸಿತ್ತು. ಅದರೆ ಈಗ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಯೋಜನೆಗಳ ಹೆಸರು ಬದಲಾಯಿಸಿ ಒಡೆದು ಆಳುವ ನೀತಿ ಅನುಸರಿಸಿ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ. ಕೇಂದ್ರ ಸರ್ಕಾರ ಮನರೇಗಾ ಹೆಸರು ಬದಲಾವಣೆ ರಾಜಕೀಯ ಖಂಡನೀಯ. ಗ್ರಾಮೀಣರಿಗೆ ಹಾಗೂ ಬಡವರಿಗೆ ಅನುಕೂಲವಾಗಿದ್ದ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸದೆ ಹೆಸರು ಬದಲಾಯಿಸ ಹೊರಟಿದೆ. ಕೇಂದ್ರ ಸರ್ಕಾರದ ಈ ನಡೆ ವಿರೋಧಿಸಿ ಕಾಂಗ್ರೆಸ್‌ ಜ.28ರಂದು ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು ಕಾರ್ಯಕರ್ತರು ಬೆಂಬಲ ನೀಡಬೇಕು ಎಂದರು.

ಗ್ರಾಪಂ ಅಧ್ಯಕ್ಷ ಮುತ್ಕೂರು ಸಂತೋಷ್, ಕಾಂಗ್ರೆಸ್ ಮುಖಂಡ ಬಿ.ಎಂ.ಪ್ರಕಾಶ್, ಬಿಎಂಆರ್‌ಡಿಎ ಅಧ್ಯಕ್ಷ ಕೇಶವಮೂರ್ತಿ, ಸದಸ್ಯ ಎಚ್.ಎಂ.ಸುಬ್ಬರಾಜ್ ಇತರರು ಹಾಜರಿದ್ದರು.

ಫೋಟೋ: 25 ಹೆಚ್‌ಎಸ್‌ಕೆ

ಹೊಸಕೋಟೆ ತಾಲೂಕಿನ ಮುತ್ಕೂರು ಗ್ರಾಮಕ್ಕೆ ಭೇಟಿ ನೀಡಿದ್ದ ಎಐಸಿಸಿ ಕರ್ನಾಟಕ ಉಸ್ತುವಾರಿ ಕಾರ್ಯದರ್ಶಿ ಅಭಿಷೇಕ್ ದತ್ತ ನರೇಗಾದಡಿ ಅಭಿವೃದ್ಧಿ ಪಡಿಸಿರುವ ಕಲ್ಯಾಣಿಯನ್ನು ವೀಕ್ಷಿಸಿದರು. ಶಾಸಕ ಶರತ್ ಬಚ್ಚೇಗೌಡ ಇತರರಿದ್ದರು.