ನ್ಯಾಮತಿ: ಟೋಲ್‌ ಶುಲ್ಕ ವಿನಾಯಿತಿಗೆ ಒತ್ತಾಯಿಸಿ ಮನವಿ

| Published : Oct 11 2024, 11:57 PM IST

ನ್ಯಾಮತಿ: ಟೋಲ್‌ ಶುಲ್ಕ ವಿನಾಯಿತಿಗೆ ಒತ್ತಾಯಿಸಿ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಸುತ್ತಕೋಟೆ, ಕಲ್ಲಾಪುರ ಮಧ್ಯಭಾಗದಲ್ಲಿ ನಿರ್ಮಿಸಿರುವ ಟೋಲ್‌ಗೇಟಿನಲ್ಲಿ ತಾಲೂಕಿನ ಜನರು ಸಂಚರಿಸಲು ಟೋಲ್‌ ವಿನಾಯಿತಿ ನೀಡುವಂತೆ ಆಗ್ರಹಿಸಿ ಬಂಜಾರ ವಿದ್ಯಾರ್ಥಿ ಸಂಘ ವತಿಯಿಂದ ಅಧ್ಯಕ್ಷ ಮಂಜು ನಾಯಕ ನೇತೃತ್ವದಲ್ಲಿ ಕೆಆರ್‌ಡಿಸಿಎಲ್‌ ಕಾರ್ಯಪಾಲಕ ಎಂಜಿನಿಯರಿಗೆ ಮನವಿ ಸಲ್ಲಿಸಲಾಯಿತು.

ನ್ಯಾಮತಿ: ತಾಲೂಕಿನ ಸುತ್ತಕೋಟೆ, ಕಲ್ಲಾಪುರ ಮಧ್ಯಭಾಗದಲ್ಲಿ ನಿರ್ಮಿಸಿರುವ ಟೋಲ್‌ಗೇಟಿನಲ್ಲಿ ತಾಲೂಕಿನ ಜನರು ಸಂಚರಿಸಲು ಟೋಲ್‌ ವಿನಾಯಿತಿ ನೀಡುವಂತೆ ಆಗ್ರಹಿಸಿ ಬಂಜಾರ ವಿದ್ಯಾರ್ಥಿ ಸಂಘ ವತಿಯಿಂದ ಅಧ್ಯಕ್ಷ ಮಂಜು ನಾಯಕ ನೇತೃತ್ವದಲ್ಲಿ ಕೆಆರ್‌ಡಿಸಿಎಲ್‌ ಕಾರ್ಯಪಾಲಕ ಎಂಜಿನಿಯರಿಗೆ ಮನವಿ ಸಲ್ಲಿಸಲಾಯಿತು.

ತಾಲೂಕಿನ ಸವಳಂಗ ಮೂಲಕ ಹಾದುಹೋಗುವ ಶಿವಮೊಗ್ಗ ಮುಖ್ಯ ರಸ್ತೆಯ ಸುತ್ತಕೋಟೆ, ಕಲ್ಲಾಪುರದ ಮಧ್ಯದಲ್ಲಿ ಟೋಲ್‌ ಗೇಟ್‌ ನಿರ್ಮಿಸಲಾಗಿದೆ. ಶಿವಮೊಗ್ಗ- ಶಿಕಾರಿಪುರ- ಹಾನಗಲ್‌ ಮಾರ್ಗದ ಈ ರಸ್ತೆ ರಾಜ್ಯ ಹೆದ್ದಾರಿಯಾಗಿದೆ. ನ್ಯಾಮತಿ ತಾಲೂಕಿನ ಸಾರ್ವಜನಿಕರು ಪ್ರತಿನಿತ್ಯ ಶಿವಮೊಗ್ಗದ ಆಸ್ಪತ್ರೆಗಳು, ವಿದ್ಯಾರ್ಥಿಗಳು ಶಾಲೆ- ಕಾಲೇಜುಗಳು, ರೈತರು ತರಕಾರಿ ಮಾರುಕಟ್ಟೆಗಳು, ಕೃಷಿ ಮಾರುಕಟ್ಟೆಗಳು, ವ್ಯಾಪಾರಿಗಳು ಮಾಲು ಖರೀದಿಸಲು, ಕೂಲಿ ಕಾರ್ಮಿಕರು ವಿವಿಧ ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದಾರೆ. ಆ ಮೂಲಕ ಇಲ್ಲಿ ದಿನವೂ ನೂರಾರು ವಾಹನಗಳು ಸಂಚರಿಸುತ್ತಿವೆ. ಇವರಿಗೆಲ್ಲ ಟೋಲ್‌ ಕಟ್ಟುವುದು ಹೊರೆಯಾಗಲಿದೆ ಎಂದರು.

ಇಂದು ಪೆಟ್ರೋಲ್‌, ಡೀಸೆಲ್‌, ವಾಹನ ಬಿಡಿ ಭಾಗಗಳು ಸೇರಿದಂತೆ ಎಲ್ಲ ವಸ್ತುಗಳೂ ಏರುಗತಿಯಲ್ಲಿವೆ. ಇದರ ನಡುವೆ ಕೇವಲ 30 ಕಿ.ಮೀ. ದೂರದ ಶಿವಮೊಗ್ಗಕ್ಕೆ ಹೋಗಿ ಬರಲು ಟೋಲ್‌ ಕಟ್ಟಲು ಸಾರ್ವಜನಿಕರಿಗೆ ಹೊರೆಯಾಗುತ್ತಿದೆ. ತಾಲೂಕಿನ ಜನರಿಗೆ ಟೋಲ್‌ ವಿನಾಯಿತಿ ನೀಡುವಂತೆ ಮನವಿ ನೀಡುತ್ತಿದ್ದೇವೆ. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಟೋಲ್‌ ಬಳಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಸಂಘಟನೆ ಉಪಾಧ್ಯಕ್ಷ ಕಿರಣ್‌ ನಾಯ್ಕ, ಕಾರ್ಯದರ್ಶಿ ನಾಗರಾಜ್‌ ನಾಯಕ, ಸವಳಂಗ ಗ್ರಾ.ಪಂ. ಸದಸ್ಯ ನಾಗರಾಜ್‌ ನಾಯಕ, ರೇಣುಕಾ ನಾಯ್ಕ, ರಾಮನಾಯಕ, ಗೋಕುಲ, ಪ್ರದೀಪ್‌, ಚೇತನ್‌ ಕುಮಾರ್‌ ಮತ್ತಿತರರು ಇದ್ದರು.