ಕನ್ನಡಪ್ರಭ ವಾರ್ತೆ ಬೇಲೂರು

ವಿಶ್ವವಿಖ್ಯಾತ ಶ್ರೀ ಚನ್ನಕೇಶವಸ್ವಾಮಿ ರಥೋತ್ಸವದ ಅಂಗವಾಗಿ ಶಾಸಕ ಎಚ್ ಕೆ ಸುರೇಶ್ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.ಬೇಲೂರು ಶ್ರೀ ಚನ್ನಕೇಶವ ಸ್ವಾಮಿ ಬ್ರಹ್ಮರಥೋತ್ಸ ಮಂಗಳವಾರ ಹಾಗು ನಾಡ ರಥೋತ್ಸವದ ಬುಧವಾರ ನಡೆಯಲಿದ್ದು ಬಂದಂತ ಭಕ್ತರಿಗೆ ಯಾವುದೇ ರೀತಿಯ ಲೋಪದೋಷವಾಗದಂತೆ ವ್ಯವಸ್ಥೆ ಮಾಡಬೇಕು. ಕಲ್ಯಾಣಿ, ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ ಹಾಗೂ ದೇವಸ್ಥಾನ ಸುತ್ತಮುತ್ತ ಸ್ವಚ್ಚತೆ ಕುಡಿಯುವ ನೀರಿನ ವ್ಯವಸ್ಥೆ , ದೇಗುಲದ ಒಳಭಾಗದಲ್ಲಿ ನೆಲಹಾಸು ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವವಿಖ್ಯಾತ ೯೦೦ ವರ್ಷಗಳ ಇತಿಹಾಸ ಇರುವಂತೆ ಈ ನಮ್ಮ ದೇವಾಲಯಕ್ಕೆ ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಅವರಿಗೆ ಕಿಂಚಿತ್ತೂ ಲೋಪವಾಗದಂತೆ ಕ್ರಮ ಕೈಗೊಳ್ಳುವುದು ಅಧಿಕಾರಿಗಳ ಕರ್ತವ್ಯ. ಜಾತ್ರೆ ಸಂದರ್ಭದಲ್ಲಿ ಯಾವುದೇ ರೀತಿಯ ಲೋಪದೋಷಗಳಾದರೆ ಅಧಿಕಾರಿಗಳೆ ನೇರ ಹೊಣೆ. ಇನ್ನು ಕುಡಿಯುವ ನೀರು ಕಲ್ಯಾಣಿ ಸುತ್ತಮುತ್ತ ಹಾಗು ಶೌಚಾಲಯ ವ್ಯವಸ್ಥೆ ಅಚ್ಚು ಕಟ್ಟಾಗಿ ಮಾಡಿದ್ದು ಸಿಸಿ ಕ್ಯಾಮರಾ ನಾಲ್ಕು ಭಾಗಗಳಲ್ಲಿ ಅಳವಡಿಸಲಾಗಿದೆ‌. ಪಾರ್ಕಿಂಗ್ ವ್ಯವಸ್ಥೆಯಲ್ಲಿ ಈಗಾಗಲೇ ಉತ್ತಮವಾಗಿ ನಿರ್ವಹಿಸುತ್ತಿದ್ದು ಸ್ಥಳೀಯರ ಸಹಕಾರ ಅತಿ ಮುಖ್ಯ.ರಥೋತ್ಸವ ಸಂದರ್ಭಗಳಲ್ಲಿ ಯಾವುದೆ ವಾಹನಗಳನ್ನು ದೇವಾಲಯದ ಬಳಿ ಬಿಡದಂತೆ ಸೂಚಿಸಿದರು. ಶಿಷ್ಟಾಚಾರ ಯಾವುದೇ ಕಾರಣಕ್ಕು ಉಲ್ಲಂಘನೆ ಮಾಡಬಾರದು ಒಂದು ವೇಳೆ ಆದರೆ ಅದರ ವಿರುದ್ದ ಹಕ್ಕು ಚ್ಯುತಿ ಮಂಡಿಸುತ್ತೇನೆ, ಸಣ್ಣ ಪುಟ್ಟ ಲೋಪದೋಷ ಆದರೆ ಅದನ್ನು ಬಗೆಹರಿಸಲು ಸೂಚಿಸುತ್ತೇನೆ ಎಂದರು. ರಥದ ಮೇಲೆ ಕುಳಿತಿದ್ದಕ್ಕೆ ಕ್ಷಮೆಯಾಚನೆ:

ಕಳೆದ ವರ್ಷ ರಥೋತ್ಸವ ಸಂದರ್ಭದಲ್ಲಿ ಯಾರೋ ಮಾಡಿದ ತಪ್ಪಿಗೆ ನಾನು ರಥದಲ್ಲಿ ಕುಳಿತು ತೆರಳಿದ್ದೆ. ಇದರಿಂದ ‌ನನ್ನ ಮನಸ್ಸಿಗೆ ತುಂಬಾ ನೋವಾಗಿದ್ದು ನಾನು ಭಗವಂತನಲ್ಲಿ ಕ್ಷಮೆ ಯಾಚಿಸಿದ್ದೇನೆ. ಅಲ್ಲದೆ ಬಹಿರಂಗವಾಗಿ ತಾಲೂಕಿನ ಜನರಲ್ಲಿ ಕ್ಷಮೆ ಕೇಳುತ್ತಿದ್ದು ಇದು ಭಗವಂತನ ಉತ್ಸವ ಜನತೆಯ ಉತ್ಸವವಲ್ಲ. ಇದನ್ನು ಪ್ರತಿಯೊಬ್ಬರು ಅರಿಯಬೇಕು ಎಂದರು.ಈ ಸಂದರ್ಭದಲ್ಲಿ ಪುರಸಭೆ ಪ್ರಭಾರ ಅಧ್ಯಕ್ಷೆ ಉಷಾ ಸತೀಶ್, ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಅಶೋಕ್, ಉಪವಿಭಾಗಧಿಕಾರಿ ಮಂಜುನಾಥ್, ತಹಸೀಲ್ದಾರ್‌ ಶ್ರೀಧರ್ ಕಂಕನವಾಡಿ, ಕಾರ್ಯನಿರ್ವಹಣಾಧಿಕಾರಿ ಯೋಗೇಶ್, ಸಿಪಿಐ ರೇವಣ್ಣ, ಮುಖ್ಯಾಧಿಕಾರಿ ಬಸವರಾಜು ಶಿಗ್ಗಾವಿ, ಲೋಹಿತ್, ವಲಯ ಅರಣ್ಯಾಧಿಕಾರಿ ಯತೀಶ್ ಇತರರು ಇದ್ದರು.